ಭಾರತದಲ್ಲಿ ವರುಣನ ಕೋಪಕ್ಕೆ ನಲುಗಿದ ಪ್ರಮುಖ ರಾಜ್ಯಗಳ ಸ್ಥಿತಿ ಹೇಗಿದೆ?
ತಿರುವನಂತಪುರಂ, ಅಕ್ಟೋಬರ್ 19: ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ದೇಶದ ಹಲವು ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇರಳ, ಉತ್ತರಾಖಂಡ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಸೋಮವಾರ ಸುರಿದ ಧಾರಾಕಾರ ಮಳೆಯಿಂದ ಐವರು ಪ್ರಾಣ ಬಿಟ್ಟಿದ್ದಾರೆ. ಭಾನುವಾರದಿಂದ ಈವರೆಗೂ ಕೇರಳದಲ್ಲಿ ಮಳೆ ಸೃಷ್ಟಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ 27ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಕೇರಳ ಹೊರತುಪಡಿಸಿದಂತೆ ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ. ರಾಜ್ಯವಾರು ಮಳೆ ಸೃಷ್ಟಿಸಿದ ಅವಾಂತರದ ಸ್ಪಷ್ಟ ಚಿತ್ರಣ ಇಲ್ಲಿದೆ ಓದಿ.

ಉತ್ತರಾಖಂಡ್ ಮಳೆಗೆ ಒಂದೇ ದಿನ ಐವರು ಬಲಿ
ಮಳೆ ಸಂಬಂಧಿತ ಘಟನೆಯಲ್ಲಿ ನೇಪಾಳ ಮೂಲದ ಮೂವರು ಕಾರ್ಮಿಕರು ಸೇರಿದಂತೆ ಸೋಮವಾರ ಒಂದೇ ದಿನ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. "ನೇಪಾಳದ ಕಾರ್ಮಿಕರು ಪೌರಿ ಜಿಲ್ಲೆಯ ಲ್ಯಾನ್ಸ್ಡೌನ್ ಬಳಿಯ ಸಂಖಲ್ನಲ್ಲಿ ಟೆಂಟ್ನಲ್ಲಿದ್ದರು. ಮಳೆಯಿಂದಾಗಿ ಹೊಲದಲ್ಲಿದ್ದ ಅವಶೇಷಗಳೊಂದಿಗೆ ನೀರು ಕಾರ್ಮಿಕರ ಟೆಂಟ್ ಕಡೆಗೆ ಹರಿದಿದ್ದು, ಅವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಇಬ್ಬರು ಗಾಯಾಳುಗಳನ್ನು ಕೋಟ್ವಾರ್ ಆಸ್ಪತ್ರೆಗೆ ದಾಖಲಿಸಲಾಗಿದೆ," ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಜಯ್ ಕುಮಾರ್ ಜೋಗ್ದಾಂಡೆ ತಿಳಿಸಿದ್ದಾರೆ.
ಚಂಪಾವತ್ ಜಿಲ್ಲೆಯ ಸೆಲ್ಖೋಲಾದಲ್ಲಿ ಭೂಕುಸಿತದಿಂದ ಮನೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ. ಇದರ ಮಧ್ಯೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಡೆಹ್ರಾಡೂನ್ ರಾಜ್ಯದ ವಿಪತ್ತು ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಈ ಮಧ್ಯೆ ವಾರಾಂತ್ಯದಲ್ಲಿ ಹರಿದ್ವಾರ ಮತ್ತು ಋಷಿಕೇಶಕ್ಕೆ ತೆರಳಲಿರುವ ಚಾರ್ಧಮ್ ಯಾತ್ರಿಕರಿಗೆ ಹವಾಮಾನ ಪರಿಸ್ಥಿತಿ ಸುಧಾರಿಸುವವರೆಗೆ ಹಿಮಾಲಯದ ದೇವಸ್ಥಾನಗಳಿಗೆ ಹೋಗದಂತೆ ರಾಜ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಋಷಿಕೇಶದಲ್ಲಿ ಚಂದ್ರಭಾಗ ಸೇತುವೆ, ತಪೋವನ್, ಲಕ್ಷ್ಮಣ ಜೂಲ ಮತ್ತು ಮುನಿ-ಕಿ-ರೆತಿ ಭದ್ರಕಾಳಿ ತಡೆಗಳನ್ನು ದಾಟಲು ಪ್ರಯಾಣಿಕರ ವಾಹನಗಳಿಗೆ ಅನುಮತಿ ನೀಡಲಾಗುತ್ತಿಲ್ಲ.

ಕೇರಳದಲ್ಲಿ ಮಳೆಯಿಂದ 27 ಜನ ಸಾವು
ಕೇರಳದಲ್ಲಿ ಭೂಕುಸಿತ ಮತ್ತು ಪ್ರವಾಹ ಸೇರಿದಂತೆ ಭಾರೀ ಮಳೆಯಿಂದ ಸೋಮವಾರದ ವೇಳಗೆ ಸಾವನ್ನಪ್ಪಿರುವವರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ರಾಜ್ಯದ ಹಲವಾರು ಪ್ರದೇಶಗಳಲ್ಲಿ ನೀರಿನ ಮಟ್ಟವು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, 11 ಅಣೆಕಟ್ಟುಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. "ಪಥನಂತಿಟ್ಟದ ಕಕ್ಕಿ ಅಣೆಕಟ್ಟಿನ ಎರಡು ಶೆಟರ್ಗಳನ್ನು ತೆರೆಯಲಾಗಿದ್ದು, ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ತೀರ್ಥಯಾತ್ರೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ," ಎಂದು ರಾಜ್ಯ ಕಂದಾಯ ಸಚಿವ ಕೆ ರಾಜನ್ ಹೇಳಿದ್ದಾರೆ. ಅಕ್ಟೋಬರ್ 20 ಮತ್ತು 24ರ ನಡುವೆ ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ.

ರಾಷ್ಟ್ರ ರಾಜಧಾನಿಯಲ್ಲೂ ಧಾರಾಕಾರ ಮಳೆ
ಸೋಮವಾರ ನವದೆಹಲಿಯಲ್ಲೂ ಭಾರಿ ಮಳೆಯಾಗಿದ್ದು, ನಗರದ ಹಲವು ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆ ಸೃಷ್ಟಿಯಾಗಿತ್ತು. ಕನಿಷ್ಠ ತಾಪಮಾನ 23.9 ಡಿಗ್ರಿ ಸೆಲ್ಸಿಯಸ್ ಆಗಿತ್ತು. ದೆಹಲಿಯಲ್ಲಿ ಭಾನುವಾರ ಬೆಳಿಗ್ಗೆ 8.30 ರಿಂದ ಸೋಮವಾರ ಬೆಳಗ್ಗೆ 8.30 ರ ನಡುವೆ 87.9 ಮಿಮೀ ಮಳೆಯಾಗಿದೆ. ಈ ವರ್ಷ ಅಕ್ಟೋಬರ್ನಲ್ಲಿ ಗರಿಷ್ಠ 94.6 ಮಿಮೀ ಮಳೆ ದಾಖಲಾಗಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯ ಪ್ರಕಾರ, ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ 1960ರ ಬಳಿಕ ಮೊದಲ ಬಾರಿಗೆ ದೆಹಲಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, ನಗರದಲ್ಲಿ 93.4 ಮಿಮೀ ಮಳೆಯಾಗಿದೆ.

ಮಧ್ಯಪ್ರದೇಶದಲ್ಲಿ ಮುಂಗಾರು ಮಳೆ
ಮಧ್ಯಪ್ರದೇಶದ ಬಹುತೇಕ ಎಲ್ಲ ಭಾಗಗಳಲ್ಲಿ ಸೋಮವಾರ ಮುಂಗಾರು ಮಳೆ ಸುರಿಯಿತು. ರಾಜ್ಯದಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಭೋಪಾಲ್ ಕಚೇರಿಯ ಹಿರಿಯ ಹವಾಮಾನ ತಜ್ಞ ಪಿ ಕೆ ಸಾಹಾ ಅವರು ಪಿಟಿಐ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹವಾಮಾನ ವೈಪರೀತ್ಯದಿಂದಾಗಿ ಖಾಂಡ್ವಾಕ್ಕೆ ತಮ್ಮ ಪ್ರಚಾರ ಭೇಟಿಯನ್ನು ಮುಂದೂಡಿದರು. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮುಖ್ಯಮಂತ್ರಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿದ್ದ ಸ್ಥಳದಲ್ಲಿ ಕೆಸರುಮಯಗೊಂಡಿತ್ತು.

ಪಶ್ಚಿಮ ಬಂಗಾಳ ಮಳೆ
ಕೋಲ್ಕತಾ ಸೇರಿದಂತೆ ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ನಿರಂತರವಾಗಿ ಭಾರೀ ಮಳೆಯಾಗಿದೆ. ದಕ್ಷಿಣ ಬಂಗಾಳದ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

ಒಡಿಶಾ
ಪಶ್ಚಿಮ ಬಂಗಾಳದ ಗಂಗಾ ನದಿಯಲ್ಲಿ ಕಡಿಮೆ ಒತ್ತಡದ ಪ್ರದೇಶದಿಂದಾಗಿ ಒಡಿಶಾ ಭಾರೀ ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಗಾಳಿಯ ವೇಗ ಹೆಚ್ಚಾಗುವವರೆಗೆ ಮೀನುಗಾರರಿಗೆ ಒಡಿಶಾ ಕರಾವಳಿಯಲ್ಲಿ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮಂಗಳವಾರ ಬೆಳಿಗ್ಗೆ 8.30 ರವರೆಗೆ ಬಾಲಸೋರ್ ಮತ್ತು ಮಯೂರ್ಭಂಜ್ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರೀ ಅಥವಾ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಭಾರಿ ಮಳೆ
ಉತ್ತರ ಪ್ರದೇಶದ ಮುಜಫರ್ ನಗರ, ಶಾಮ್ಲಿ, ಬಾಗ್ಪತ್ ಮತ್ತು ಮೀರತ್ನಂತಹ ಜಿಲ್ಲೆಗಳಲ್ಲಿ ಭಾನುವಾರ ಬೆಳಿಗ್ಗೆಯಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಜಿಲ್ಲೆಗಳ ಹಲವು ಭಾಗಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದ್ದು, ವಿದ್ಯುತ್ ಸರಬರಾಜು ವ್ಯತ್ಯಯಕ್ಕೆ ಕಾರಣವಾಗಿದೆ. ಮಳೆ ನೀರಿನಲ್ಲಿ ಬುಧನ ಪಟ್ಟಣ ಜಲಾವೃತಗೊಂಡ ಹಿನ್ನೆಲೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಪ್ರಚಾರವನ್ನು ರದ್ದುಗೊಳಿಸಿದರು. ಇನ್ನೊಂದು ಕಡೆ ರಾಜಸ್ಥಾನದಲ್ಲಿ ಹಲವು ಕಡೆಗಳಲ್ಲಿ ಸಾಧಾರಣ ಮಳೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಸೋಮವಾರ ಭಾರೀ ಮಳೆಯಾಗಿದೆ.












Click it and Unblock the Notifications