ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್, ಪ್ರವಾಸಿಗರಿಗೆ ಈ ಭಾಗಗಳಲ್ಲಿ ಎರಡು ದಿನ ನಿರ್ಬಂಧ
ಚಾಮರಾಜನಗರ, ಡಿಸೆಂಬರ್, 24: ಜನಪ್ರಿಯ ಅರಣ್ಯ ಪ್ರದೇಶಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಹೊಸ ವರ್ಷಾಚರಣೆಗೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಬಂಡೀಪುರದ ವಸತಿ ಗೃಹಕ್ಕೆ ಎರಡು ದಿನ ನಿರ್ಬಂಧ ಹೇರಲಾಗಿದೆ.
ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಡಿಸೆಂಬರ್ 31 ಮತ್ತು ಜನವರಿ 1ರಂದು ಪ್ರವಾಸಿಗರಿಗೆ ವಸತಿ ಗೃಹಗಳು ನೀಡದಿರಲು ಬಂಡೀಪುರ ಅರಣ್ಯ ಇಲಾಖೆ ನಿರ್ಧರಿಸಿದೆ.

ಬಂಡೀಪುರದ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಲಷ್ಟೇ ನಿರ್ಬಂಧ ಹೇರಲಾಗಿದ್ದು, ಸಫಾರಿ ಎಂದಿನಂತೆ ಇರಲಿದೆ. ಖಾಸಗಿ ರೆಸಾರ್ಟ್ಗಳಲ್ಲಿ ಯಾವುದೇ ನಿರ್ಬಂಧ ಇಲ್ಲ. ಆದರೆ ಪರಿಸರ ಸೂಕ್ಷ್ಮ ವಲಯದಲ್ಲಿರುವ ಹೋಂ ಸ್ಟೇ, ರೆಸಾರ್ಟ್ಗಳಲ್ಲಿ ಡಿಜೆ, ಪಟಾಕಿ ಸಿಡಿಸುವುದು, ಲೈಟಿಂಗ್ ಸೇರಿದಂತೆ ಕೆಲ ನಿರ್ಬಂಧ ಹೇರುವ ಸಾಧ್ಯತೆಯಿದೆ.
ವಾಹನ ಸಂಚಾರ ಆರಂಭ
ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಡಿಸೆಂಬರ್ 18ರಿಂದ 20ರವರೆಗೆ ರಸ್ತೆ ಡಾಂಬರೀಕರಣ ಉದ್ದೇಶದಿಂದ ನಿರ್ಬಂಧಿಸಲಾಗಿದ್ದ ವಾಹನ ಸಂಚಾರ ಮತ್ತೆ ಆರಂಭಗೊಂಡಿತ್ತು.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ ಹಿನ್ನೆಲೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 11.20 ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿ ದುರಸ್ತಿಪಡಿಸಲಾಗಿದೆ. ಈ ಕಾರಣದಿಂದ ಮೂರು ದಿನಗಳ ಕಾಲ ನಿರ್ಬಂಧಿಸಿದ ಬಸ್ ಸಂಚಾರ ಗುರುವಾರ ಎಂದಿನಂತೆ ಪ್ರಾರಂಭವಾಗಿದೆ.
ಕಳೆದ ಮೂರು ದಿನಗಳ ಬೆಟ್ಟಕ್ಕೆ ನಿರ್ಬಂಧ ಹೇರಿದ ಹಿನ್ನೆಲೆ ಗುರುವಾರ ಬೆಳಗ್ಗೆಯಿಂದ ಪ್ರವೇಶ ಆರಂಭವಾದರೂ ಸಹ ಭಕ್ತಾದಿಗಳು ಹಾಗೂ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಿತ್ತು. ಕೇವಲ ಮೂರು ಕೆಎಸ್ಆರ್ಟಿಸಿ ಬಸ್ಗಳನ್ನು ಮಾತ್ರ ಗೋಪಾಲಸ್ವಾಮಿ ಬೆಟ್ಟಕ್ಕೆ ಬಿಡಲಾಗಿತ್ತು ಎಂದು ಡಿಪೋ ವ್ಯವಸ್ಥಾಪಕರಾದ ಪುಷ್ಪಾ ಮಾಹಿತಿ ನೀಡಿದರು. ಈ ಮಧ್ಯೆ ಅರಣ್ಯ ಇಲಾಖೆಯಿಂದಲೂ ಬೆಟ್ಟಕ್ಕೆ ಮೂರು ಜೀಪ್ಗಳು ಎಂದಿನಂತೆ ಸಂಚಾರ ಮಾಡಿವೆ.
ಗೋಪಾಲಸ್ವಾಮಿ ಬೆಟ್ಟದ ಹದಗೆಟ್ಟ ರಸ್ತೆ ದುರಸ್ತಿ ಪಡಿಸಲಾಗಿದ್ದು, ಬಸ್ ಸಂಚಾರ ಎಂದಿನಂತೆ ಗುರುವಾರದಿಂದ ಪ್ರಾರಂಭಗೊಂಡಿದೆ. ಭಕ್ತಾದಿಗಳು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿ, ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ ದೇವರ ದರ್ಶನ ಪಡೆಯಬಹುದು ಎಂದು ಗುಂಡ್ಲುಪೇಟೆ ಡಿಪೋ ವ್ಯವಸ್ಥಾಪಕಿ ಪುಷ್ಪಾ ತಿಳಿಸಿದ್ದಾರೆ.












Click it and Unblock the Notifications