ಚಾಮರಾಜನಗರದ ಬಾಣಹಳ್ಳಿ ಸತ್ಯವತಿ ದೇವಿಗೆ ಕೆಂಡದಿಂದಲೇ ನೈವೇದ್ಯ!
ಚಾಮರಾಜನಗರ, ಜನವರಿ 21: ನಿಗಿ, ನಿಗಿ ಕೆಂಡದ ಮೇಲೆ ಹೂ ಸುರಿದರೂ ಬಾಡುವುದಿಲ್ಲ... ಕೆಂಡವನ್ನು ಜೋಳಿಗೆಗೆ ಸುರಿದರೂ ಅದು ಸುಡುವುದಿಲ್ಲ..ದೇವಿಗೆ ಇಲ್ಲಿ ಬೆಂಕಿ ಕೆಂಡವೇ ನೈವೇದ್ಯ..ಇದೆಲ್ಲವನ್ನು ಕೇಳಿದ ಮೇಲೆ ಆ ದೇವಿಯ ಪವಾಡ ನಮ್ಮನ್ನು ಅಚ್ಚರಿಗೆ ದೂಡ ಬಹುದು ಅಷ್ಟೆ ಅಲ್ಲ ದೈವತ್ವದ ಶಕ್ತಿ ಅರಿವಾಗಿ ಭಕ್ತಿ ನಮ್ಮಲ್ಲಿ ಮೂಡಬಹುದು..ವಿಜ್ಞಾನದ ನಾಗಲೋಟದ ನಡುವೆ ದೇವರ ಪವಾಡಗಳು ಬೇರೆ ಬೇರೆ ರೂಪದಲ್ಲಿ ನಡೆಯುತ್ತಲೇ ಇರುತ್ತದೆ. ಅದು ನಮಗೆ ಹಬ್ಬ, ಹರಿದಿನ, ಜಾತ್ರೆಗಳಲ್ಲಿ ಕಾಣಸಿಗುತ್ತದೆ.
ಸಾಮಾನ್ಯವಾಗಿ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಕೆಲವು ದೇವರ ಶಕ್ತಿ ಮತ್ತು ಪವಾಡಗಳು ಹೊರಗೆ ಬರುತ್ತವೆ. ದೈವಶಕ್ತಿ ಏನೆಂಬುದು ಆಗ ಗೊತ್ತಾಗುತ್ತದೆ. ಈಗಂತು ಗ್ರಾಮ ದೇವತೆಗಳ ಹಬ್ಬ ಎಲ್ಲೆಡೆ ನಡೆಯುತ್ತಿದ್ದು, ಗ್ರಾಮಗಳು ಜಾತ್ರೆ. ರಥೋತ್ಸವದ ಸಂಭ್ರಮದಲ್ಲಿವೆ. ಪ್ರತಿಯೊಂದು ದೇವತೆಗಳು ತನ್ನದೇ ಆದ ಪವಾಡ ಹೊಂದಿದ್ದು, ತನ್ನನ್ನು ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಿವೆ. ಇಂತಹ ದೇವತೆಗಳ ಜಾತ್ರೆ ಪೈಕಿ ಚಾಮರಾಜನಗರ ಜಿಲ್ಲೆಯ ಬಾಣಹಳ್ಳಿ ಗ್ರಾಮದಲ್ಲಿರುವ ಸತ್ಯವತಿಯ ದೇವಿಯ ಕೊಂಡೋತ್ಸವ ಒಂದಾಗಿದೆ.

ದೇವರಿಗೆ ಕೊಂಡೋತ್ಸವ ಎಲ್ಲೆಡೆಯೂ ನಡೆಯುತ್ತದೆ ಆದರೆ ಸತ್ಯವತಿ ದೇವಿಯ ಕೊಂಡೋತ್ಸವ ಮಾತ್ರ ಇತರೆಡೆಗಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಜಾತ್ರೆ, ರಥೋತ್ಸವ ಹೀಗೆ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ ಸತ್ಯವತಿ ದೇವಿಯ ಕೊಂಡೋತ್ಸವಕ್ಕೆ ತಪ್ಪಿಸಿಕೊಳ್ಳದೆ ಜನರು ಆಗಮಿಸಿ, ಭಕ್ತಿ ಭಾವ ಮೆರೆಯುವುದರೊಂದಿಗೆ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ.
ಮನೆಮಾತಾದ ಸತ್ಯವತಿಯ ಪವಾಡ
ಈಗಂತೂ ಜಾತ್ರೆ, ರಥೋತ್ಸವ, ಗ್ರಾಮ ದೇವತೆಗಳ ಹಬ್ಬದ ಕಾಲವಾಗಿದ್ದು, ಎಲ್ಲೆಡೆಯೂ ಹಬ್ಬಗಳು ವಿಭಿನ್ನ ಮತ್ತು ವಿಶಿಷ್ಟವಾಗಿ ನಡೆಯುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಮದೇವತೆಗಳ ಪವಾಡಗಳು ಮಾತ್ರ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತಿವೆ. ಚಾಮರಾಜನಗರ ಜಿಲ್ಲೆಯ ಹಲವೆಡೆ ನಡೆಯುವ ಜಾತ್ರೆಗಳಲ್ಲಿ ತನ್ನದೇ ಆದ ಪವಾಡಗಳು ನಡೆಯುವುದನ್ನು ಕಾಣಬಹುದು. ಅದರಲ್ಲಿಯೂ ಸಂತೇಮರಹಳ್ಳಿ ಸಮೀಪವಿರುವ ಬಾಣಹಳ್ಳಿ ಗ್ರಾಮದ ಗ್ರಾಮ ದೇವತೆ ಸತ್ಯವತಿಯ ಪವಾಡವಂತು ಭಕ್ತರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.
ಚಾಮರಾಜನಗರದಲ್ಲಿ ಸತ್ಯವತಿ ದೇವಿಯ ಪವಾಡ ಮನೆಮಾತಾಗಿದ್ದು, ಬೆಂಕಿಯಲ್ಲಿ ಹಾಕಿದ ಹೂವು ಬಾಡದೆ ಉಳಿಯುವುದು, ಬಟ್ಟೆಯ ಜೋಳಿಗೆಯಲ್ಲಿ ಬೆಂಕಿಯ ಕೆಂಡ ಹಾಕಿದರೂ ಏನೂ ಆಗದಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದೆ. ಇಷ್ಟಕ್ಕೂ ಚಾಮರಾಜನಗರ ಜಿಲ್ಲೆಯು ಪವಾಡ ಪುರುಷರು ನೆಲೆಸಿರುವ ಪುಣ್ಯಭೂಮಿಯಾಗಿದ್ದು ಇಲ್ಲಿ ಪವಾಡಗಳಿಗೇನು ಕಡಿಮೆ ಇಲ್ಲ. ಪ್ರತಿವರ್ಷವೂ ಬಾಣಹಳ್ಳಿ ಗ್ರಾಮದಲ್ಲಿ ಸತ್ಯವತಿಯ ದೇವಿಯ ಕೊಂಡೋತ್ಸವ ನಡೆಯುತ್ತದೆ. ಈ ವೇಳೆ ಎರಡು ಅಚ್ಚರಿಯ ಘಟನೆಗೆಳಿಗೆ ನಡೆಯುತ್ತಿದ್ದು ಇದಕ್ಕೆ ಸ್ಥಳದಲ್ಲಿ ನೆರೆದ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ.

ಕೊಂಡೋತ್ಸವದ ಸಿದ್ಧತೆಗಳು ಹೇಗಿರುತ್ತವೆ?
ಇಲ್ಲಿ ನಡೆಯುವ ಕೊಂಡೋತ್ಸವದ ಬಗ್ಗೆ ಮತ್ತು ಅದರ ವಿಶೇಷತೆಗಳ ಬಗ್ಗೆ ನೋಡುತ್ತಾ ಹೋದರೆ ಅಚ್ಚರಿಯಾಗುತ್ತದೆ. ಕೊಂಡೋತ್ಸವಕ್ಕೆ ಹಲವು ದಿನಗಳ ಹಿಂದೆಯೇ ಸಿದ್ಧತೆ ಆರಂಭವಾಗುತ್ತದೆ. ಬಸವೇಶ್ವರ ದೇ ದೇವಸ್ಥಾನ ಆವರಣದಲ್ಲಿ ಕೊಂಡೋತ್ಸವಕ್ಕೆಂದೇ ಹುಣಸೆಮರ ಸೇರಿದಂತೆ ನಾನಾ ಮರಗಳ ಸೌದೆಯನ್ನು ಸಂಗ್ರಹಿಸಲಾಗುತ್ತದೆ. ಇದಕ್ಕೆ ವಿಶೇಷ ಪೂಜೆ ಸಲ್ಲಿಸಿ ಆರ್ಚಕರು ಕೊಂಡೋತ್ಸವಕ್ಕೆ ಅಗ್ನಿ ಸ್ಪರ್ಶ ಮಾಡುತ್ತಾರೆ. ಆ ನಂತರ ದೇವಸ್ಥಾನ ಆವರಣದಲ್ಲಿ ಸತ್ಯವತಿ ವಿಗ್ರಹ ಹಾಗೂ ಸತ್ತಿಗೆ ಸೂರಿಪಾನಗಳನ್ನು ಸ್ವಚ್ಫಗೊಳಿಸಿ ನಾನಾ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ.
ಇದಾದ ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸತ್ಯವತಿ ವಿಗ್ರಹ ಹಾಗೂ ಕೊಳಗದಿಂದ ಕೆಂಡವನ್ನು ಅಳೆಯುವ ಹರಕೆ ಹೊತ್ತ ಮಹಿಳೆ ಸೇರಿದಂತೆ ಆರ್ಚಕರನ್ನು ಸತ್ತಿಗೆ ಸೂರಿಪಾನಿಗಳ ಮೂಲಕ ದೇವಸ್ಥಾನ ಆವರಣ ಬರಮಾಡಿಕೊಳ್ಳಲಾಗುತ್ತದೆ. ಸತ್ಯದೇವತೆ ವಿಗ್ರಹವನ್ನು ಕೊಂಡೋತ್ಸವ ಮುಂದೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನ ಒಳಗೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಹರಕೆ ಹೊತ್ತ ಮಹಿಳೆ ಕೆಂಡವನ್ನು ಕೊಳಗ ಮೂಲಕ ತುಂಬಿಕೊಂಡು ದೇವಿಗೆ ಕೆಂಡದ ಮೂಲಕ ನೈವೇದ್ಯ ಮೂಲಕ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕೊಳಗದಲ್ಲಿ ಕೆಂಡವನ್ನು ಜೋಳಿಗೆಗೆ ತುಂಬುವುದನ್ನು ನೋಡುವುದೇ ಒಂದು ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.
ಕೊಳಗದಲ್ಲಿ ಕೆಂಡ ಅಳೆದು ದೇವಿಗೆ ನೈವೇದ್ಯ
ಆಚರಣೆ ಬಗ್ಗೆ ನೋಡುವುದಾದರೆ ಕೊಂಡೋತ್ಸವದ ದಿನ ಗ್ರಾಮದ ಎಲ್ಲ ಬೀದಿಗಳಲ್ಲಿ ದೇವರ ಮೆರವಣಿಗೆ ನಡೆಯುತ್ತದೆ. ಅತ್ತ ದೇವಾಲಯದ ಅರ್ಚಕರು ಕೈಯಲ್ಲಿ ಕೊಳಗ ಹಿಡಿದು ಅದರಲ್ಲಿ ಹೂವುಗಳನ್ನು ಹಾಕಿಕೊಂಡು ದೇವಾಲಯದ ಹೊರಾಂಗಣದಲ್ಲಿ ಹಾಕಿದ್ದ ಕೊಂಡದ ಸುತ್ತ ಭಕ್ತಿ ಪರವಶರಾಗಿ ಪ್ರದಕ್ಷಿಣೆ ಹಾಕುತ್ತಾರೆ. ಇದೇ ವೇಳೆ ಬೆಂಕಿ ಕೆಂಡದ ಮೇಲೆ ಹೂವುಗಳನ್ನು ಹಾಕುತ್ತಾರೆ. ಆದರೆ ಬೆಂಕಿಯ ಮೇಲೆ ಹಾಕಿದ ಹೂವು ಬಾಡದೆ ಎಲ್ಲರ ಅಚ್ಚರಿಗೆ ಕಾರಣವಾಗುತ್ತದೆ.
ಆ ನಂತರ ಕೊಳಗದಲ್ಲಿ ಕೆಂಡವನ್ನು ಅಳೆದು ಬಟ್ಟೆಯ ಜೋಳಿಗೆಯಲ್ಲಿ ಹಾಕಿಕೊಂಡು ಸತ್ಯವತಿ ದೇವರಿಗೆ ನೈವೇಧ್ಯ ಇಡಲು ದೇವಾಲಯಕ್ಕೆ ತೆರಳುತ್ತಾರೆ ಇದು ನೋಡುಗರನ್ನು ಅಚ್ಚರಿ ಪಡಿಸುವುದಲ್ಲದೇ ಸತ್ಯವತಿ ದೇವಿಯ ಪವಾಡಕ್ಕೆ ಸಾಕ್ಷಿಯಾಗುತ್ತದೆ. ಎಲ್ಲ ಭಕ್ತರು ಕೂಡ ದೇವರನ್ನು ಈ ವೇಳೆ ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಇನ್ನು ಹಬ್ಬದ ವೇಳೆ ಬಾಣಹಳ್ಳಿಯಲ್ಲಿ ವಾರಗಳ ಕಾಲ ಯಾವುದೇ ಮನೆಯಲ್ಲಿ ಅಡುಗೆಗೆ ಒಗ್ಗರಣೆ ಹಾಕದೆ ಹಲವು ರೀತಿಯ ವೃತಾಚರಣೆ ಮಾಡುತ್ತಾರೆ. ಹಬ್ಬದಂದು ಎಲ್ಲರೂ ಒಂದೆಡೆ ನೆರೆದು ದೇವಿಗೆ ಪೂಜೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಹಬ್ಬಾಚರಣೆ ಮಾಡುತ್ತಾರೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications