Get Updates
Get notified of breaking news, exclusive insights, and must-see stories!

ಇನ್ಮುಂದೆ ಚಾಮುಂಡಿ ಬೆಟ್ಟದಲ್ಲಿ ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ!

ಮೈಸೂರು, ಫೆಬ್ರವರಿ 24: ಬೇಸಿಗೆ ಬರುತ್ತಿದ್ದಂತೆಯೇ ಅರಣ್ಯದಲ್ಲಿ ಹಲವು ಕಾರಣಗಳಿಂದು ಕಾಡ್ಗಿಚ್ಚು ಸಂಭವಿಸುತ್ತವೆ. ಇದನ್ನು ತಡೆಯುವ ಸಲುವಾಗಿ ಅರಣ್ಯ ಇಲಾಖೆ ಬೆಂಕಿ ರೇಖೆ ನಿರ್ಮಾಣ ಸೇರಿದಂತೆ ಹಲವು ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುತ್ತದೆ. ಇದು ಎಲ್ಲ ಅರಣ್ಯ ಪ್ರದೇಶಗಳಲ್ಲಿ ನಡೆಯುತ್ತದೆ. ಆದರೆ ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಚಾಮುಂಡಿಬೆಟ್ಟ ಅರಣ್ಯಕ್ಕೆ ಎಲ್ಲ ಸುರಕ್ಷತಾ ಕ್ರಮಗಳ ನಡುವೆಯೂ ಬೆಂಕಿ ಹೊತ್ತಿ ಉರಿದಿದೆ ಎಂದರೆ ಅದು ಸ್ವಾಭಾವಿಕವಲ್ಲ ಕಿಡಿಗೇಡಿಗಳ ಕೃತ್ಯ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ.

ಹೀಗಾಗಿ ಇನ್ಮುಂದೆ ಚಾಮುಂಡಿಬೆಟ್ಟದಲ್ಲಿ ರಸ್ತೆ ಬಿಟ್ಟು ಅರಣ್ಯ ಪ್ರದೇಶದೊಳಗೆ ತೆರಳುವುದು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆಹಾರ ಸೇವಿಸುವುದು, ಬೀಡಿ, ಸಿಗರೇಟ್, ಮದ್ಯಪಾನ ಮಾಡುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಲಾಗಿದೆ.

Chamundi Hills Fire New Fines For Safety Violations Announced

ಕಳೆದ ನಾಲ್ಕು ದಿನಗಳ ಹಿಂದೆ ಬಿದ್ದ ಬೆಂಕಿ ಚಾಮುಂಡಿಬೆಟ್ಟ ಪ್ರದೇಶದ ಸುಮಾರು 35 ಎಕರೆ ಅರಣ್ಯವನ್ನು ಬಲಿತೆಗೆದುಕೊಂಡಿದೆ. ಪ್ರತಿ ವರ್ಷವೂ ಎಷ್ಟೇ ಜಾಗ್ರತೆ ವಹಿಸಿದರೂ ಕಾಡ್ಗಿಚ್ಚು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಕೆಲವು ಕಿಡಿಗೇಡಿಗಳು ಹೊಂಚು ಹಾಕಿ ಕೃತ್ಯವನ್ನು ಎಸಗುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೆಂಕಿ ನಂದಿಸಿದ ಬಳಿಕ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಜತೆಗೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಸರ್ವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಒಂದು ಸಮಾಧಾನದ ವಿಚಾರ ಏನೆಂದರೆ ಬೆಂಕಿ ಅವಘಡದಲ್ಲಿ ಕುರುಚಲು ಅರಣ್ಯ ನಾಶವಾಗಿದೆ. ಆದರೆ ವನ್ಯಜೀವಿಗಳಿಗೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎನ್ನುವುದಾಗಿದೆ.

ಈ ಕುರಿತಂತೆ ಮೈಸೂರು ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಅವರು ಒಂದಷ್ಟು ಮಾಹಿತಿ ನೀಡಿದ್ದು ಅವರು ಹೇಳುವಂತೆ ಫೆ.21 (ಶುಕ್ರವಾರ) ಮಧ್ಯಾಹ್ನ 12.30ರ ಸಮಯದಲ್ಲಿ ಚಾಮುಂಡಿ ಬೆಟ್ಟದ ಬೆಂಟೆ ಹಳ್ಳ ಮತ್ತು ಗೊಲ್ಲ ಹಳ್ಳ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಟ್ಟ ಕುರುಚಲು ಕಾಡಿನಿಂದ ಆವೃತವಾಗಿದ್ದು, ಬೇಸಿಗೆ ಹಿನ್ನೆಲೆ ಗಿಡಗಂಟಿಗಳು ಮತ್ತು ಹುಲ್ಲುಗಾವಲು ಒಣಗಿದ್ದರಿಂದ ಬೆಂಕಿ ವೇಗವಾಗಿ ಎಲ್ಲೆಡೆ ವ್ಯಾಪಿಸಿದೆ.

ಬೆಟ್ಟದ ಕಣಿವೆ ಭಾಗಕ್ಕೆ ಬೆಂಕಿ ಬಿದ್ದಿದ್ದರಿಂದ, ಗಾಳಿಯ ವೇಗ 35 ಕಿ.ಮೀ. ಇದ್ದಿದ್ದರಿಂದ ಬೆಂಕಿಯ ಕೆನ್ನಾಲಿಗೆ ಮತ್ತಷ್ಟು ಹೆಚ್ಚಾಗಿದೆ. ಈ ಸಂದರ್ಭ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮದಿಂದ ರಾತ್ರಿ 11.30ರವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಬಗ್ಗೆ ಹೇಳಿದ್ದಾರೆ.

Chamundi Hills Fire New Fines For Safety Violations Announced

ಎರಡು ಕಡೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು

ಇನ್ನು ಚಾಮುಂಡಿಬೆಟ್ಟದಲ್ಲಿ 65ಕಿ.ಮೀ. ರಸ್ತೆ ಮಾರ್ಗವಿದ್ದು, ಪ್ರತಿವರ್ಷ ರಸ್ತೆ ಬದಿಯಲ್ಲಿ ಬೆಂಕಿ ರೇಖೆ ನಿರ್ಮಿಸಲಾಗುತ್ತಿದೆ. ಈ ವರ್ಷ ಹೆಚ್ಚುವರಿಯಾಗಿ 5 ಕಿ.ಮೀ. ಬೆಂಕಿ ರೇಖೆ ನಿರ್ಮಿಸಲಾಗಿತ್ತು. ಜತೆಗೆ ಬೆಟ್ಟದಲ್ಲಿ ಮೂರು ಕಡೆ ವಾಚಿಂಗ್ ಟವರ್ ಇದ್ದು, ಯಾವುದೇ ಬೆಂಕಿ ಅವಘಡ ಆಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಆದರೆ, ಒಂದೇ ಸಮಯದಲ್ಲಿ ಕಿಡಿಗೇಡಿಗಳು ಎರಡು ಕಡೆ ಬಿಂಕಿ ಹಚ್ಚಿದ್ದಾರೆ. ಇಲಾಖೆ ಮಾಹಿತಿ ಪ್ರಕಾರ ದನಗಾಹಿಗಳು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಹೊಸ ಹುಲ್ಲು ಬರಲೆಂದು ಒಣ ಹುಲ್ಲಿಗೆ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ. ದನಗಾಹಿಗಳ ಚಲನವನದ ಮೇಲೆ ನಿಗಾವಹಿಸಿದ್ದು, ಕಿಡಿಗೇಡಿಗಳ ಬಂಧನಕ್ಕೆ ಕ್ರಮ ವಹಿಸಿರುವುದಾಗಿ ತಿಳಿಸಿದ್ದಾರೆ.

ಚಾಮುಂಡಿಬೆಟ್ಟದಲ್ಲಿ ಸಂಭವಿಸಿದ ಅಗ್ನಿ ಅನಾಹುತದಿಂದ ಏನೆಲ್ಲ ಆಗಿದೆ ಎನ್ನುವುದನ್ನು ನೋಡಿದ್ದೇ ಆದರೆ ಅವಘಡದಲ್ಲಿ ಎರಡು ನೀಲಗಿರಿ ಮರ ಸಂಪೂರ್ಣ ಸುಟ್ಟುಹೋಗಿವೆ. ಉಳಿದಂತೆ ಕಳೆ, ಗಿಡಗಂಟಿಗಳು, ಒಣಹುಲ್ಲು ಸುಟ್ಟಿವೆ. ಕಡವೆ, ಜಿಂಕೆ, ಚಿರತೆ ಸೇರಿದಂತೆ ಪಕ್ಷಿ ಹಾಗೂ ಸರಿಸೃಪಗಳು ಇದ್ದು, ಬೆಂಕಿಯಿಂದ ಯಾವುದೇ ಅನಾಹುತವಾಗಿಲ್ಲ. ಮುಂಜಾನೆಯಿಂದ ಇಲಾಖೆ ಸಿಬ್ಬಂದಿ ಬೆಂಕಿ ಬಿದ್ದ ಸ್ಥಳವನ್ನು ಪರಿಶೀಲಿಸಿದ್ದು, ಯಾವ ಪ್ರಾಣಿಗಳ ಕಳೇಬರ ಪತ್ತೆಯಾಗಿಲ್ಲ ಎನ್ನುವುದೇ ನೆಮ್ಮದಿಯ ವಿಚಾರ.

ಬೆಂಕಿಯಿಂದ ಪಾರಾದ ಅರಣ್ಯದಲ್ಲಿದ್ದ ಚಿರತೆಗಳು

ಚಾಮುಂಡಿಬೆಟ್ಟ ಪ್ರದೇಶದಲ್ಲಿ ಐದು ಚಿರತೆಗಳಿರುವುದು ವರದಿಯಾಗಿತ್ತು. ಬೆಂಕಿ ಅವಘಡದ ಬಳಿಕ ದೇವಿಕೆರೆ ಹಿಂಭಾಗ ಶನಿವಾರ ಮುಂಜಾನೆ ಎರಡು ದೊಡ್ಡ ಚಿರತೆಗಳೊಂದಿಗೆ ಎರಡು ಮರಿ ಚಿರತೆಗಳು ಕಾಣಿಸಿಕೊಂಡಿವೆ. ಈ ಮೂಲಕ ಬೆಂಕಿಯಿಂದ ಯಾವುದೇ ವನ್ಯಜೀವಿಗೆ ಹಾನಿಯಾಗಿಲ್ಲ ಎಂಬುದು ಮನದಟ್ಟಾಗಿದೆ. ಚಾಮುಂಡಿ ಬೆಟ್ಟ ಮೀಸಲು ಅರಣ್ಯ 1516 ಎಕರೆ ವಿಶಾಲ ಪ್ರದೇಶ ಹೊಂದಿದ್ದು, ಇದೀಗ ಸಂಭವಿಸಿದ ಅಗ್ನಿ ಅನಾಹುತದಿಂದ 35ಎಕರೆಗೂ ಹೆಚ್ಚು ಅರಣ್ಯ ನಾಶವಾಗಿದೆ.

Chamundi Hills Fire New Fines For Safety Violations Announced

ಹಿಂದಿನ ಅಗ್ನಿ ಅನಾಹುತಗಳನ್ನು ಗಮನಿಸಿದರೆ 2019-20ರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಎಪ್ಪತ್ತು ಎಕರೆಯಷ್ಟು ಅರಣ್ಯ ನಾಶವಾಗಿತ್ತು. ಇದೀಗ ಜಾನುವಾರುಗಳು ಮತ್ತು ಮನುಷ್ಯರ ಅಕ್ರಮ ಪ್ರವೇಶವನ್ನು ತಡೆಯುವ ಸಲುವಾಗಿ ಬೆಟ್ಟದ ಸುತ್ತ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಬೆಟ್ಟದ ಅರಣ್ಯ ಪ್ರದೇಶ 15 ಕಿ.ಮೀಟರ್ ಸರಹದ್ದು ಹೊಂದಿದ್ದು, ಈಗಾಗಲೇ 550 ಮೀಟರ್ ತಡೆಗೋಡೆ ನಿರ್ಮಾಣ ಮಾಡಲಾಗಿದೆ. 250 ಮೀಟರ್ ತಡೆಗೋಡೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು, ಉಳಿದ ಜಾಗದಲ್ಲು ಕಾಂಪೌಡ್ ನಿರ್ಮಾಣ ಮಾಡುವ ಚಿಂತನೆ ನಡೆದಿದೆ.

ಅತಿರೇಕದ ವರ್ತನೆ ತೋರಿದರೆ ಕ್ರಮದ ಎಚ್ಚರಿಕೆ

ಚಾಮುಂಡಿಬೆಟ್ಟಕ್ಕೆ ನಾಲ್ಕು ಕಡೆ ಪ್ರವೇಶವಿದೆ. ಎಲ್ಲವನ್ನೂ ನಾವು ಮಾನಿಟರ್ ಮಾಡುವುದು ಕಷ್ಟವಾಗುತ್ತದೆ ಎಂದಿರುವ ಡಿಸಿಎಫ್ ಬಸವರಾಜು ಅವರು, ಬೆಟ್ಟಕ್ಕೆ ಬರುವ ಭಕ್ತರು ಬೀಡಿ, ಸಿಗರೇಟ್ ಸೇದಿ ಎಸೆಯಬೇಡಿ. ಸಣ್ಣ ಕಿಡಿ ಇಡೀ ಕಾಡನ್ನೇ ನಾಶ ಮಾಡಲಿದೆ ಎಂದು ಬುದ್ದಿವಾದ ಹೇಳಿದ್ದಾರೆ. ಅಲ್ಲದೆ ಚಾಮುಂಡಿಬೆಟ್ಟ ಪವಿತ್ರ ಸ್ಥಳ ಮಾತ್ರವಲ್ಲ ಮೀಸಲು ಅರಣ್ಯ ಪ್ರದೇಶವೂ ಹೌದು. ಭಕ್ತರು, ಸಾರ್ವಜನಿಕರು ಬೀಡಿ, ಸಿಗರೇಟ್ ಸೇದಿ ಎಸೆಯುವುದು, ಬೆಂಕಿ ಹಚ್ಚುವ ಕೆಲಸ ಮಾಡಬೇಡಿ. ದೈವ ಸನ್ನಿಧಿಯ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಮನವಿ ಮಾಡಿದ್ದಾರೆ.

ಇಷ್ಟೇ ಅಲ್ಲದೆ ಚಾಮುಂಡಿಬೆಟ್ಟದಲ್ಲಿ ರಸ್ತೆ ಬಿಟ್ಟು ಅರಣ್ಯ ಪ್ರದೇಶದೊಳಗೆ ತೆರಳುವುದು, ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಆಹಾರ ಸೇವಿಸುವುದು, ಬೀಡಿ, ಸಿಗರೇಟ್, ಮದ್ಯಪಾನ ಮಾಡುವವರಿಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದಾರೆ. ಬೆಟ್ಟಕ್ಕೆ ನಾಲ್ಕು ಕಡೆಗಳಿಂದ ಪ್ರವೇಶವಿದ್ದು, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಮುಖ್ಯ ದ್ವಾರ ಹೊರತುಪಡಿಸಿ ಉಳಿದ ಮೂರು ಪ್ರವೇಶ ರಸ್ತೆಗಳನ್ನು ಬಂದ್ ಮಾಡಲಾಗುತ್ತಿದೆ. ಇದೀಗ ಬೆಂಕಿ ಬಿದ್ದು ಅರಣ್ಯ ನಾಶವಾಗಿರುವುದರಿಂದ ಸಂಜೆ 6ಗಂಟೆಯಿಂದಲೇ ಬಂದ್ ಮಾಡುವ ಸಾಧ್ಯತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+