ಮಳವಳ್ಳಿಯಲ್ಲಿ ಮತ್ತೊಂದು ಜಲಪಾತ, ಗಗನ ಚುಕ್ಕಿಗಿಂತ ಕಡಿಮೆಯೇನಲ್ಲ 'ಗಾಣಾಲು ಫಾಲ್ಸ್'
ಮಂಡ್ಯ, ಆಗಸ್ಟ್ 5: ಕಳೆದ ಎರಡು ಮೂರು ದಿನಗಳಿಂದ ಮಂಡ್ಯ ಜಿಲ್ಲೆಯಲ್ಲಿ ವರುಣನ ಆರ್ಭಟ ಭಾರೀ ಜೋರಾಗಿದೆ. ಮಳವಳ್ಳಿಯ ದೊಡ್ಡಕೆರೆ ಕೋಡಿ ಬಿದ್ದು ಮೈದುಂಬಿ ಹರಿಯುತ್ತಿದೆ, ಮಾರೆಹಳ್ಳಿ ಕೆರೆ ತುಂಬಿ ಹರಿಯುತ್ತಿರುವುದರಿಂದ ಶಿಂಷಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಮಳವಳ್ಳಿ ತಾಲೂಕಿನ ಗಾಣಾಳು ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ರುದ್ರರಮಣೀಯ ದೃಶ್ಯ ಪ್ರವಾಸಿ ಪ್ರಿಯರನ್ನು ತನ್ನತ್ತಾ ಸೆಳೆಯುತ್ತಿದೆ.
ಮಂಡ್ಯ ಜಿಲ್ಲೆಯಲ್ಲಿ ಜಲಪಾತ ಎಂದರೆ ತಕ್ಷಣಕ್ಕೆ ನೆನಪಾಗುವುದು ಮಳವಳ್ಳಿ ತಾಲೂಕಿನ ಗಗನ ಚುಕ್ಕಿ ಜಲಪಾತ, ಆದರೆ ಅದೇ ಮಳವಳ್ಳಿ ತಾಲೂಕಿನಲ್ಲಿ ಗಗನ ಚುಕ್ಕಿಯಷ್ಟೇ ಸುಂದರವಾಗಿರುವ ಗಾಣಾಲು ಜಲಪಾತವಿದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ.
'ಗಾಣಾಲು' ಜಲಪಾತ ಎನ್ನುವುದಕ್ಕಿಂದ 'ಬೆಂಕಿ' ಜಲಪಾತ ಎಂದೇ ಹೆಸರಾಗಿದೆ. ವಿಸ್ತಾರವಾಗಿರುವ ಹರಡಿರುವ ಕಲ್ಲುಬಂಡೆಗಳನ್ನು ಸೀಳಿ ಎತ್ತರದಿಂದ ನೀರು ವೇಗವಾಗಿ ಬೀಳುವುದರಿಂದ ಇದನ್ನೂ ಬೆಂಕಿ ಫಾಲ್ಸ್ ಎಂದು ಕರೆಯಲಾಗುತ್ತದೆ.
ಮಳವಳ್ಳಿ ತಾಲೂಕಿನ ಹಲಗೂರು ಬಳಿ ಗಾಣಾಲು ಗ್ರಾಮದ ಬಳಿ ಮುತ್ತತಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಜಲಪಾತ ಕಂಡುಬರುತ್ತದೆ. ಸದ್ಯಕ್ಕೆ ಕಳೆದ ಎರಡು ಮೂರು ದಿನಗಳಲ್ಲಿ ಮಂಡ್ಯ ಮತ್ತು ತುಮಕೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಶಿಂಷಾ ನದಿ ನೀರಿನ ಹರಿವಿನಲ್ಲಿ ಭಾರೀ ಏರಿಕೆಯಾಗಿದ್ದು ಗಾಣಾಲು ಫಾಲ್ಸ್ ತನ್ನ ಗತವೈಭವಕ್ಕೆ ಮರಳಿದೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತದ ವೈಭವ ಕಣ್ತುಂಬಿಕೊಳ್ಳಬಹುದು.

ಗಾಣಾಲು ಫಾಲ್ಸ್ಗೆ ನಾನಾ ಹೆಸರು
ಹಲಗೂರಿನಿಂದ ಮುತ್ತತ್ತಿಗೆ ಹೋಗುವ ಮಾರ್ಗದಲ್ಲಿಈ ಗಾಣಾಲು ಜಲಪಾತ ಗೋಚರಿಸುತ್ತದೆ. ಈ ಜಲಪಾತ ಕೊಂಡದಮ್ಮನ ದೇವಸ್ಥಾನದ ಬಳಿಯಿರುವುದರಿಂದ ಕೊಂಡ ಫಾಲ್ಸ್ ಎಂತಲೂ, ಶಿಂಷಾ ನಂದಿಯ ಜಲಪಾತವಾದ್ದರಿಂದ 'ಶಿಂಷಾ ಫಾಲ್ಸ್' ಹಾಗೂ ವೇಗವಾಗಿ ಹರಿಯುವುದರಿಂದ ಬೆಂಕಿ ಫಾಲ್ಸ್ ಅಂತಲೂ ಹಾಗೂ ಗಾಣಾಲು ಗ್ರಾಮದ ಬಳಿಯಿರುವುದರಿಂದ ಗಾಣಾಲು ಫಾಲ್ಸ್ ಎಂದೂ ಕರೆಯುತ್ತಾರೆ. ಸುಮಾರು ನೂರು ಅಡಿಗಳಷ್ಟು ಎತ್ತರದಿಂದ ದುಮ್ಮಿಕ್ಕುವ ಜಲಪಾತದ ಭೋರ್ಗರೆತ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಆಯಾಸಗಳನ್ನು ಒಮ್ಮೆಲೆ ದೂರವಾಗಿಸುತ್ತದೆ.

ಸ್ಥಳೀಯರನ್ನು ಬಿಟ್ಟರೆ ಹೆಚ್ಚು ಜನರಿಗೆ ತಿಳಿದಿಲ್ಲ
ಶಿಂಷಾ ನದಿಯಿಂದ ಧುಮ್ಮಿಕ್ಕುವ ಜಲಧಾರೆ ಮಳೆಗಾಲದಲ್ಲಿ ರುದ್ರರಮಣೀಯ ಆದರೆ ಉಳಿದ ಸಮಯ ಸೌಮ್ಯವಾಗಿರುತ್ತದೆ. ಸ್ಥಳೀಯರನ್ನು ಬಿಟ್ಟರೆ ಹೊರಗಿನವರ ಕಣ್ಣಿಗೆ ಬಿದ್ದಿಲ್ಲ. ಹಾಗಾಗಿ ಇದು ಎಲೆಮರೆಕಾಯಿಯಾಗಿ ಉಳಿದುಕೊಂಡಿದೆ. ಪ್ರವಾಸಿಗರ ತಾಣವಾಗಿ ಪ್ರಸಿದ್ದಿಯಾಗಬೇಕಿದ್ದ ಈ ಜಲಪಾತ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಾಡಿನಲ್ಲಿ ಹರಿಯುವ ಝರಿಯಾಗಿ ಉಳಿದುಕೊಂಡಿದೆ. ಇದರ ಬಗ್ಗೆ ಸ್ಥಳೀಯರನ್ನು ಹೊರತುಪಡಿಸಿದರೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಆದರೆ ಕೊರೊನಾ ಸಂದರ್ಭದಲ್ಲಿ ಭೇಟಿ ನೀಡಿದ ಜನರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟನಂತರ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ.

ಜಲಪಾತ ವೀಕ್ಷಣೆಗೂ ಸೂಕ್ತ ಸ್ಥಳವಿಲ್ಲ
ಪ್ರವಾಸಿಗರಿಗೆ ಜಲಪಾತದ ವೀಕ್ಷಣೆಗೆ ತೆರಳಬೇಕಾದರೆ ಸೂಕ್ತವಾದ ರಸ್ತೆಯಿಲ್ಲ. ಸ್ಥಳೀಯರ ಸಹಾಯದಿಂದಲೇ ಸಾಗಬೇಕು. ಮಣ್ಣಿನ ರಸ್ತೆಯಲ್ಲಿ , ಗಿಡಗಂಟೆಗಳನ್ನು ಸರಿಸುತ್ತಾ ನಡೆದುಕೊಂಡು ಹೋಗಬೇಕು. ಜಲಪಾತದ ಬಳಿ ನಿಂತ ವೀಕ್ಷಿಸಲೂ ಸೂಕ್ತ ಸ್ಥಳವಿಲ್ಲ, ಕಡಿದಾದ ಸಣ್ಣ ಕಾಲುದಾರಿಯಲ್ಲಿ ಇಳಿದರೆ ಜಲಪಾತದ ಸೌಂದರ್ಯ ಸಿರಿಯನ್ನು ಕಣ್ತುಂಬಿಕೊಳ್ಳಬಹುದು. ಆದರೆ ಸ್ವಲ್ಪ ಎಚ್ಚರ ತಪ್ಪಿದರೆ ಅಪಾಯ ಮಾತ್ರ ಕಟ್ಟಿಟ್ಟಬುತ್ತಿಯಾಗಿದೆ.
ಈಗಾಗಲೇ ಕೆಲವು ಪ್ರವಾಸಿಗರು ಪ್ರಾಣ ಕಳೆದುಕೊಂಡಿರುವ ಹಿನ್ನಲೆ ಪ್ರವಾಸಿಗರಿಗೆ ಸದ್ಯ ನಿಷೇಧವಿದೆ. ಆದರೆ ಇಂತಹ ಸುಂದರ ತಾಣಕ್ಕೆ ಪ್ರವಾಸಿಗರನ್ನು ನಿಷೇಧಿಸುವ ಬದಲು ಭದ್ರತೆ ಕಲ್ಪಿಸಿ, ಸೂಕ್ತ ರಸ್ತೆ ಕಲ್ಪಿಸಿ, ಜಲಪಾತ ವೀಕ್ಷಣೆ ಮಾಡಲು ವೀವ್ ಪಾಯಿಂಟ್ ಮಾಡಿದ್ದರೆ ಜಿಲ್ಲೆಯಲ್ಲಿ ಮತ್ತೊಂದು ಪ್ರವಾಸಿತಾಣವಾಗಿ ಗಾಣಾಲು ಫಾಲ್ಸ್ ಅಭಿವೃದ್ಧಿಯಾಗುತ್ತಿತ್ತು.

ಜಲಪಾತಕ್ಕೆ ದಾರಿ
ಈ ಜಲಪಾತ ಬೆಂಗಳೂರಿನಿಂದ ಸುಮಾರು 100 ಕಿ.ಮೀ, ಮಂಡ್ಯದಿಂದ 60 ಕಿ.ಮೀ ದೂರವಿದೆ. ಜಲಪಾತಕ್ಕೆ ಹೋಗಲು ಸೂಕ್ತವಾದ ದಾರಿ,ನಾಫಲಕಗಳಿಲ್ಲ. ಹಲಗೂರಿನಿಂದ ಮುತ್ತತಿ ಮಾರ್ಗವಾಗಿ ಗಾಣಾಳು-ಬೀರೋಟ ರಸ್ತೆಯಲ್ಲಿ ಹೋದರೆ ಗಾಣಾಲು ಗ್ರಾಮ ಸಿಗುತ್ತದೆ. ಆ ಗ್ರಾಮದಿಂದ 2 ಕಿಲೋ ಮಣ್ಣಿನ ರಸ್ತೆ ಮೂಲಕ ಸಾಗಿದರೆ ದುಮ್ಮಿಕ್ಕುತ್ತಿರುವ ಗಾಣಾಲು ಫಾಲ್ಸ್ ಸಿಗುತ್ತದೆ.












Click it and Unblock the Notifications