ಬೆಂಗಳೂರು-ಚೆನ್ನೈ ರೈಲು ಪ್ರಯಾಣಿಕರಿಗೆ ಗುಡ್ನ್ಯುಸ್
ಬೆಂಗಳೂರು, ಜೂನ್ 30: ಬೆಂಗಳೂರು ಮತ್ತು ಚೆನ್ನೈ ನಡುವೆ ಸಂಚಾರ ನಡೆಸುವ ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿ ನೀಡಿದೆ. ವಂದೇ ಭಾರತ್ ಎಕ್ಸ್ಪ್ರೆಸ್, ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ಉಭಯ ನಗರಗಳ ನಡುವೆ ಸಂಚಾರ ನಡೆಸುತ್ತವೆ.
ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ನಡುವೆ ಸಂಚಾರ ನಡೆಸುವ ಶತಾಬ್ದಿ ಎಕ್ಸ್ಪ್ರೆಸ್ ರೈಲು ಇನ್ನು ಮುಂದೆ ಜೋಲಾರಪಟ್ಟಿ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳಲಿದೆ. ಜುಲೈ 9 ರಿಂದ ಈ ಆದೇಶ ಜಾರಿಗೆ ಬರಲಿದೆ. ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ.

ಸದ್ಯ ಕಟಪಾಡಿ ಮತ್ತು ಬೆಂಗಳೂರು ಕಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿ ಮಾತ್ರ ತತಾಬ್ದಿ ರೈಲು ನಿಲುಗಡೆ ಹೊಂದಿದೆ. ಆದರೆ ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಜೋಲಾರಪಟ್ಟಿಯಲ್ಲಿ ರೈಲಿಗೆ ನಿಲುಗಡೆ ನೀಡಲಾಗಿದೆ.
ವೇಳಾಪಟ್ಟಿಯೂ ಪರಿಷ್ಕರಣೆ; ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ತತಾಬ್ದಿ ರೈಲಿಗೆ ಹೆಚ್ಚುವರಿ ನಿಲುಗಡೆ ನೀಡಿದ ಕಾರಣಕ್ಕೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸಂಜೆ 5.30ರ ಬದಲು 5.25ಕ್ಕೆ ರೈಲು ಹೊರಡಲಿದೆ. ಜೋಲಾರಪಟ್ಟಿಗೆ 8.14ಕ್ಕೆ ತಲುಪಲಿದೆ.
ಬೆಂಗಳೂರು ಮತ್ತು ಚೆನ್ನೈ ಸೆಂಟ್ರಲ್ ರೈಲು ಬೆಂಗಳೂರು ನಗರದಿಂದ 6 ಗಂಟೆಗೆ ಹೊರಡಲಿದ್ದು, 11.05ಕ್ಕೆ ಚೆನ್ನೈಗೆ ತಲುಪಲಿದೆ. 7.49ಕ್ಕೆ ಜೋಲಾರಪಟ್ಟಿಯಲ್ಲಿ ನಿಲುಗಡೆ ಇದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಮತ್ತೊಂದು ನಿಲುಗಡೆ ಆದೇಶ; ನೈಋತ್ಯ ರೈಲ್ವೆಯ ಮತ್ತೊಂದು ಆದೇಶದ ಪ್ರಕಾರ ರಾಮೇಶ್ವರಂ-ಓಕ್ಲಾ ಎಕ್ಸ್ಪ್ರೆಸ್, ಚೆನ್ನೈ ಸೆಂಟ್ರಲ್-ಪಾಲಕ್ಕಾಡ್ ಪ್ರತಿದಿನದ ಎಕ್ಸ್ಪ್ರೆಸ್, ನಾಗರಕೋಯಿಲ್-ಎಸ್ಎಂವಿಟಿ ಬೆಂಗಳೂರು ಪ್ರತಿದಿನದ ಎಕ್ಸ್ಪ್ರೆಸ್ ರೈಲು ಜುಲೈ 7 ರಿಂದ ರಾಸಿಪುರಂ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.
ಪ್ರಾಯೋಗಿಕವಾಗಿ ರಾಸಿಪುರಂ ಮತ್ತು ಜೋಲಾರಪಟ್ಟಿ ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡಲಾಗುತ್ತದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರು ಮತ್ತು ಚೆನ್ನೈ ನಡುವೆ ಶತಾಬ್ದಿ ಹಲವು ವರ್ಷಗಳಿಂದ ಸಂಚಾರ ನಡೆಸುತ್ತಿದೆ. 2022ರ ನವೆಂಬರ್ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದ ಬಳಿಕ ಶತಾಬ್ದಿ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಉಭಯ ನಗರಗಳ ನಡುವೆ ಸಾವಿರಾರು ಜನರು ಪ್ರತಿದಿನ ಸಂಚಾರ ನಡೆಸುತ್ತಾರೆ.












Click it and Unblock the Notifications