ಆಷಾಢ ಏಕಾದಶಿ: ಪಂಢರಪುರಕ್ಕೆ ವಿಶೇಷ ರೈಲು, ವೇಳಾಪಟ್ಟಿ
ಬೀದರ್, ಜುಲೈ 11 : ಆಷಾಢ ಏಕಾದಶಿ ಪ್ರಯುಕ್ತ ಮಹಾರಾಷ್ಟ್ರದಲ್ಲಿರುವ ಪಂಢರಪುರಕ್ಕೆ ಸಾವಿರಾರು ಭಕ್ತರು ತೆರಳುತ್ತಾರೆ. ಭಕ್ತರ ಅನುಕೂಲಕ್ಕಾಗಿ ಬೀದರ್ನಿಂದ ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ. ರೈಲು ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
ಬೀದರ್ ಸಂಸದ ಸಾಗರ್ ಖಂಡ್ರೆ ಈ ಕುರಿತು ಫೇಸ್ಬುಕ್ ಮೂಲಕ ಮಾಹಿತಿ ನೀಡಿದ್ದಾರೆ. ಸಂಸದರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಭೇಟಿಯಾಗಿ ವಿಶೇಷ ರೈಲು ಓಡಿಸುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ರೈಲ್ವೆ ಸಚಿವಾಲಯ ಆಷಾಢ ಏಕಾದಶಿ ಪ್ರಯುಕ್ತ ಬೀದರ್ನಿಂದ ಪಂಢರಪುರಕ್ಕೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.

ರೈಲು ವೇಳಾಪಟ್ಟಿ: ವಿಶೇಷ ರೈಲು (ರೈಲು ಸಂಖ್ಯೆ 07505) ಜುಲೈ 16ರಂದು ಭಾಲ್ಕಿ ರೈಲು ನಿಲ್ದಾಣದಿಂದ ರಾತ್ರಿ 9.15 ಗಂಟೆಗೆ ಹೊರಟು, ಬೀದರ್ 9.50ಕ್ಕೆ ಹೊರಡಲಿದ್ದು, ಜುಲೈ 17ರಂದು ಬೆಳಗ್ಗೆ 10.35ಕ್ಕೆ ಪಂಢರಪುರಕ್ಕೆ ತಲುಪಲಿದೆ.
ಜುಲೈ 17ರಂದು ರೈಲು ಸಂಖ್ಯೆ 07506 ಪಂಢರಪುರದಿಂದ ರಾತ್ರಿ 9.40ಕ್ಕೆ ಹೊರಟು, ಜುಲೈ 18ರಂದು ಬೆಳಗ್ಗೆ 7.15ಕ್ಕೆ ಬೀದರ್ಗೆ ಮತ್ತು ಬೆಳಗ್ಗೆ 8ಕ್ಕೆ ಭಾಲ್ಕಿಗೆ ತಲುಪಲಿದೆ.
ಪಾಂಡುರಂಗನ ದರ್ಶನಕ್ಕೆ ಹೋಗುವ ಭಕ್ತರು ಈ ವಿಶೇಷ ರೈಲಿನ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಮತ್ತೊಂದು ಕಡೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಬೆಳಗಾವಿ-ಪಂಢರಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಬೇಕು ಎಂದು ಮನವಿ ಮಾಡಿದ್ದಾರೆ. ಸಾವಿರಾರು ಭಗವಾನ್ ಶ್ರೀ ವಿಠ್ಠಲ್ ರುಕ್ಮಿಣಿ ಭಕ್ತರು ಮಹಾರಾಷ್ಟ್ರ ರಾಜ್ಯದ ದೇವಸ್ಥಾನಕ್ಕೆ ತಲುಪಲು ಅನುಕೂಲವಾಗುವಂತೆ ಪ್ರತಿದಿನದ ಎಕ್ಸ್ಪ್ರೆಸ್ ರೈಲು ಓಡಿಸಬೇಕು ಎಂದು ಮನವಿ ಮಾಡಲಾಗಿದೆ.
ಪಂಢರಪುರ ದೇವಾಲಯ ಮಹಾರಾಷ್ಟ್ರದ ಸೊಲ್ಲಾಪುರ ನಗರದ ಸಮೀಪದಲ್ಲಿದೆ. ಈ ದೇವಾಲಯಕ್ಕೆ ಕರ್ನಾಟಕ ಮಾತ್ರವಲ್ಲ ವಿವಿಧ ರಾಜ್ಯಗಳ ಭಕ್ತರು ಆಗಮಿಸುತ್ತಾರೆ. ಆಷಾಢ ಏಕಾದಶಿ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ.
ಆಷಾಢ ಏಕಾದಶಿಯನ್ನು ಮಹಾ ಏಕಾದಶಿ, ಶಯನಿ ಏಕಾದಶಿ, ಪ್ರಥಮ ಏಕದಶಿ ಎಂದು ಕರೆಯಲಾಗುತ್ತದೆ. ಆಷಾಢ ಮಾಸದ ಶುಕ್ಲ ಪಕ್ಷದ 11ನೇ ದಿನ ಏಕದಶಿ ಬರುತ್ತದೆ. ಈ ಏಕಾದಶಿ ವಿಷ್ಣುವಿನ ಭಕ್ತರಿಗೆ ಮಹತ್ವದ್ದು. ಈ ದಿನ ವಿಷ್ಣು ಮತ್ತು ಲಕ್ಷ್ಮೀ ಪೂಜೆ ಮಾಡಲಾಗುತ್ತದೆ.
ಹಲವು ಭಕ್ತರು ಉಪವಾಸವಿದ್ದು, ಮುಂದಿನ ನಾಲ್ಕು ತಿಂಗಳ ಕಾಲ ಚಾತುರ್ಮಾಸ ಆಚರಿಸಬೇಕಾದ ವ್ರತಗಳನ್ನು ಇಟ್ಟುಕೊಳ್ಳುತ್ತಾರೆ. ಯಾವುದಾದರೂ ಆಹಾರ ಪರಾರ್ಥವನ್ನು ತ್ಯಜಿಸುವ ಬಗ್ಗೆ ಹಾಗೂ ಪ್ರತಿ ಏಕಾದಶಿ ಆಚರಣೆಯ ನಿರ್ಧಾರ ಕೈಗೊಳ್ಳುತ್ತಾರೆ.
ಈ ಆಷಾಢ ಏಕಾದಶಿಯಂದು ಪಂಢರಪುರಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುತ್ತಾರೆ. ಅವರ ಅನುಕೂಲಕ್ಕಾಗಿ ಒಂದು ಬಾರಿಯ ವಿಶೇಷ ರೈಲನ್ನು ಭಾರತೀಯ ರೈಲ್ವೆ ಓಡಿಸುತ್ತಿದೆ. ಭಕ್ತರು ರೈಲು ಸೇವೆಯ ಸದುಪಯೋಗ ಮಾಡಿಕೊಳ್ಳಲು ಕರೆ ನೀಡಲಾಗಿದೆ.
ಆಷಾಢ ಏಕಾದಶಿ ಸಂದರ್ಭದಲ್ಲಿ ಭಕ್ತರು ಸೊಲ್ಲಾಪುರದ ಪಂಢರಪುರದ ಯಾತ್ರೆ ಕೈಗೊಳ್ಳುತ್ತಾರೆ. ಫಂಡರಪುರ ವಿಷ್ಣುವಿನ ಸ್ಥಳೀಯ ರೂಪವಾದ ವಿಠ್ಠಲನ ಆರಾಧನೆಯ ಕೇಂದ್ರವಾಗಿದೆ. ಚಂದ್ರಭಾಗಾ ನದಿಯ ದಂಡೆಯ ಮೇಲೆ ದೇವಾಲಯವಿದೆ.











Click it and Unblock the Notifications