Vande Bharat Express: ವಂದೇ ಭಾರತ್ ರೈಲು ಸೇವೆಯನ್ನು ಬೆಳಗಾವಿವರೆಗೂ ವಿಸ್ತರಿಸಲು ತಯಾರಿ
ಹುಬ್ಬಳ್ಳಿ, ನವೆಂಬರ್, 08: ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದ ವಂದೇ ಭಾರತ್ ರೈಲು ಸೇವೆಯನ್ನು ಈಗ ಬೆಳಗಾವಿಗೂ ವಿಸ್ತರಿಸಲು ಚಿಂತನೆ ನಡೆದಿದ್ದು, ಪೂರ್ವ ತಯಾರಿ ಸಹ ನಡೆದಿದೆ.
ಈ ಭಾಗದ ಜನರು ವಂದೇ ಭಾರತ ರೈಲ್ವೆ ಸಂಚಾರವನ್ನು ಬೆಳಗಾವಿಬರೆಗೂ ವಿಸ್ತಾರ ಮಾಡಬೇಕು ಎಂದು ಒತ್ತಾಯ ಮಾಡಿದ್ದರು. ಬೆಂಗಳೂರ -ಬೆಳಗಾವಿ ನಡುವೆ ಸದ್ಯದಲ್ಲೇ ಈ ರೈಲಿನ ಪ್ರಾಯೋಗಿಕ ಸಂಚಾರ ಆರಂಭವಾಗಲಿದ್ದು, ಇದು ಯಶಸ್ವಿಯಾದಲ್ಲಿ ಖಾಯಂ ಸಂಚಾರ ಪ್ರಾರಂಭಗೊಳ್ಳುವ ನಿರೀಕ್ಷೆಯಿದೆ. ದೇಶದ ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುತ್ತಿರುವ ವಂದೇ ಭಾರತ್ ರೈಲು ವೇಗದ ಸಂಚಾರ ಮತ್ತು ಅತ್ಯುತ್ತಮ ಸೌಕರ್ಯಗಳಿಂದ ಪ್ರಸಿದ್ದಿ ಪಡೆಯುತ್ತಿದೆ.

ಬೆಂಗಳೂರ -ಹುಬ್ಬಳ್ಳಿ -ಧಾರವಾಡ ನಡುವೆ ಜೂನ್ 27ರಿಂದ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಗೊಂಡಿದೆ. ಆದರೆ ಬೆಳಗಾವಿಯವರೆಗೆ ವಿಸ್ತರಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿರಲಿಲ್ಲ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಬೇಡಿಕೆಗೆ ಮಣಿದ ರೈಲ್ವೇ ಇಲಾಖೆ ಕೊನೆಗೂ ಬೆಳಗಾವಿಗೆ ಸಂಚಾರ ಪ್ರಾರಂಭಿಸುವ ಚಿಂತನೆ ನಡೆಸಿದೆ.
ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಯೋಜನೆ 2022ರ ಆರಂಭದಲ್ಲೇ ರೂಪುಗೊಂಡಿತ್ತು. ಅಂದಿನಿಂದಲೇ ಈ ಭಾಗದ ರೈಲ್ವೇ ಹೋರಾಟಗಾರರು, ಸಂಘ ಸಂಸ್ಥೆಯವರು ಬೆಳಗಾವಿಗೂ ವಿಸ್ತರಿಸುವಂತೆ ಒತ್ತಾಯಿಸುತ್ತಾ ಬಂದಿದ್ದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಆಗಮಿಸಿದ್ದ ವೇಳೆ ವಂದೇ ಭಾರತ್ ರೈಲನ್ನು ಬೆಳಗಾವಿಗೆ ವಿಸ್ತರಿಸುವ ಭರವಸೆ ನೀಡಿದ್ದರು. ಆದರೆ, ಈ ಬೇಡಿಕೆ ಈಡೇರಿರಲಿಲ್ಲ.
ವಂದೇ ಭಾರತ್ ರೈಲು ಘೋಷಣೆಯಾದ ದಿನದಿಂದಲೇ ರೈಲನ್ನು ಬೆಳಗಾವಿಗೆ ವಿಸ್ತರಿಸುವಂತೆ ಈ ಭಾಗದ ಜನಪ್ರತಿನಿಧಿಗಳು, ಸಂಸದರು, ಸಾರ್ವಜನಿಕರು ಸತತ ಮನವಿ ಸಲ್ಲಿಸುತ್ತಲೇ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವೇ ನಡೆದಿದೆ. ಇನ್ನು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಸಹ ಒತ್ತಾಯ ಮಾಡಿದ್ದರು.
ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಉತ್ತರ ಕರ್ನಾಟಕದ ಆಯಕಟ್ಟಿನ ಸ್ಥಳದಲ್ಲಿರುವ ನಗರವಾಗಿದೆ. 10 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೊಂದಿರುವ ಬೆಳಗಾವಿ ಫೌಂಡ್ರಿ, ಹೈಡ್ರಾಲಿಕ್ಸ್ ಮತ್ತು ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕೆಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.
ವಿಶ್ವೇಶ್ವರಯ್ಯ ತಾಂತ್ರಿಕ ಶಿಕ್ಷಣ ವಿಶ್ವವಿದ್ಯಾಲಯ ಸೇರಿದಂತೆ ಹಲವು ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳು ಬೆಳಗಾವಿಯಲ್ಲಿವೆ. ಈ ಎಲ್ಲ ಕಾರಣಗಳಿಗಾಗಿ ಬೆಂಗಳೂರು-ಬೆಳಗಾವಿ ನಡುವೆ ಪ್ರತಿನಿತ್ಯ ಸಾವಿರಾರು ಜನ ಪ್ರಯಾಣ ನಡೆಸುತ್ತಿದ್ದು, ಈ ಹಿನ್ನೆಲೆ ಈ ಮಾರ್ಗದಲ್ಲಿ ಉತ್ತಮ ಸಾರಿಗೆ ಸೌಲಭ್ಯದ ಅಗತ್ಯವಿದೆ.
ಬೆಂಗಳೂರು-ಬೆಳಗಾವಿ ನಡುವೆ ಶೀಘ್ರದಲ್ಲೇ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯಲಿದೆ. ಇದು ಯಶಸ್ವಿಯಾದಲ್ಲಿ ಖಾಯಂ ಆಗಿ ಬೆಳಗಾವಿಗೆ ವಂದೇ ಭಾರತ್ ಸೇವೆ ಲಭ್ಯವಾಗಲಿದೆ ಎನ್ನುತ್ತಾರೆ ರಾಜ್ಯ ಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು.
ವಂದೇ ಭಾರತ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಿಸಿದರೆ ರೈಲಿನ ನಿರ್ವಹಣೆಗೆ ಸಮಯದ ಅಭಾವ ಎದುರಾಗಲಿದೆ ಎಂದು ರೈಲ್ವೇ ಇಲಾಖೆ ನೆಪ ಹೇಳುತ್ತಿತ್ತು. ರೈಲು ಪ್ರತಿ ದಿನ ಬೆಳಗ್ಗೆ 5:45ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12:15 ಕ್ಕೆ ಧಾರವಾಡಕ್ಕೆ ತಲುಪಲಿದ್ದು, ಮಧ್ಯಾಹ್ನ 1:15ಕ್ಕೆ ಧಾರವಾಡದಿಂದ ಹೊರಟು ಸಂಜೆ 8:15 ಕ್ಕೆ ಬೆಂಗಳೂರು ತಲುಪುವ ವೇಳಾ ಪಟ್ಟಿ ಹೊಂದಿದೆ.
ಆದರೆ ಪ್ರಸ್ತುತ ಬೆಳಗ್ಗೆ 5:45ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 11:30ಕ್ಕೆ ಧಾರವಾಡ ತಲುಪುತ್ತಿದೆ. ಧಾರವಾಡದಿಂದ 1:15ಕ್ಕೆ ಹೊರಟು ಅಸಂಕೆ 7:30ಕ್ಕೆ ಬೆಂಗಳೂರಿಗೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು ಎರಡು ಗಂಟೆ ಉಳಿತಾಯವಾಗುತ್ತಿದೆ. ಇದೇ ಅವಧಿಯನ್ನು ಬೆಳಗಾವಿಯವರೆಗೆ ರೈಲು ಸಂಚಾರಕ್ಕೆ ಬಳಸಿಕೊಳ್ಳಬಹುದು. ಇದರಿಂದ ರೈಲಿನ ನಿರ್ವಹಣೆಗೆ ತೊಂದರೆಯಾಗುವುದಿಲ್ಲ ಎಂಬುದು ಬೆಳಗಾವಿ ಜನರ ಅಭಿಪ್ರಾಯ ಆಗಿದೆ.












Click it and Unblock the Notifications