ಕೂರ್ಗ್ ವಿಲೇಜ್; ಯೋಜನೆ ಪ್ರಗತಿ ಪರಿಶೀಲಿಸಿದ ಕೊಡಗು ಡಿಸಿ
ಮಡಿಕೇರಿ, ಜೂನ್ 25; ಕೊಡಗು ನೂತನ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅಧ್ಯಕ್ಷತೆಯಲ್ಲಿ ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ ನಡೆಯಿತು. ಗ್ರೇಟರ್ ರಾಜಸೀಟು ಕಾಮಗಾರಿ, ಕೂರ್ಗ್ ವಿಲೇಜ್ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಮಡಿಕೇರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೋಟಗಾರಿಕೆ, ಲೋಕೋಪಯೋಗಿ, ಕೊಡಗು ನಿರ್ಮಿತಿ ಕೇಂದ್ರದ ಅಧಿಕಾರಿಗಳು ಪಾಲ್ಗೊಂಡಿದ್ದರು. ಉಪ ಪೊಲೀಸ್ ವರಿಷ್ಠಾಧಿಕಾರಿ ಕೆ. ಎಸ್. ಸುಂದರರಾಜ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಬಾನಾ ಎಂ. ಶೇಕ್, ನಗರಸಭೆಯ ಪೌರಾಯುಕ್ತ ವಿಜಯ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ ಜತಿನ್ ಮುಂತಾದವರು ಭಾಗವಹಿಸಿದ್ದರು.

ಸಭೆಯಲ್ಲಿ ರಾಜಾಸೀಟು, ರಾಜರ ಗದ್ದುಗೆ, ನೆಹರು ಮಂಟಪ ಅಭಿವೃದ್ಧಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್. ಆರ್. ನಾಯಕ್ ಮಾಹಿತಿ ನೀಡಿದರು. ರಾಜಾಸೀಟು ಅಭಿವೃದ್ಧಿ ಸಂಬಂಧ ಇದುವರೆಗೆ ಕೈಗೊಳ್ಳಲಾಗಿರುವ ಕಾರ್ಯಕ್ರಮಗಳ ಬಗ್ಗೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್ ಮಾಹಿತಿ ಕೊಟ್ಟರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ರಾಜಾಸೀಟು ಅಭಿವೃದ್ಧಿ ಸಂಬಂಧಿಸಿದಂತೆ ಮಾಹಿತಿ ಪಡೆದು, "ರಾಜಸೀಟು, ರಾಜರ ಗದ್ದುಗೆ, ನೆಹರು ಮಂಟಪಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಹೊಸ ಕ್ರಿಯಾಯೋಜನೆ ಅನುಮೋದಿಸಲಾಗುವುದು. ಯಾವ ಉದ್ದೇಶಕ್ಕೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ" ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಅಂಗಡಿ ಮಳಿಗೆ ಯೋಜನೆ; ಸಭೆಯಲ್ಲಿ ರಾಜಸೀಟಿನ ಪುಟಾಣಿ ರೈಲು ಭಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಗಡಿ ಮಳಿಗೆ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಯೋಜನೆ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಅವರು ತಾತ್ಕಾಲಿಕ ಮಳಿಗೆ ನಿರ್ಮಾಣದ ಸಾಧಕ ಬಾಧಕಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸಂಬಂಧಪಟ್ಟ ಇಂಜಿನಿಯರ್ಗೆ ಸಲಹೆ ಕೊಟ್ಟರು.
ಗ್ರೇಟರ್ ರಾಜಸೀಟು ಕಾಮಗಾರಿ ಪ್ರಗತಿ ಬಗ್ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ಧೇಗೌಡ ಮಾಹಿತಿ ನೀಡಿದರು. ಕೂರ್ಗ್ ವಿಲೇಜ್ ಯೋಜನೆ ಬಗ್ಗೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಸಚಿನ್ ಸಭೆಗೆ ವಿವರಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ; ಕೋವಿಡ್ ಪೂರ್ವ ಸಂದರ್ಭದಲ್ಲಿ ರಾಜಾಸೀಟಿಗೆ ಶನಿವಾರ ಮತ್ತು ಭಾನುವಾರಗಳಂದು 3 ರಿಂದ 4 ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಮಡಿಕೇರಿಯ ರಾಜಾಸೀಟಿನಲ್ಲಿ ನಿಂತು ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ನಾಪೋಕ್ಲು ಮತ್ತು ವಿರಾಜಪೇಟೆವರೆಗೂ ಪ್ರಾಕೃತಿಕ ಸೌಂದರ್ಯ ಕಾಣಲಿದೆ.
ಈಗಾಗಲೇ 3 ಎಕರೆಯಲ್ಲಿ ರಾಜಾಸೀಟು ಇದ್ದು, ಮುಂದುವರೆದು 6 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಮೊದಲ ಹಂತದಲ್ಲಿ ಸರ್ಕಾರ 3.43 ಕೋಟಿ ರೂ.ಗಳನ್ನು ಈ ಕಾಮಗಾರಿಗಳಿಗೆ ಬಿಡುಗಡೆ ಮಾಡಿತ್ತು. ಇನ್ನೂ ಮೂರು ಕೋಟಿ ರೂ. ಬಿಡುಗಡೆ ಮಾಡಲು ಅಂದಿನ ಶಾಸಕರು ಪ್ರಯತ್ನವನ್ನು ನಡೆಸಿದ್ದರು.
ಮಡಿಕೇರಿಗೆ ಆಗಮಿಸಿದ ಪ್ರವಾಸಿಗರು ರಾಜಾಸೀಟು ಪ್ರದೇಶಕ್ಕೆ ಭೇಟಿ ನೀಡದೆ ವಾಪಸ್ ತೆರಳುವುದಿಲ್ಲ. ರಾಜಾಸೀಟು ಬಳಿ ಕೂರ್ಗ್ ವಿಲೇಜ್ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಏಲಕ್ಕಿ, ಕರಿಮೆಣಸು ಮತ್ತಿತರ ಸಾಂಬಾರ ಪದಾರ್ಥಗಳ ಮಳಿಗೆಗಳಿವೆ. ಕೂರ್ಗ್ ವಿಲೇಜ್ನಲ್ಲಿ 14 ಮಗಳಿಗೆಗಳನ್ನು 98 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕೆ ಇಲ್ಲಿ ಅವಕಾಶ ನೀಡಲಾಗುತ್ತಿದೆ.











Click it and Unblock the Notifications