Pallaki Bus; NWKRTC 4 ಹೊಸ ಮಾರ್ಗದಲ್ಲಿ ಬಸ್, ದರ ವೇಳಾಪಟ್ಟಿ
ಹುಬ್ಬಳ್ಳಿ, ಫೆಬ್ರವರಿ 11: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಉತ್ತರ ಕರ್ನಾಟಕವನ್ನು ವಿವಿಧ ಸ್ಥಳಗಳಿಗೆ ಸಂಪರ್ಕಿಸಲು ನೂತನ ಹವಾನಿಯಂತ್ರಣ ರಹಿತ ಪಲ್ಲಕ್ಕಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ.
ಒಟ್ಟು ನಾಲ್ಕು ಮಾರ್ಗದಲ್ಲಿ ಪಲ್ಲಕ್ಕಿ ಮಾದರಿಯ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗಿದ್ದು, ಮಾರ್ಗ, ದರ ಮತ್ತು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಯಾಣಿಕರು ನೂತನ ಬಸ್ ಸೇವೆಯ ಉಪಯೋಗ ಪಡೆಯಬೇಕು ಎಂದು ಮನವಿ ಮಾಡಲಾಗಿದೆ.

ನೂತನ ಬಸ್ಗಳು ಹುಬ್ಬಳ್ಳಿ-ಶಿರಡಿ, ಬೆಳಗಾವಿ-ಲಾತೂರ, ರಾಮದುರ್ಗ-ಬೆಂಗಳೂರು ಮತ್ತು ಮುರುಡೇಶ್ವರ-ಬೆಂಗಳೂರು ನಡುವೆ ಸಂಚಾರ ನಡೆಸುತ್ತಿದೆ. ಪ್ರಯಾಣಿಕರು ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು http://ksrtc.in ವೆಬ್ಸೈಟ್ಗೆ ಭೇಟಿ ನೀಡಬಹುದು.
ಮಾರ್ಗ, ದರ, ವೇಳಾಪಟ್ಟಿ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ-ಶಿರಡಿ ನಡುವೆ ನೂತನ ಪಲ್ಲಕ್ಕಿ ಮಾದರಿ ಬಸ್ ಸೇವೆಯನ್ನು ಆರಂಭಿಸಿದೆ. ಪ್ರಯಾಣ ದರ 1,300 ರೂ.ಗಳು. ಈ ಬಸ್ ಹುಬ್ಬಳ್ಳಿಯನ್ನು ಬಿಡುವ ವೇಳೆ 20:08 ಮತ್ತು ಶಿರಡಿ ತಲುಪುವ ವೇಳೆ 08:45 ಮತ್ತು ಶಿರಡಿಯಿಂದ 20:00 ಬಿಡುವ ಬಸ್ ಹುಬ್ಬಳ್ಳಿಯನ್ನು 08:45ಕ್ಕೆ ಬಂದು ತಲುಪಲಿದೆ. ಈ ಬಸ್ ಧಾರವಾಡ, ಬೆಳಗಾವಿ, ಪುಣೆ, ಅಹಮದ್ ನಗರ ಮಾರ್ಗವಾಗಿ ಸಂಚಾರ ನಡೆಸುತ್ತದೆ.
ಬೆಳಗಾವಿ-ಲಾತೂರ ನಡುವೆ ಸಹ ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಸಂಚಾರ ನಡೆಸಲಿದೆ. ಈ ಮಾರ್ಗದ ಪ್ರಯಾಣ ದರ 925 ರೂ.ಗಳು. ಈ ಬಸ್ ಲೋಕಾಪುರ, ಜಮಖಂಡಿ, ವಿಜಯಪುರ, ಸೊಲ್ಲಾಪುರ, ತುಳಜಾಪುರ ಮಾರ್ಗವಾಗಿ ಓಡಲಿದೆ. ಈ ಬಸ್ ಬೆಳಗಾವಿಯನ್ನು 20:00 ಕ್ಕೆ ಬಿಟ್ಟು ಲಾತೂರಗೆ 06:20ಕ್ಕೆ ತಲುಪಲಿದೆ. ಲಾತೂರದಿಂದ 19:30ಕ್ಕೆ ಹೊರಟು, ಬೆಳಗಾವಿಗೆ 05:30ಕ್ಕೆ ಬಂದು ತಲುಪಲಿದೆ.
ಪಲ್ಲಕ್ಕಿ ಬಸ್ ರಾಮದುರ್ಗ-ಬೆಂಗಳೂರು ನಡುವೆ ಸಹ ಸಂಚಾರ ನಡೆಸಲಿದೆ. ಈ ಮಾರ್ಗದ ಪ್ರಯಾಣ ದರ 1070 ರೂ.ಗಳು. ನರಗುಂದ, ನವಲಗುಂದ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು ಮಾರ್ಗವಾಗಿ ಈ ಬಸ್ ಸಂಚಾರ ನಡೆಸಲಿದೆ. ಈ ಬಸ್ ರಾಮದುರ್ಗದಿಂದ 20:03ಕ್ಕೆ ಹೊರಟು, ಬೆಂಗಳೂರಿಗೆ 07:10ಕ್ಕೆ ತಲುಪಲಿದೆ. ಬೆಂಗಳೂರಿನಿಂದ 21:15ಕ್ಕೆ ಹೊರಟು, ರಾಮದುರ್ಗವನ್ನು 07:30ಕ್ಕೆ ತಲುಪುತ್ತದೆ.
ಮುರುಡೇಶ್ವರ-ಬೆಂಗಳೂರು ನಡುವೆ ಸಹ ಪಲ್ಲಕ್ಕಿ ಬಸ್ ಸಂಚಾರ ಮಾಡಲಿದೆ. ಪ್ರಯಾಣ ದರ 970 ರೂ.ಗಳು. ಈ ಬಸ್ ಭಟ್ಕಳ, ಬೈಂದೂರು, ಕೊಲ್ಲೂರು, ನಗರ, ಹೊಸನಗರ ಮಾರ್ಗವಾಗಿ ಸಂಚಾರ ನಡೆಸಲಿದೆ. ಈ ಬಸ್ ಮುರುಡೇಶ್ವರದಿಂದ 19:45ಕ್ಕೆ ಹೊರಟು, ಬೆಂಗಳೂರಿಗೆ 6.30ಕ್ಕೆ ತಲುಪಲಿದೆ. ಬೆಂಗಳೂರಿನಿಂದ 19:15ಕ್ಕೆ ಹೊರಟು, ಮುರುಡೇಶ್ವರಕ್ಕೆ 06:30ಕ್ಕೆ ತಲುಪಲಿದೆ.
2023ರ ಅಕ್ಟೋಬರ್ನಲ್ಲಿ 'ಪಲ್ಲಕ್ಕಿ' ಮಾದರಿಯ ನಾನ್ ಎಸಿ ಸ್ಲೀಪರ್ ಬಸ್ ಸೇವೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿತು. ಈಗ ವಿವಿಧ ನಿಗಮಗಳಿಗೆ ಬಸ್ಗಳನ್ನು ಹಂಚಿಕೆ ಮಾಡಲಾಗಿದ್ದು, ಹಲವಾರು ಮಾರ್ಗದಲ್ಲಿ ಈ ಬಸ್ ಓಡುತ್ತಿದೆ. ಪ್ರಯಾಣಿಕರಿಂದ ಸಹ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನೂತನ ಬಸ್ಗಳಿಗೆ 'ಪಲ್ಲಕ್ಕಿ' ಎಂಬ ಹೆಸರು ನೀಡಿದ್ದಾರೆ. 'ಸಂತೋಷವು ಪ್ರಯಾಣಿಸುತ್ತಿದೆ' ಎಂಬ ಟ್ಯಾಗ್ಲೈನ್ ಅನ್ನು ಇದಕ್ಕೆ ನೀಡಲಾಗಿದೆ. 30 ಸೀಟುಗಳ ಈ ಬಸ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಸುಖಕರ ಪ್ರಯಾಣದ ಅನುಭವ ನೀಡುತ್ತವೆ.












Click it and Unblock the Notifications