ಮೈಸೂರು-ರಾಮೇಶ್ವರಂ ರೈಲು ಸೇವೆಗೆ ಒಪ್ಪಿಗೆ, ವೇಳಾಪಟ್ಟಿ
ಮೈಸೂರು, ಫೆಬ್ರವರಿ 25; ಬಹುದಿನದ ಬೇಡಿಕೆಯಾದ ಮೈಸೂರು-ರಾಮೇಶ್ವರಂ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಈ ರೈಲು ಏಪ್ರಿಲ್ 1ರಿಂದ ಸಂಚಾರ ಆರಂಭಿಸಲಿದ್ದು,ಮೈಸೂರು ಭಾಗದ ಜನರ ಬಹು ಬೇಡಿಕೆ ಈಡೇರಿದಂತಾಗಲಿದೆ.
ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಈ ಕುರಿತು ಮಾಹಿತಿ ನೀಡಿದ್ದಾರೆ. "ಮೈಸೂರಿನಿಂದ ರಾಮೇಶ್ವರಂಗೆ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿದ್ದು, ಈ ರೈಲು ಏಪ್ರಿಲ್ 1ರಿಂದ ಸಂಚರಿಸಲಿದೆ" ಎಂದರು.

ರೈಲು ಸೇವೆಯ ಕುರಿತು ಫೇಸ್ಬುಕ್ ಪೋಸ್ಟ್ ಮೂಲಕ ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ. "ಚುಕು ಬುಕು ಚುಕು ಬುಕು ರೈಲೇ...ಮೈಸೂರಿಂದ ರಾಮೇಶ್ವರಂಗೆ ಹೋಗೋಣ ರೆಡಿಯಾಗಿ" ಎಂದು ಹೇಳಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ರೈಲಿನ ವೇಳಾಪಟ್ಟಿ: ಸದ್ಯದ ಮಾಹಿತಿ ಪ್ರಕಾರ ಮೈಸೂರು-ರಾಮೇಶ್ವರಂ ರೈಲು ಏಪ್ರಿಲ್ 1 ರಿಂದ ಜುಲೈ 23ರ ತನಕ ಸಂಚಾರ ನಡೆಸಲಿದೆ. ರಾಮೇಶ್ವರಂನಲ್ಲಿ ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳು ನಡೆಯುತ್ತಿವ ಕಾರಣ ರೈಲು ಮಧುರೈ ತನಕ ಸಂಚಾರ ನಡೆಸಲಿದೆ. ಬಳಿಕ ರಾಮೇಶ್ವರಂ ತನಕ ವಿಸ್ತರಣೆಯಾಗಲಿದೆ.
ಸೋಮವಾರ ಸಂಜೆ 6.35ಕ್ಕೆ ಮೈಸೂರಿನಿಂದ ಹೊರಡುವ ರೈಲು ಜೋಲಾರ್ ಪಟ್ಟಿ, ತಿರುಪತೂರ್, ಸೇಲಂ, ನಾಮಾಕಲ್, ಕರೂರ್, ತಿರುಚ್ಚಿರಾಪಲ್ಲಿ, ದಿಂಡಿಗಲ್, ಮಧುರೈ ಮೂಲಕ ಮಂಗಳವಾರ ಬೆಳಗ್ಗೆ 9.10ಕ್ಕೆ ಮಾನಾಮಧುರೈ ತಲುಪಲಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಮಾನಮಧುರೈನಿಂದ ಹೊರಡುವ ರೈಲು ಇದೇ ಮಾರ್ಗವಾಗಿ ಸಂಚಾರ ನಡೆಲಿದೆ. ಸದ್ಯ ಮೈಸೂರು ಮತ್ತು ಮಾನಮಧುರೈ ನಡುವೆ ಈ ರೈಲು ತಲಾ 17 ಟ್ರಿಪ್ ಸಂಚಾರ ನಡೆಸಲಿದೆ.
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಮೇಶ್ವರಂ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿ ನಡೆಯುತ್ತಿರುವ ಕಾರಣ ಈ ರೈಲು ಮಾನಮಧುರೈ ತನಕ ಸಂಚಾರ ನಡೆಸಲಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ರೈಲು ರಾಮೇಶ್ವರಂ ತನಕ ಸಂಚಾರ ನಡೆಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, "ನನ್ನ ಸಂಸದ ಸೇವೆ ಅವಧಿಯಲ್ಲಿ ಕರ್ನಾಟಕಕ್ಕೆ 11 ರೈಲು ಸೇವೆ ತರಿಸಿದ್ದೇನೆ. 2014ಕ್ಕೂ ಮೊದಲು ಒಂದು ರೈಲು ಬಂದಿಲ್ಲ. ಶೀಘ್ರದಲ್ಲೇ ಮೈಸೂರು-ರಾಮೇಶ್ವರಂ 12ನೇ ರೈಲು ಬರಲಿದೆ" ಎಂದು ಹೇಳಿದ್ದರು.
2023ರ ಡಿಸೆಂಬರ್ನಲ್ಲಿ ಪ್ರತಾಪ್ ಸಿಂಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದ್ದರು. ಮೈಸೂರಿನಿಂದ ರಾಮೇಶ್ವರಂಗೆ ಸಾಪ್ತಾಹಿಕ ರೈಲು ಸೇವೆ ಆರಂಭಿಸುವಂತೆ ಮನವಿ ಮಾಡಿದ್ದರು.












Click it and Unblock the Notifications