ದೂಧ್ ಸಾಗರ್ಗೆ ಪ್ರವಾಸಿಗರ ನಿಷೇಧ; ಷರತ್ತುಗಳು ಅನ್ವಯ
ಪಣಜಿ, ಜುಲೈ 23; ದೂಧ್ ಸಾಗರ್ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಹೋಗಿ ಸಿಲುಕಿರುವ ಘಟನೆ ಕಳೆದ ವಾರ ನಡೆದಿತ್ತು. ದಕ್ಷಿಣ ಗೋವಾ ಜಿಲ್ಲಾಡಳಿತ ರೈಲು ಮಾರ್ಗದ ಮೂಲಕ ಸಾಗಿ ದೂಧ್ ಸಾಗರ್ ವೀಕ್ಷಣೆ ಮಾಡುವುದಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಅಶ್ವಿನ್ ಚಂದ್ರು ಈ ಕುರಿತು ಆದೇಶ ಹೊರಡಿಸಿದ್ದಾರೆ. ದೂಧ್ ಸಾಗರ್ ಭೇಟಿಗೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿ ಶನಿವಾರ ಆದೇಶಿಸಿದ್ದಾರೆ. ಕೆಲವೊಂದು ಷರತ್ತುಗಳನ್ನು ಸಹ ಹಾಕಲಾಗಿದೆ.

ಕಾಲ್ನಡಿಗೆ, ಚಾರಣ, ರೈಲು ಮಾರ್ಗದ ಮೂಲಕ ಸಾಗಿ ದೂಧ್ ಸಾಗರ್ ತಲುಪುವುದಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಅನ್ವಯ ಈ ಆದೇಶ ಹೊರಡಿಸಲಾಗಿದೆ. ಪೊಲೀಸ್, ಅರಣ್ಯ ಇಲಾಖೆ, ರೈಲ್ವೆ ಇಲಾಖೆಯ ಅಧಿಕಾರಿ/ ಸಿಬ್ಭಂದಿಗಳಿಗೆ ಕರ್ತವ್ಯದ ಮೇಲೆ ಸಾಗಲು ಮಾತ್ರ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.
ಸಾವಿರಾರು ಪ್ರವಾಸಿಗರು ಬಂದಿದ್ದರು; ಕಳೆದ ಭಾನುವಾರ ಭಾರೀ ಮಳೆಯ ನಡುವೆಯೇ ಸಾವಿರಾರು ಪ್ರವಾಸಿಗರು ದೂಧ್ ಸಾಗರ್ಗೆ ಆಗಮಿಸಿದ್ದರು. ಎಲ್ಲರೂ ರೈಲು ಹಳಿಗಳ ಮೇಲೆ ಸಾಗುತ್ತಿದ್ದರು. ಬೆರಳೆಣಿಕೆಯಲ್ಲಿದ್ದ ರೈಲು ಸಿಬ್ಬಂದಿಗಳಿಗೆ ಅವರನ್ನು ನಿಯಂತ್ರಿಸುವುದು ಸವಾಲಾಗಿತ್ತು. ಈ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿ, ಚಾರಣಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.
ಆದರೆ ಅರಣ್ಯ ಇಲಾಖೆಯು ನಿಗದಿಪಡಿಸಿದ ಪ್ರವೇಶ ದ್ವಾರಗಳ ಮೂಲಕ ಪ್ರವೇಶ ಶುಲ್ಕ ಪಾವತಿ ಮಾಡಿ ಸಾಗುವ ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ ಅರಣ್ಯ ಇಲಾಖೆ ವಿಧಿಸುವ ಷರತ್ತುಗಳನ್ನು ಅವರು ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.
ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಸದ್ಯ ಭಾರೀ ಮಳೆಯಾಗುತ್ತಿರುವುದರಿಂದ ಅರಣ್ಯದ ಮೂಲಕ ಸಾಗುವ ಮಾರ್ಗವನ್ನು ಸಹ ಬಂದ ಮಾಡಲಾಗಿದೆ. ಅರಣ್ಯ ಇಲಾಖೆ ಸಿಬ್ಭಂದಿಗಳು ಯಾವ ಮಾರ್ಗದ ಮೂಲಕ ಪ್ರವಾಸಿಗರನ್ನು ಸುರಕ್ಷಿತವಾಗಿ ಕಳಿಸಬಹುದು ಎಂದು ಯೋಜನೆ ರೂಪಿಸುತ್ತಿದ್ದಾರೆ.
ಅರಣ್ಯ ಮತ್ತು ರೈಲ್ವೆ ಇಲಾಖೆ ಜಂಟಿ ಚೆಕ್ಪೋಸ್ಟ್ ತೆರೆದು ಪ್ರವಾಸಿಗರನ್ನು ನಿಯಂತ್ರಿಸುವ ಕೆಲಸವನ್ನು ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅನುಮತಿ ಇಲ್ಲದ ವ್ಯಕ್ತಿಗಳು ದೂಧ್ ಸಾಗರ್ ಜಲಪಾತದ ಬಳಿಗೆ ಬರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈಲ್ವೆ ಇಲಾಖೆ ಸಹ ಪ್ರವಾಸಿಗರು ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ರೈಲ್ವೆ ಸುರಕ್ಷತಾ ಪೊಲೀಸರು ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಿದ್ದು, ದೂಧ್ ಸಾಗರ್ ನಿಲ್ದಾಣದಲ್ಲಿ ಪ್ರವಾಸಿಗರು ಇಳಿಯದಂತೆ ಎಚ್ಚರವಹಿಸಲಿದೆ. ಅಲ್ಲದೇ ಹಳಿಗಳ ಮೇಲೆ ಪ್ರವಾಸಿಗರು ಸಾಗದಂತೆ ತಡೆಯಲು ಸಹ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ದೂಧ್ ಸಾಗರ್ಗೆ ಭೇಟಿ ನೀಡದಂತೆ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಲಾಗುತ್ತಿದೆ.
ಆದೇಶದ ವಿವರಗಳು
* ದೂಧ್ ಸಾಗರ್ ರೈಲು ನಿಲ್ದಾಣ, ದೂಧ್ ಸಾಗರ್ ಜಲಪಾತ, ಜಲಪಾತಕ್ಕೆ ತಲುಪುವ ರೈಲು ಸೇತುವೆ ಮೇಲೆ ಪ್ರವಾಸಿಗರು, ಚಾರಣಿಗರು ಸೇರಿದಂತೆ ಎಲ್ಲರ ಸಂಚಾರ ಸಂಪೂರ್ಣ ನಿಷೇಧ. ಪೊಲೀಸರು, ರೈಲ್ವೆ ಇಲಾಖೆಯವರು, ಕರ್ತವಯದಲ್ಲಿರುವ ಅಧಿಕಾರಿ/ ಸಿಬ್ಬಂದಿ ಮಾತ್ರ ಸಂಚಾರ ನಡೆಸಬಹುದು.
* ದೂಧ್ ಸಾಗರ್ಗೆ ಸಾಗಲು ಅರಣ್ಯ ಇಲಾಖೆ ಗೊತ್ತುಪಡಿಸಿದ ಮಾರ್ಗದಲ್ಲಿ ಸಾಗಲು ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಅರಣ್ಯ ಇಲಾಖೆ ಹಾಕುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. (ಆದರೆ ಈಗ ಭಾರೀ ಮಳೆಯ ಕಾರಣ ಅರಣ್ಯ ಇಲಾಖೆಯು ಮಾರ್ಗವನ್ನು ಮುಚ್ಚಿದೆ)
* ಕುಳೆ, ಕ್ಯಾಸಲ್ ರಾಕ್, ಸೋನಾವಲಿ ಮತ್ತು ಕರಂಜೋಲ್ನಲ್ಲಿ ಅರಣ್ಯ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ಚೆಕ್ಪೋಸ್ಟ್ ಸ್ಥಾಪನೆ ಮಾಡಲಿದೆ. ಇಲ್ಲಿಂದ ಪ್ರವಾಸಿಗರು ಸಾಗದಂತೆ ಎಚ್ಚರವಹಿಸಲಾಗುತ್ತದೆ.
* ನೈಋತ್ಯ ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾಡಲಿದೆ. ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಶ್ ಭಾಷೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿರುವ ಕುರಿತು ಪ್ರಕಟಣೆಯನ್ನು ಹಾಕಲಾಗುತ್ತದೆ.
* ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ, ನೌಕರರು, ಅಧಿಕಾರಿಗಳಿಗೆ, ಸಿಬ್ಭಂದಿಗಳಿಗೆ ಕಿರುಕುಳ ನೀಡಿದರೆ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.












Click it and Unblock the Notifications