ಚಿಕ್ಕಮಗಳೂರು ಪ್ರಕೃತಿ ಮಡಿಲ ದೇವವೃಂದ ಕ್ಷೇತ್ರ
* ಭಾರತಿ ಚಂದ್ರಶೇಖರ್, ಬೆಂಗಳೂರು
ಜಗದ ಒಡೆಯನಾದ ಪರಮೇಶ್ವರನು ಶ್ರೀ ದೇವವೃಂದದಲ್ಲಿ ಕ್ಷೇತ್ರಾಧಿಪತಿ ಶ್ರೀ ಪ್ರಸನ್ನ ರಾಮೇಶ್ವರನಾಗಿ ಭೂಮಿಗೆ ಇಳಿದು ನಿಂತಿದ್ದಾನೆ ಎಂದು ಪ್ರತೀತಿ. ಈ ಪ್ರದೇಶಕ್ಕೆ ಪುರಾತನವಾದ ಇತಿಹಾಸವಿದೆ. ಯುಗ ಯುಗಗಳ ಕಾಲದ ಅವಧಿಯನ್ನು ವ್ಯಾಪಿಸಿಕೊಂಡಿದೆ. ಸ್ವಯಂಭು ಲಿಂಗ ಆಕಾರದಲ್ಲಿ ಉದ್ಬವಿಸಿರುವ ಪರಮೇಶ್ವರನು ಭಕ್ತರ ಇಷ್ಟಾರ್ಥವನ್ನು ಅನುಗ್ರಹಿಸುತ್ತಾನೆ. ಇಲ್ಲಿ ದೇವತೆಗಳ ಸಮೂಹವಿದ್ದುದ್ದರಿಂದ ದೇವವೃಂದವೆಂದು, ಪರಶುರಾಮನು ಇಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಇಲ್ಲಿ ತಪಸ್ಸು ಮಾಡಿದಾಗ ಶಿವನು ಒಲಿದು ಪ್ರಸ್ಸನ್ನ ರಾಮೆಶ್ವರನೆಂದು ನಾಮಾಂಕಿತವಾಯ್ತೆಂದು ಪ್ರತೀತಿ.
ಇಲ್ಲಿಯ ಲಿಂಗದ ಶಿರಸ್ಸಿಗೆ ಇಟ್ಟ ಗಂಧವು ಕಪ್ಪಾಗಿ ಪರಿವರ್ತಿತಗೊಂಡು ಅದು ಮಹಾ ಪ್ರಸಾದವಾಗುತ್ತದೆ. ಈಗಲೂ ಮಹಾಪ್ರಸಾದವಾದ ಗಂಧವನ್ನು ಶಿರಸ್ಸಿಗೆ ಧಾರಣೆ ಮಾಡಿದಲ್ಲಿ ಇಷ್ಟಾರ್ಥಸಿದ್ದಿಗಳು ನೆರವೇರುತ್ತವೆ ಎಂದು ಭಕ್ತಾದಿಗಳು ಬಲವಾಗಿ ನಂಬುತ್ತಾರೆ. ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಹೇಳುತ್ತಾರೆ. ದೇವಾಲಯವು ಸುಮಾರು 2000 ವರ್ಷಕ್ಕೂ ಹಿಂದೆ ನಿರ್ಮಿಸಲಾಯಿತೆಂದು ಇತಿಹಾಸ ಹೇಳುತ್ತದೆ.
ಇಲ್ಲಿಯ ಪ್ರಧಾನ ಅರ್ಚಕರಾದ ಡಿ.ವಿ. ರಾಮಭಟ್ಟರು ದೇವಸ್ತಾನದ ಪುರಾಣ ಇತಿಹಾಸವನ್ನು ಸವಿವರವಾಗಿ ತಿಳಿಸುತ್ತಾರೆ. "ಶ್ರೀ ಪ್ರಸ್ಸನ್ನ ರಾಮೇಶ್ವರ ಕ್ಷೇತ್ರ ಮಹಾತ್ಮೆ" ಎಂಬ ಪುಸ್ತಕವನ್ನು ಕರ್ನಾಟಕದ ಅಗ್ರಮಾನ್ಯ ಲೇಖಕರಾದ ಎನ್.ಪಿ. ಶಂಕರನಾರಯಣರಾಯರು ಬರೆದಿದ್ದಾರೆ. ಈ ದೇವಸ್ತಾನಕ್ಕೆ ಸಂಬಂಧಪಟ್ಟ ಕೈ ಬರಹದಲ್ಲಿದ್ದ ಗ್ರಂಥವಗಳನ್ನು, ಶಾಸನಗಳನ್ನು ಆಧರಿಸಿಕೊಂಡು, ಇತಿಹಾಸಿಕ ದಾಖಲೆಗಳನ್ನು ಹುಡುಕಿ ಆಧಾರ ಸಹಿತವಾಗಿ ಪುಸ್ತಕವನ್ನು ಬರೆದ್ದಿದ್ದಾರೆ. ಈ ಪುಸ್ತಕವು ದೇವಸ್ಥಾನದಲ್ಲಿ ಲಭ್ಯವಿದೆ.
ಈಗ ದೇವಸ್ಥಾನವು ಕರ್ನಾಟಕ ಸರ್ಕಾರದ ಧಾರ್ಮಿಕ, ದತ್ತಿ ಇಲಾಖೆಗೆ ಸೇರಿದೆ. ಇಲ್ಲಿ ದಿನ ನಿತ್ಯವೂ ತ್ರಿಕಾಲ ಪೂಜಾ ಕಾರ್ಯಗಳು ನಡೆಯುತ್ತವೆ. ವಿಶೇಷ ದಿನಗಳಲ್ಲಿ ಉತ್ಸವ, ರಥೋತ್ಸವಾದಿಗಳು ನೆರವೇರಿಸಲು ವೃತ್ತಾಕಾರದ ವಿಶೇಷವಾದ ಸುಂದರ ಕುಸುರಿ ಕೆಲಸ ಮಾಡಿದ ಭವ್ಯವಾದ ರಥವಿದೆ. ಚತುರ ಶಿಲ್ಪಿಗಳಿಂದ ಮಾಡಲ್ಪಟ್ಟ ಈ ರಥವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ಪ್ರದೇಶದ ಸೊಬಗು ಎಂತಹ ನಾಸ್ತಿಕನನ್ನು ಆಸ್ತಿಕನನ್ನಾಗಿಸುತ್ತದೆ. ಇಲ್ಲಿನ ಸೌಂದರ್ಯ ಕವಿ ಮನಗಳನ್ನೂ ಸೂರೆಗೊಂಡಿದೆ. ವಾಲ್ಮೀಕಿ ಮಹರ್ಷಿಗಳು ತಮ್ಮ ರಾಮಾಯಣ ಮಹಾಕಾವ್ಯದಲ್ಲಿ ಈ ಸಹ್ಯಾದ್ರಿ ಪ್ರದೇಶದ ರುದ್ರ ರಮಣೀಯತೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪಂಪ ಮಹಾ ಕವಿ ಇಲ್ಲಿಯ ಸೊಬಗನ್ನು ಕುರಿತು ಹಾಡಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕಾವ್ಯ ಸ್ಫೂರ್ತಿಯ ಸೆಲೆ ಕೂಡ ಈ ಕ್ಷೇತ್ರವಾಗಿದೆ.
ಇಲ್ಲಿನ ಮಲೆನಾಡು ಪ್ರಕೃತಿ ಸೌಂದರ್ಯವು ರಮಣೀಯ. ಪರಶುರಾಮ ಸರೋವರ, ಜಪಾವತಿ ನದಿ, ಹೇಮಾವತಿ ನದಿ, ಬೆಟ್ಟ ಗುಡ್ಡಗಳು, ನಯನ ಮನೋಹರವಾದ ಸದಾ ಹಸಿರಿನಿಂದ ಕೂಡಿದ ಈ ನಾಡು ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಪೆಂಪು.
ಶ್ರೀ ದೇವವೃಂದ ಕ್ಷೇತ್ರವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನಲ್ಲಿ ಇದೆ. ಮೂಡಿಗೆರೆಯಿಂದ 21 ಕಿ.ಮೀ ದೂರ , ಸಕಲೇಶಪುರದಿಂದ 29 ಕಿ.ಮೀ.ದೂರ ಇದೆ. ಸಕಲೇಶಪುರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಶ್ರೀ ಕ್ಷೇತ್ರಕ್ಕೆ ಬರಲು ಹಾಸನ, ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರುಗಳಿಂದ ನೇರ ಬಸ್ ಸೌಕರ್ಯಗಳಿದೆ.
ದೇವವೃಂದ ಕ್ಷೇತ್ರದ ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ