ಐಟಿ ದಾಳಿ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ ಸೋನು ಸೂದ್ ಹೇಳಿದ್ದೇನು?
ಮುಂಬೈ, ಸೆಪ್ಟೆಂಬರ್ 20: ನಟ ಸೋನು ಸೂದ್ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ನಟ ಸೋನು ಸೂದ್ ಸೋಮವಾರ ಟ್ವಿಟ್ಟರ್ ಮೂಲಕ ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಮಯ ಎಲ್ಲ ವಿಚಾರಕ್ಕೂ ಉತ್ತರ ನೀಡಲಿದೆ," ಎಂದು ಹೇಳಿದ್ದಾರೆ.
ಸಮೀಕ್ಷೆಯ ಹೆಸರಲ್ಲಿ ತನ್ನ ನಿವಾಸಗಳ ಮೇಲೆ ಸತತ ಮೂರು ದಿನಗಳ ಕಾಲ ದಾಳಿ ನಡೆದಿದ್ದರೂ ಯಾವುದೇ ಪ್ರತಿಕ್ರಿಯೆ ನೀಡಿರದ ಸೋನು ಸೂದ್ ಸೋಮವಾರ ಮೌನ ಮುರಿದು ಟ್ವೀಟ್ ಮಾಡಿದ್ದು, "ಒಂದು ರೂಪಾಯಿ ಹಣವೂ ಕೂಡಾ ನನ್ನ ಟ್ರಸ್ಟ್ನಲ್ಲೇ ಇದೆ," ಎಂದು ಸ್ಪಷ್ಟಪಡಿಸಿದ್ದಾರೆ.
20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ ಸೋನುಸೂದ್: ಐಟಿ ಇಲಾಖೆ
ನಟ ಸೋನು ಸೂದ್ಗೆ ಸೇರಿದ ಆರು ಸ್ಥಳಗಳಲ್ಲಿ ಹಾಗೂ ನಟನ ನಿವಾಸದ ಮೇಲೆ ದಾಳಿ ನಡೆಸಿದ್ದ ಐಟಿ ಇಲಾಖೆಯು ಇದು ಸಮೀಕ್ಷೆ ಎಂದು ಹೇಳಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಈ ದಾಳಿಯು ನಡೆದಿರುವ ಹಿನ್ನೆಲೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಆಪ್ ಹಾಗೂ ಶಿವಸೇನೆ ತೀವ್ರ ವಾಗ್ದಾಳಿ ನಡೆಸಿತ್ತು.
ಸೋನುಸೂದ್ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದ ಐಟಿ ಇಲಾಖೆ
ಸತತ ಮೂರು ದಿನಗಳ ಕಾಲ ನಟ ಸೋನು ಸೂದ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯು "ನಟ ಸೋನು ಸೂದ್ ಸುಮಾರು 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ," ಎಂದು ಆದಾಯ ತೆರಿಗೆ ಇಲಾಖೆಯು ಶನಿವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. "ಸೋನು ಸೂದ್ರ ಲಾಭರಹಿತ ಸಂಸ್ಥೆಯು ಕ್ರೌಡ್ಫಂಡಿಂಗ್ ಪ್ಲಾಟ್ಫಾರ್ಮ್ ಅನ್ನು ಬಳಸಿಕೊಂಡು ವಿದೇಶಿ ಕೊಡುಗೆದಾರರಿಂದ 2.1 ಕೋಟಿ ಹಣವನ್ನು ಸಂಗ್ರಹಿಸಿದೆ. ಇದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಉಲ್ಲಂಘನೆ ಆಗಿದೆ," ಎಂದು ಆರೋಪ ಮಾಡಿದೆ. "ಇನ್ನು ನಟನು ತೆರಿಗೆ ವಂಚನೆಯ ಉದ್ದೇಶದಿಂದಾಗಿ ಬ್ಯಾಂಕು ಖಾತೆಯ ಪುಸ್ತಕಗಳಲ್ಲಿ ವೃತ್ತಿಪರ ರಸೀದಿಗಳನ್ನು ಸಾಲಗಳೆಂದು ಮರೆಮಾಚಿದ ಉದಾಹರಣೆಗಳು ಕೂಡಾ ಇದೆ. ಹೂಡಿಕೆಯನ್ನು ಮಾಡಲು ಹಾಗೂ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ನಕಲಿ ಸಾಲಗಳನ್ನು ಬಳಸಲಾಗಿದೆ ಎಂದು ಕೂಡಾ ಬಹಿರಂಗವಾಗಿದೆ. ಇಲ್ಲಿಯವರೆಗೆ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಲಭಿಸಿದೆ," ಎಂದು ಐಟಿ ಇಲಾಖೆ ತಿಳಿಸಿದೆ.
|
"ಹಣ ಟ್ರಸ್ಟ್ನಲ್ಲೇ ಇದೆ, ಜನರ ಜೀವ ಉಳಿಸಲು ಕಾಯುತ್ತಿದೆ"
ತನ್ನ ನಿವಾಸ ಹಾಗೂ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಿ ಸುಮಾರು ಸೋನುಸೂದ್ 20 ಕೋಟಿಗಿಂತ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಐಟಿ ಇಲಾಖೆಯು ಹೇಳಿದ ಬಳಿಕ ಸೋನು ಸೂದ್ ಮೌನವನ್ನು ಮುರಿದಿದ್ದಾರೆ. ಸೋಮವಾರ ಈ ಬಗ್ಗೆ ಟ್ವೀಟ್ ಮಾಡಿರುವ ಸೋನು ಸೂದ್, "ಕಠಿಣವಾದ ದಾರಿಯಲ್ಲಿಯೂ ಕೂಡಾ ಸುಲಭವಾದ ಪ್ರಯಾಣವು ಕಾಣಬಹುದು. ಎಲ್ಲಾ ಹಿಂದೂಸ್ತಾನಿಗಳ ಆಶೀರ್ವಾದ ಪರಿಣಾಮ ಎಂದು ಅನಿಸುತ್ತದೆ," ಎಂದು ತನ್ನ ಸ್ಪಷ್ಟನೆಯ ಟ್ವೀಟ್ನೊಂದಿಗೆ ತಿಳಿಸಿದ್ದಾರೆ. "ನಾವು ಎಲ್ಲಾ ಸಂದರ್ಭದಲ್ಲೂ ನಮ್ಮ ದೃಷ್ಟಿಯಿಂದ ನಿಜವಾಗಿ ಏನು ನಡೆದಿದೆ ಎಂಬುವುದನ್ನು ಹೇಳಬೇಕಾಗಿಲ್ಲ. ಸಮಯ ಎಲ್ಲದ್ದಕ್ಕೂ ಉತ್ತರ ನೀಡಲಿದೆ," ಎಂದು ಕೂಡಾ ಹೇಳಿದ್ದಾರೆ.
ಈ ಹಿಂದೆ ಹೊಗಳುತ್ತಿದ್ದ ಬಿಜೆಪಿಗೆ ಈಗ ಸೋನು ಸೂದ್ ತೆರಿಗೆ ವಂಚಕ: ಶಿವಸೇನೆ
"ನನ್ನ ಎಲ್ಲಾ ಶಕ್ತಿ ಹಾಗೂ ಹೃದಯದಿಂದ ನಾನು ಭಾರತದ ಜನರ ಸೇವೆಯನ್ನು ಮಾಡುವ ಪ್ರತಿಜ್ಞೆಯನ್ನು ಮಾಡಿದೆ. ನನ್ನ ಟ್ರಸ್ಟ್ನಲ್ಲಿರುವ ಎಲ್ಲಾ ಒಂದು ರೂಪಾಯಿ ಹಣವು ಅತಿ ಮೌಲ್ಯಯುತ ಜೀವವನ್ನು ಉಳಿಸಲು ಹಾಗೂ ಅಗತ್ಯವಿರುವವರಿಗೆ ಸಹಾಯ ಮಾಡಲು ಕಾಯುತ್ತಿದೆ. ನಾನು ಹಲವಾರು ಸಂದರ್ಭದಲ್ಲಿ ಹಲವು ಬ್ರಾಂಡ್ಗಳಿಗೆ ನನ್ನ ಸಮಾಜ ಕಲ್ಯಾಣ ಕಾರ್ಯಕ್ಕಾಗಿ ದೇಣಿಗೆ ನೀಡಲು ಕೇಳಿದ್ದೇನೆ, ಅದು ಇನ್ನು ಕೂಡಾ ಮುಂದುವರಿಯಲಿದೆ. ನಾನು ಕಳೆದ ನಾಲ್ಕು ದಿನಗಳಿಂದ ಕೆಲವು ಅತಿಥಿಗಳ ಸತ್ಕಾರ ಮಾಡುತ್ತಿದ್ದೆ, ಆದ್ದರಿಂದ ನನಗೆ ಕಳೆದ ನಾಲ್ಕು ದಿನದಿಂದ ನಿಮ್ಮ ಸೇವೆಯನ್ನು ಮಾಡಲು ಸಾಧ್ಯವಾಗಿಲ್ಲ. ಈಗ ನಾನು ಮತ್ತೆ ಜನರ ಸೇವೆಗಾಗಿ ವಾಪಾಸ್ ಬಂದಿದ್ದೇನೆ. ನನ್ನ ಪ್ರಯಾಣ ಮುಂದುವರಿಯುತ್ತದೆ," ಎಂದು ಟ್ವೀಟರ್ನಲ್ಲಿ ಸೋನು ಸೂದ್ ತಿಳಿಸಿದ್ದಾರೆ.
|
ಸೋನು ಸೂದ್ ಪರವಾಗಿ ದೆಹಲಿ ಸಿಎಂ ಕೇಜ್ರಿವಾಲ್ ಟ್ವೀಟ್
ನಟ ಸೋನು ಸೂದ್ ಪರವಾಗಿ ಆಮ್ ಆದ್ಮಿ ಪಕ್ಷದ ಆಡಳಿತವಿರುವ ದೆಹಲಿ ರಾಜ್ಯದ ಮುಖ್ಯಮಂತ್ರಿ, ಅರವಿಂದ್ ಕೇಜ್ರಿವಾಲ್ ನಟ ಸೋನು ಸೂದ್ ಪರವಾಗಿ ಟ್ವೀಟ್ ಮಾಡಿದ್ದಾರೆ. "ಸೋನು ಜೀ ಗೆ ಪರವಾಗಿ ಅಧಿಕ ಬಲವಿದೆ. ಲಕ್ಷಾಂತರ ಭಾರತೀಯರ ಹಿರೋ ನೀವು," ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಸೋನು ಸೂದ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ದೆಹಲಿ ಸಿಎಂ ಈ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. 48 ವರ್ಷದ ಸೋನು ಸೂದ್ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ಆಮ್ ಆದ್ಮಿ ಪಕ್ಷದ ಸರ್ಕಾರದ ಸಮಾಜ ಕಲ್ಯಾಣ ಕಾರ್ಯಗಳಲ್ಲಿ ಕೈ ಜೋಡಿಸುವುದಾಗಿ ಇತ್ತೀಚೆಗೆ ಹೇಳಿದ್ದರು. ಹಾಗೆಯೇ ಸೋನುಸೂದ್ ದೆಹಲಿ ಸರ್ಕಾರದ ಕಾರ್ಯಕ್ರಮವೊಂದರ ರಾಯಭಾರಿಯಾಗಿಯೂ ಆಗಿದ್ದಾರೆ. ಈ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆ ಸೋನು ಸೂದ್ ಮೇಲೆ ದಾಳಿ ನಡೆಸಿದೆ.
ಬಿಜೆಪಿ ಸರ್ಕಾರದ ವಿರುದ್ದ ಶಿವಸೇನೆ ವಾಗ್ದಾಳಿ
ಸೋನು ಸೂದ್ ನಿವಾಸ ಹಲವಾರು ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ಬೆನ್ನಲ್ಲೇ ಶಿವಸೇನೆಯು ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. "ಬಿಜೆಪಿಯು ತಾಲಿಬಾನ್ ಮನಸ್ಥಿತಿ ಹೊಂದಿದೆ," ಎಂದು ಶಿವಸೇನೆ ನಾಯಕ ಹೇಳಿದ್ದಾರೆ. ಮಹಾರಾಷ್ಟ್ರ ಆಡಳಿತ ಪಕ್ಷ ಶಿವಸೇನ ವಕ್ತಾರೆ ಮನೀಷಾ ಖಯಾಂದೆ, "ಬಿಜೆಪಿಯ ಕೇಂದ್ರ ಸರ್ಕಾರವು ಗುರಿಯಾಗಿಸಿಕೊಂಡು ತನ್ನ ಕೇಂದ್ರದ ಏಜೆನ್ಸಿಗಳಿಂದ ದಾಳಿಯನ್ನು ನಡೆಸುತ್ತಿದೆ. ಬಿಜೆಪಿಯು ತಾಲಿಬಾನ್ ನಂತಹ ಸಿದ್ದಾಂತವನ್ನು ಹೊಂದಿದೆ," ಎಂದು ಆರೋಪ ಮಾಡಿದ್ದರು.
ಸೋನು ಸೂದ್ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶ
ಈ ಬಳಿಕ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಲೇಖನವೊಂದು ಪ್ರಕಟವಾಗಿದ್ದು, ಆದಾಯ ತೆರಿಗೆ ಇಲಾಖೆಯು ಸೋನು ಸೂದ್ ಮೇಲೆ ದಾಳಿ ನಡೆಸಿರುವುದನ್ನು ವಿರೋಧ ಮಾಡಿದೆ. ಹಾಗೆಯೇ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದೆ. "ಈ ಹಿಂದೆ ಬಿಜೆಪಿಯು ನಟ ಸೋನು ಸೂದ್ರನ್ನು ಲಾಕ್ಡೌನ್ ಸಂದರ್ಭದಲ್ಲಿ ಸೋನು ಸೂದ್ ಮಾಡಿದ ಕಾರ್ಯದ ಹಿನ್ನೆಲೆ ಹೊಗಳುತ್ತಿತ್ತು. ಆದರೆ ಪಂಜಾಬ್ ಹಾಗೂ ದೆಹಲಿ ಸರ್ಕಾರವು ಸೋನು ಸೂದ್ ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸುವ ಯತ್ನ ಮಾಡಿದ ಸಂದರ್ಭದಲ್ಲಿ ಈಗ ಬಿಜೆಪಿಗೆ ಸೋನು ಸೂದ್ ತೆರಿಗೆ ವಂಚಕ ಆಗಿದ್ದಾರೆ," ಎಂದು ಶಿವಸೇನೆ ಹೇಳಿದೆ. "ಸೋನು ಸೂದ್ ವಿರುದ್ದ ಬಿಜೆಪಿಯು ಮಾಡಿಸಿರುವ ಈ ಐಟಿ ದಾಳಿಯು ಮೋಸದಾಟ. ವಿಶ್ವದಲ್ಲೇ ಅಧಿಕ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಈ ಬಿಜೆಪಿ ಪಕ್ಷವು, ವಿಶಾಲವಾದ ಹೃದಯವನ್ನು ಕೂಡಾ ಹೊಂದಿರಬೇಕು," ಎಂದು ಹೇಳಿದೆ.
(ಒನ್ ಇಂಡಿಯಾ ಸುದ್ದಿ)