ಕಣ್ವ ಕೆಲಸಕ್ಕೆ ಸೇರಿ ಐವತ್ತು ಲಕ್ಷ ಕಳೆದುಕೊಂಡ ಅರಣ್ಯ ಅಧಿಕಾರಿ !
ಬೆಂಗಳೂರು, ಡಿಸೆಂಬರ್ 22: ಬಡ್ಡಿ ಆಸೆಗೆ ಬಿದ್ದು ಕಣ್ವ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದವರೆಲ್ಲರೂ ಬೀದಿಗೆ ಬಿದ್ದಿದ್ದಾರೆ. ಭವಿಷ್ಯದಲ್ಲಿ ವಾಪಸು ಬರಬಹುದೆಂಬ ಭರವಸೆಯಿಂದ ಸಿಐಡಿ ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ನೆಮ್ಮದಿ ಜೀವನ ಕನಸು ಕಟ್ಟಿಕೊಂಡು ಕೂಡಿಟ್ಟಿದ್ದ ಗಂಟು ಕಳೆದುಕೊಂಡಿದ್ದಾರೆ. ಕಣ್ವ ಸಂಸ್ಥೆಯ ನಯ ವಂಚನೆ ಜಾಲಕ್ಕೆ ಸಿಕ್ಕಿಬಿದ್ದ ಒಬ್ಬೊಬ್ಬರದ್ದೂ ಒಂದೊದು ರೋಚಕ ಕಥೆ !
ಕಣ್ವ ಸಂಸ್ಥೆಗೆ ಹಣ ಕಟ್ಟಿದ ರಶೀದಿಗಳನ್ನು ಹಿಡಿದು ಹಿರಿಯ ನಾಗರಿರಕರೊಬ್ಬರು ಸಿಐಡಿ ಕಚೇರಿ ಮುಂದೆ ನಿಂತಿದ್ದರು. ಹೆಸರು ವೆಂಕಟೇಶ್, ವಿಜಯನಗರದ ಮೂಡಲ ಪಾಳ್ಯ ನಿವಾಸಿ. ಅರಣ್ಯ ಘಟಕದ ರೇಂಜರ್ ಆಗಿ ಕೆಲಸ ನಿರ್ವಹಿಸಿದ್ದರು. ನಾಲ್ಕು ವರ್ಷದ ಹಿಂದೆ ನಿವೃತ್ತಿಯಾಗಿದ್ದರು. ಸ್ವಂತ ಮನೆಯಿತ್ತು, ಪಿಂಚಣಿ ಬರುತ್ತಿತ್ತು, ಮನೆಗಳಿಂದ ಬಾಡಿಗೆ ಬರುತ್ತಿತ್ತು ನೆಮ್ಮದಿ ಜೀವನ. ನಿವೃತ್ತಿಯಾದ ನಂತರ ಮನೆಯಲ್ಲಿಯೇ ಇದ್ದರೆ ಸೋಮಾರಿತನ ಬಂದು ಬಿಡುತ್ತದೆ ಎಂದು ಕೆಲಸ ಹುಡುಕುತ್ತಿದ್ದರು. ಕೆಲಸ ಹುಡುಕಲು ಹೋಗಿ ಕಣ್ವ ವಂಚನೆ ಜಾಲಕ್ಕೆ ಬಿದ್ದು ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸ ಹೋದ ಬಗ್ಗೆ ವೆಂಕಟೇಶ್ ತನ್ನ ಅನುಭವವನ್ನು ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.
ನಿವೃತ್ತಿಯಾಗಿ ಮನೆಯಲ್ಲಿದ್ದೆ, ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದೆ. ಸ್ವಂತ ಮನೆ, ಬಾಡಿಗೆ ಬರುತ್ತಿತ್ತು. ನಲವತ್ತು ವರ್ಷ ನಾನು ಸುತ್ತದ ಕಾಡೇ ಇರಲಿಲ್ಲ. ಫಾರೆಸ್ಟ್ ರೇಂಜರ್ ಆಗಿ ಅಷ್ಟು ಕಾಡು ಸುತ್ತವನು. ನಿವೃತ್ತಿಯಾದ ಮೇಲೆ ಮನೆಯಲ್ಲಿಯೇ ಇರೋಣ ಅಂತ ಭಾವಿಸಿದ್ದೆ. ಒಂದು ವಾರ ಕಳೆಯುವಷ್ಟರಲ್ಲಿ ಮನಸಲ್ಲಿ ಏನೋ ಬೇಸರ ಮೂಡಿತು. ಮನೆಯಲ್ಲಿಯೇ ಇದ್ದರೆ ಶುಗರ್, ಬಿಪಿ ಬಂದು ಬಿಡುತ್ತೆ ಅಂತ ಅನ್ನಿಸಿತು. ಸುಮ್ಮನೆ ಇದ್ದು ಏನು ಮಾಡಲಿ, ಸಂಬಳ ಇಲ್ಲದಿದ್ದರೂ ಪರವಾಗಿಲ್ಲ, ಯಾರಾದರೂ ಮೈ ಮುರಿದು ದುಡಿಯುವಂತಹ ಕೆಲಸ ಕೊಟ್ಟರೆ ಸಾಕು ಎಂದೇ ಹುಡುಕಾಡುತ್ತಿದ್ದೆ. ಇದು ನಿವೃತ್ತಿ ನಂತರ ವೆಂಕಟೇಶ್ ಆರೋಗ್ಯಕರ ಜೀವನ ಬಗ್ಗೆ ರೂಪಿಸಿದ್ದ ಯೋಜನೆ.

ಬೆಳಗ್ಗೆ ವಾಕ್ ಮಾಡುತ್ತಿದ್ದೆ. ಪಾರ್ಕ್ ಬಳಿ ಒಂದು ಜಾಹೀರಾತು ನೋಡಿದೆ. ನಿವೃತ್ತಿಯಾದವರಿಗೆ ಕೆಲಸ ಕೊಡುತ್ತೇವೆ ಎಂದು ಕಣ್ವ ಸಂಸ್ಥೆಯವರು ಪೋಸ್ಟರ್ ಅಂಟಿಸಿದ್ದು ನೋಡಿದೆ. ಅದಕ್ಕೆ ಕರೆ ಮಾಡಿದೆ. ನನ್ನನ್ನು ಚಿಕ್ಕಲಸಂದ್ರದ ಕಣ್ವ ಸಂಸ್ಥೆಗೆ ಕರೆದುಕೊಂಡು ಹೋದರು. ವೇತನ ಬಗ್ಗೆಯೂ ಮಾತನಾಡಲಿಲ್ಲ. ಮೊದಲು 350 ರೂಪಾಯಿ ಕಟ್ಟಿಸಿಕೊಂಡು, ಇದನ್ನು ಇಟ್ಟುಕೊಳ್ಳಿ. ಕಡಿಮೆ ಬೆಲೆಗೆ ನಮ್ಮ ಕಣ್ವ ಮಾರ್ಟ್ ನಲ್ಲಿ ಬಟ್ಟೆ ತೆಗೆದುಕೊಳ್ಳಿ ಎಂದು ಹೇಳಿದರು. ಒಮ್ಮೆ ಹೋಗಿ ಬಟ್ಟೆಯನ್ನು ಖರೀದಿಸಿದೆ. ಚಿಲ್ಲಕ್ಕಸಂದ್ರದದಲ್ಲಿ ಮ್ಯಾನೇಜರ್ ಕೆಲಸ ಕೊಟ್ಟರು. ನನ್ನನ್ನು ಮ್ಯಾನೇಜರ್ ಕೆಲಸಕ್ಕೆ ಕರೆದುಕೊಂಡು ಹೋದವನಿಗೆ ಮದುವೆಯಾಗಿರಲಿಲ್ಲ. ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಿಸಿದೆ ಎಂದು ಕಣ್ವಗೆ ಸೇರಿದ ಕಥೆಯನ್ನು ವೆಂಕಟೇಶ್ ವಿವರಿಸಿದರು.
ಬಡ್ಡಿ ಸ್ಕೀಮ್ ಗೆ ಬಲಿ :
ಕೆಲವು ದಿನ ಕಳೆದಿದ್ದೇ, ನೀವು ಹಣವಿದ್ದರೆ ಹೂಡಿಕೆ ಮಾಡಿ. ಒಳ್ಳೆಯ ಸ್ಕೀಮ್ ಇದೆ ಎಂದು ಹೇಳಿದರು. ಕಣ್ವ ಮಾರ್ಟ್, ಕಣ್ವ ರೆಸಾರ್ಟ್, ಕಣ್ವ ಲ್ಯಾಬ್, ರಿಯಲ್ ಎಸ್ಟೇಟ್ ಎಲ್ಲವೂ ಚೆನ್ನಾಗಿತ್ತು. ಕೆಲಸಕ್ಕೆ ಹೋದ ಹೊಸತರಲ್ಲಿ ಅವರ ರಿಯಲ್ ಎಸ್ಟೇಟ್ ಜಾಗಗಳನ್ನು ತೋರಿಸಿದರು. ನೋಡಿ ಗಾಬರಿ ಆಯಿತು. ನಂಜುಂಡಯ್ಯ ಒಬ್ಬ ಅಸಮಾನ್ಯ ವ್ಯಕ್ತಿ. ಎಂಥಹ ಸಾಮ್ರಾಜ್ಯ ಕಟ್ಟಿದ್ದಾನೆ ಎಂದು ಭಾವಿಸಿದ್ದೆ. ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಬಂದಿದ್ದರು. ಇದೆಲ್ಲವೂ ನೋಡಿದ ಮೇಲೆ ಹೂಡಿಕೆ ಮಾಡುವಂತೆ ಹೇಳಿದರು. ನಿವೃತ್ತಿಯ ನಂತರ ನನಗೆ ಐವತ್ತು ಲಕ್ಷ ರೂಪಾಯಿ ಬಂದಿತ್ತು. ಅದು ಮನೆಯಲ್ಲಿಟ್ಟು ಏನು ಮಾಡೋಣ. ಹೂಡಿಕೆ ಮಾಡಿದರೆ ಒಂದು ಲಕ್ಷ ರೂಪಾಯಿಗೆ ತಿಂಗಳಿಗೆ 50 ಸಾವಿರ ಬರುತ್ತದೆ ಎಂದು ಹೇಳಿದ್ರು. ಎಷ್ಟೋ ಜನ ಕಟ್ಟಿ ಹೋಗುತ್ತಿದ್ದನ್ನು ನಾನು ನೋಡಿದ್ದೆ. ಎನ್ನುತ್ತಾರೆ ವೆಂಕಟೇಶ್.

ನಾನು ರೆಸಾರ್ಟ್ ಗೆ ಒಮ್ಮೆ ಹೋಗಿದ್ದೆ. ಯಾರೋ ಒಬ್ಬ ಅಧಿಕಾರಿ. ಹದಿನೈದು ಕೋಟಿ ರೂಪಾಯಿ ಸೂಟ್ ಕೇಸ್ ನಲ್ಲಿ ತಂದಿದ್ದರು. ಹೂಡಿಕೆ ಮಾಡಿ ಹೋದರು. ಅದೆಲ್ಲಾ ನೋಡಿ ನನಗೂ ನಿವೃತ್ತಿ ನಂತರ ಬಂದ ದುಡ್ಡು ಹಾಕಿದರೆ ತಿಂಗಳಿಗೆ ಒಂದಷ್ಟು ಹಣ ಬರುತ್ತದೆ. ನನಗಲ್ಲದಿದ್ದರೂ ಮಕ್ಕಳ ಮಕ್ಕಳಿಗೆ ಆಗುತ್ತದೆ ಎಂದು ಭಾವಿಸಿದೆ. ಸರ್ಕರದಿಂದ ಬಂದಿದ್ದ ಐವತ್ತು ಲಕ್ಷ ರೂಪಾಯಿಯನ್ನು ತಂದು ಹೂಡಿಕೆ ಮಾಡಿದೆ. ನನ್ನ ಪತ್ನಿ ಮತ್ತು ಮಕ್ಕಳನ್ನು ನಾಮಿನಿ ಮಾಡಿದೆ. ಎರಡು ಮೂರು ತಿಂಗಳು ಹಣ ಬಂತು. ಅಮೇಲೆ ನಿಂತೇ ಹೋಯಿತು. ಕೊನೆಗೆ ಒಂದು ದಿನ ಎಲ್ಲರೂ ಬೀದಿಗೆ ಇಳಿದು ಗಲಾಟೆ ಮಾಡಿದರು. ಪೊಲೀಸ್ ಸ್ಟೇಷನ್ ಗೆ ದೂರು ಕೊಟ್ಟರು. ನಂಜುಂಡಯ್ಯನನ್ನು ಇಡಿಯವರು ಎಳೆದುಕೊಂಡು ಹೋದ್ರು. ಅನಂತರ ನೋಡಿ ಇಷ್ಟೆಲ್ಲಾ ಆಗೋಯಿತು ಎಂದು ಮೆಲಕು ಹಾಕಿದರು.
ಎಷ್ಟೋ ಬಡವರು ಕಣ್ವದಿಂದ ಜೀವ ತೆಗೆದುಕೊಂಡರು. ನನಗೆ ಗೊತ್ತಿರುವ ಹಾಗೆ ಮೂರು ಜನ ಮರ್ಯಾದೆಗೆ ಅಂಜಿ ಜೀವ ತೆಗೆದುಕೊಂಡರು. ಇನ್ನು ಕೆಲವರು ಊರೇ ಬಿಟ್ಟರು. ಬಂದ ಹಣದಲ್ಲಿ ಕಪ್ಪು - ಬಿಳುಪು ವ್ಯಾಪಾರ ಮಾಡುತ್ತೆ ಅನ್ನಿಸುತ್ತೆ. ಆದಾಯ ತೆರಿಗೆ, ಇಡಿ ಅಧಿಕಾರಿಗಳು ದಾಳಿ ಮಾಡಿದ್ರು. ಅಲ್ಲಿಂದಲೇ ಲತ್ತೆ ಶುರುವಾಗಿ ಕಣ್ವ ಮುಳುಗೋಯಿತು. ಏನೆಲ್ಲಾ ಅಕ್ರಮ ಮಾಡಿದ್ದಾಗೋ ಗೊತ್ತಿಲ್ಲ. ಸೋಮಾರಿತನ ಬೇಡ ಎಂದು ಪೋಸ್ಟರ್ ನಂಬಿಕೊಂಡು ಕೆಲಸಕ್ಕೆ ಹೋದವನು ನಾನು ಐವತ್ತು ಲಕ್ಷ ಕಳೆದುಕೊಂಡಿದ್ದೇನೆ. ಬರುತ್ತೆ ಅನ್ನುವ ನಂಬಿಕೆ ಬಿಟ್ಟಿದ್ದೇನೆ. ಮಾಧ್ಯಮಗಳ ವರದಿ ನೋಡಿ ಬಂದಿದ್ದೇನೆ ಎಂದು ವೆಂಕಟೇಶ್ ಕಣ್ವದಲ್ಲಿ ಹಣ ಕಳೆದುಕೊಂಡ ಪರಿಯನ್ನು ತಿಳಿಸಿದರು.

ಇಲ್ಲಿ ನೋಡಿದ್ರೆ ನೂರಾರು ಜನ ಬಂದಿದ್ದಾರೆ. ಸಾವಿರಾರು ಜನ ನನ್ನಂತೆ ಹಣ ಕಟ್ಟಿ ಅಧಿಕಾರಿಗಳೇ ಮೋಸ ಹೋಗಿದ್ದಾರೆ. ನನಗೆ ಮೋಸ ಮಾಡಿದ್ದಾರೆ ಎಂದು ಹೇಳಿ ನಂಜುಂಡಯ್ಯ ನೂರು ಜನರ ವಿರುದ್ಧ ಕೇಸು ಹಾಕಿದ್ದಾರಂತೆ. ಮುಂದೆ ಏನೇನು ಆಗುತ್ತೋ ಗೊತ್ತಿಲ್ಲ ಎಂದು ಹೇಳುತ್ತಲೇ ಸಿಐಡಿಯಿಂದ ಮನೆಯತ್ತ ತೆರಳಿದರು.












Click it and Unblock the Notifications