ಹಾಸನಕ್ಕೆ ಬಂತು ಅಂಬಾರಿ ಡಬಲ್ ಡೆಕ್ಕರ್ ಬಸ್: ಮಾರ್ಗ, ದರಪಟ್ಟಿ
ಹಾಸನ, ಅಕ್ಟೋಬರ್ 24: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ಇಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುತ್ತದೆ. ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮಿಯವರ ಮತ್ತು ಎಲ್ಲಾ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಬಾಗಿಲು ತೆರೆಯಲಾಗುತ್ತದೆ. ಹಾಸನಾಂಬೆ ಜಾತ್ರೆ ಹಿನ್ನಲೆಯಲ್ಲಿ ಹಾಸನಕ್ಕೆ ಅಂಬಾರಿ ಡಬಲ್ ಡೆಕ್ಕರ್ ಬಸ್ ಆಗಮಿಸಿದೆ.
ಶ್ರೀ ಹಾಸನಾಂಬ ಹಾಗೂ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ಹಾಸನದಲ್ಲಿ ಅಂಬಾಡಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಆರಂಭಿಸಿದೆ. ಮಾರ್ಗದ ಮತ್ತು ದರದ ಮಾಹಿತಿಯನ್ನು ನೀಡಿದೆ.

ಅಂಬಾರಿಯಲ್ಲಿ ಹಾಸನ: 'ಅಂಬಾರಿಯಲ್ಲಿ ಹಾಸನ' ಎಂಬ ಹೆಸರಿನಲ್ಲಿ ಪ್ರವಾಸಿಗರಿಗಾಗಿ ಡಬಲ್ ಡೆಕ್ಕರ್ ಬಸ್ ಪರಿಚಯಿಸಲಾಗಿದೆ. ಹಾಸನದಲ್ಲಿ ಮಾಡಿರುವ ವಿಶೇಷ ಲೈಟಿಂಗ್ ವ್ಯವಸ್ಥೆಯನ್ನು ಈ ಬಸ್ನಲ್ಲಿ ಕುಳಿತು ಕಣ್ತುಂಬಿಕೊಳ್ಳಬಹುದು.
ಈ ಬಸ್ನಲ್ಲಿ ಸಂಚಾರ ನಡೆಸಲು ಅಪ್ಪರ್ ಡೆಕ್ಗೆ 350 ರೂ., ಲೋವರ್ ಡೆಕ್ಗೆ 200 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಸ್ಥಳದಲ್ಲಿಯೇ ಟಿಕೆಟ್ ಅನ್ನು ನೀಡಲಾಗುತ್ತದೆ. ಬಸ್ ಆಗಮನ/ ನಿರ್ಗಮನ ಸ್ಥಳ ನಗರ ಬಸ್ ನಿಲ್ದಾಣ ಹಾಸನ.
ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ 24/10/2024 ರಿಂದ 3/11/2024ರ ತನಕ ಲಭ್ಯವಿದೆ. ನಗರ ಬಸ್ ನಿಲ್ದಾಣದಿಂದ ಹೊರಡುವ ಬಸ್ ಎವಿಕೆ ಕಾಲೇಜು ರಸ್ತೆ- ಆರ್. ಸಿ. ರಸ್ತೆ- ಎಸ್ಪಿ ಕಛೇರಿ ಮುಂಭಾಗ- ಬಿ. ಎಂ. ರಸ್ತೆ- ರೈಲ್ವೆ ನಿಲ್ದಾಣ ಮುಂಭಾಗ-ಡೈರಿ ಸರ್ಕಲ್- ಎನ್. ಆರ್. ವೃತ್ತ ಮೂಲಕ ನಗರ ಬಸ್ ನಿಲ್ದಾಣಕ್ಕೆ ವಾಪಸ್ ಆಗಲಿದೆ.
ಪ್ರಯಾಣಿಕರಿಗೆ ಸೂಚನೆಗಳು
* ಹಾಸನಾಂಬ ಜಾತ್ರಾ ದೀಪಾಲಂಕಾರಗಳಿಂದ ಉಂಟಾಗುವ ಅನಾನುಕೂಲಗಳಿಗೆ ನಾವು ಜವಾಬ್ದಾರರಲ್ಲ
* ಮಳೆ ಸಮಯದಲ್ಲೂ ಟ್ರಿಪ್ಗಳನ್ನು ನಡೆಸಲಾಗುತ್ತದೆ.
* ಒಮ್ಮೆ ಟಿಕೆಟ್ ದೃಢಪಡಿಸಿದ ನಂತರ ಟಿಕೆಟ್ ರದ್ದುಗೊಳಿಸಲು ಅಥವಾ ಮುಂದೂಡಲು ಯಾವುದೇ ಆಯ್ಕೆ ಇರುವುದಿಲ್ಲ.
* ಆಗಮನ ಮತ್ತು ನಿರ್ಗಮನದ ಸಮಯವು ವಿಪರೀತ ಸಂಚಾರ ದಟ್ಟಣೆಯ ಆಧಾರದ ಮೇಲೆ ಬದಲಾಗಬಹುದು.
* ಪ್ರಯಾಣ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಪ್ರಯಾಣಿಕರು ಹಾಜರಿರಬೇಕು.
* ಪ್ರಯಾಣಿಕರು ಮಾನ್ಯವಾದ ಟಿಕೆಟ್ಗಳನ್ನು ಹೊಂದಿರಬೇಕು.
* 5 ವರ್ಷ ಮೇಲ್ಪಟ್ಟ ಮಕ್ಕಳಿಗೆ, ಪೂರ್ಣ ಮೊತ್ತದ ಟಿಕೆಟ್ ಶುಲ್ಕವನ್ನು ವಿಧಿಸಲಾಗುತ್ತದೆ.
* ಪ್ರವಾಸದ ಸಮಯದಲ್ಲಿ ನಿಮ್ಮ ವಸ್ತುಗಳಿಗೆ ಯಾವುದೇ ನಷ್ಟ ಅಥವಾ ಹಾನಿಗೆ ಉಂಟಾದಲ್ಲಿ ನಾವು ಜವಾಬ್ದಾರರಾಗಿರುವುದಿಲ್ಲ.
* ಒಂದು ಬಸ್ನಲ್ಲಿ ಕನಿಷ್ಟ 15 ಪ್ರಯಾಣಿಕರು ಇದ್ದಲ್ಲಿ ಮಾತ್ರ ಪ್ರವಾಸವನ್ನು ಆರಂಭಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ 9019712720, 9108186776, ಪ್ರವಾಸೋದ್ಯಮ ಇಲಾಖೆಯ ಕಛೇರಿ ಸಂಖ್ಯೆ 08172 268862 ಸಂಪರ್ಕಿಸಬಹುದು.
ಭಕ್ತರಿಗೆ ದರ್ಶನಕ್ಕೆ ಅವಕಾಶ: ಅಕ್ಟೋಬರ್ 24ರಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನವಂಬರ್ 3ರವರೆಗೂ ಜಾತ್ರಾ ಮಹೋತ್ಸವ ನಡೆಯಲಿದೆ. ನವೆಂಬರ್ 3ರ ಮದ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಒಟ್ಟು 11 ದಿನದಲ್ಲಿ 9 ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದಿನದ 24 ಗಂಟೆಗಳ ಕಾಲ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಸಲಾಗಿದೆ.












Click it and Unblock the Notifications