ನಮಃ ಶಿವಾಯ : ಬಿಜಾಪುರದ ಇನ್ನೊಂದು ಆಕರ್ಷಣೆ!
ಬಿಜಾಪೂರದ ಗೋಲ್ಗುಂಬಜ್ ಜಗತ್ಪ್ರಸಿದ್ಧ. ಅಲ್ಲಿ ತಲೆ ಎತ್ತಿರುವ ಅಗಾಧ ಗಾತ್ರದ ಶಿವನ ವಿಗ್ರಹ ಬಿಜಾಪೂರದ ಇನ್ನೊಂದು ಆಕರ್ಷಣೆ. ಶಿವರಾತ್ರಿಯವರೆವಿಗೂ ಕಾಯದೆ ಶಿವನ ನೆನೆಯಿರಿ. ನಿಮ್ಮ ಎರಡು ಬಿಲ್ವಪತ್ರೆಯನ್ನು ಆತನಿಗೆ ಒಪ್ಪಿಸಿ!
- ಚಂದ್ರಮ, ಬೆಂಗಳೂರು.
ಕಳೆದ ಶಿವರಾತ್ರಿಯ ದಿವಸ ಬಿಜಾಪೂರಲ್ಲೊಂದು ಶಿವಮೂರ್ತಿಯ ವಿಗ್ರಹ ಪ್ರತಿಷ್ಠಾಪನೆಯಾಗಿದೆ. ಈ ವಿಷಯವನ್ನು ನೀವು ಮಾಧ್ಯಮಗಳ ಮೂಲಕ ತಿಳಿದಿರಬಹುದು. ನೋಡುವುದಕ್ಕೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿರುವ ಅಗಾಧ ಶಿವಮೂರ್ತಿಯನ್ನು ಹೋಲುವ ಈ ಮೂರ್ತಿ ದೇಶದಲ್ಲಿ ಎರಡನೆ ಅತಿ ದೊಡ್ಡ ಶಿವನ ಮೂರ್ತಿ ಎನಿಸಿದೆ..
ಮೊದಲ ಸ್ಥಾನ ಪಡೆದ ಶಿವನ ಮೂರ್ತಿ ಮುರುಡೇಶ್ವರದಲ್ಲಿದೆ. ಬಿಜಾಪೂರದಲ್ಲಿರುವ ಮೂರ್ತಿಯ ಎತ್ತರ 85 ಅಡಿ, ಮುರುಡೇಶ್ವರದಲ್ಲಿರುವ ಮೂರ್ತಿಯ ಎತ್ತರ 125 ಅಡಿ. ನೋಡಲು ಸುಂದರವಾಗಿರುವ ಈ ಮೂರ್ತಿ ಬಿಜಾಪೂರ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗತೊಡಗಿದೆ. ಈ ಮೊದಲು ಗೋಲಗುಂಬಜ್ ಪ್ರಮುಖ ಆಕರ್ಷಣೆಯಾಗಿತ್ತು. ಶಿವನ ಮೂರ್ತಿ ಗೋಲಗುಂಬಜ್ಗೆ ತುಂಬಾ ಹತ್ತಿರದಲ್ಲೆ ಇದೆ. ಈ ಮೂರ್ತಿಯನ್ನು ಮಾಡಿದ್ದು ಶಿವಮೊಗ್ಗದ ಕಲಾವಿದರು. ಇದನ್ನು ಪೂರ್ಣಗೊಳಿಸಲು ಅವರು ತೆಗೆದುಕೊಂಡ ಸಮಯ 1 ವರ್ಷ.
ಈ ಮೂರ್ತಿಯನ್ನು ಮಾಡಿಸಿದವರು ಟಿ.ಕೆ.ಪಾಟೀಲ ಚಾರಿಟೆಬಲ್ ಟ್ರಸ್ಟ್. ಬಸಂತಕುಮಾರ ಪಾಟೀಲರು ಇದರ ಚೆರಮನ್. ಇವರು ಕನ್ನಡ ಸಿನಿಮಾ ರಂಗದಲ್ಲಿರುವವರು. ಈ ಮೂರ್ತಿಯನ್ನು ಏಕೆ ಮಾಡಿಸಿದರೆಂಬ ಕಾರಣ ತುಂಬಾ ಇಂಟರೆಸ್ಟಿಂಗ್ ಆಗಿದೆ. ಒಮ್ಮೆ ಅವರು ಬೆಂಗಳೂರಿನಲ್ಲಿರುವ ಶಿವನ ಮೂರ್ತಿಯನ್ನು ನೋಡಲು ತಮ್ಮ ಪರಿವಾರದವರೊಂದಿಗೆ ಹೊಗಿದ್ದರಂತೆ. ಆದರೆ ಅಲ್ಲಿ ಎಷ್ಟೊಂದು ಜನರಿದ್ದರೂ ಅಂದರೆ, ಇವರಿಗೆ ಶಿವನ ದರ್ಶನವೆ ಆಗಲಿಲ್ಲ. ಆಗಲೆ ಅವರು ನಿರ್ಧರಿಸಿದ್ದು ತಾವು ಒಂದು ಶಿವನ ಮೂರ್ತಿಯನ್ನು ಮಾಡಿಸಬೇಕೆಂದು.
ಈ ಮೂರ್ತಿಯನ್ನು ಮಾಡಿಸುವುದರ ಜೊತೆಗೆ ಅವರು ತಮ್ಮ ತಾಯಿ ತುಳಸಾಬಾಯಿಯವರ ತೂಕದಷ್ಟು, ಸುಮಾರು 58 ಕೆಜಿಯಷ್ಟು ಬಂಗಾರವನ್ನು ದಾನ ಮಾಡಿದ್ದಾರೆ. ಈ ದಾನದಿಂದ ಶಿವನ ಮೂರ್ತಿಯ ಹತ್ತಿರವೆ ಅನಾಥಾಶ್ರಮ ಮತ್ತು ವೃದ್ದಾಶ್ರಮ ಕಟ್ಟಿಸುತ್ತಿದ್ದಾರೆ. ಈ ಎಲ್ಲವನ್ನೂ ನಿಭಾಯಿಸಿಕೊ0ಡು ಹೋಗುತ್ತಿರುವವರು ಬಸಂತಕುಮಾರ ಪಾಟೀಲರ ತಮ್ಮಂದಿರಾದ ಆರ್.ಟಿ.ಪಾಟೀಲ ಮತ್ತು ಟ್ರಸ್ಟಿನ ಇತರ ಸದಸ್ಯರು.
ನೀವು ಬಿಜಾಪೂರ ನೋಡಿದ್ದೀರಾ? ಅಲ್ಲಿಗೆ ಹೋಗಿ ಎಷ್ಟು ವರ್ಷ ಆಯಿತು? ಇನ್ನೊಮ್ಮೆ ಬಿಜಾಪೂರದ ಕಡೆ ಹೋದರೆ ಶಿವನ ದರ್ಶನ ಮಾಡಲು ಮರೆಯದಿರಿ. ಶಿವಶಿವ ಎಂದರೆ ಭಯವಿಲ್ಲ.












Click it and Unblock the Notifications