ಶುಕ್ರ ಗ್ರಹದಲ್ಲೂ ಜೀವಿಗಳು, ಭಾರತದಿಂದ ‘ಶುಕ್ರಯಾನ-1’
ಅಂತೂ ಮಾನವನಿಗೆ ಭೂಮಿಯಿಂದ ಹೊರಗೆ ಜೊತೆಗಾರರು ಸಿಗುವ ಕಾಲ ಹತ್ತಿರವಾಗಿದೆ. ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆ ಬಗ್ಗೆ ಖಗೋಳ ವಿಜ್ಞಾನಿಗಳು ಮಹತ್ವದ ಮಾಹಿತಿ ಕೊಟ್ಟಿದ್ದಾರೆ. ಶುಕ್ರನ ವಾತಾವರಣ ಕೆಟ್ಟ ಪರಿಸ್ಥಿತಿಯಲ್ಲಿದ್ದು, ಇಲ್ಲಿ ಆಸಿಡ್ ಊಹೆಗೂ ನಿಲುಕದಷ್ಟು ತುಂಬಿಹೋಗಿದೆ. ಆದರೂ ವಿಜ್ಞಾನಿಗಳಿಗೆ ಆಶ್ಚರ್ಯ ತರುವಂತಹ ಸಂಗತಿ ದೊರಕಿದ್ದು, ಶುಕ್ರ ಗ್ರಹದ ವಾತಾವರಣದಲ್ಲಿರುವ ಕಠಿಣ ಆಮ್ಲೀಯ ಮೋಡಗಳಲ್ಲಿ ಫಾಸ್ಫೈನ್ (Phosphine) ಎಂಬ ಜೈವಿಕ ಅನಿಲದ ಕಣ ಕಂಡುಬಂದಿದೆ.
'ನೇಚರ್ ಅಸ್ಟ್ರಾನಮಿ'ಯಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಫಾಸ್ಫೈನ್ ಗ್ಯಾಸ್ ಕಂಡುಬಂದರೆ ಜೀವಿಗಳು ಬದುಕಿರುವ ಸಾಧ್ಯತೆ ಇದೆ ಎಂದೇ ಅರ್ಥ. ಈ ಹಿಂದೆಯೇ ವಿಜ್ಞಾನಿಗಳು ಶುಕ್ರಗ್ರಹದಲ್ಲಿ ಆಸಿಡ್ ಮೋಡಗಳ ಒಳಗೆ ಜೀವಿಗಳು ತೇಲುತ್ತಾ ಬದುಕಿರಬಹುದು ಎಂದು ಅಂದಾಜಿಸಿದ್ದರು. ಇದೀಗ ಪ್ರಕಟವಾಗಿರುವ 'ನೇಚರ್ ಅಸ್ಟ್ರಾನಮಿ' ಸಂಶೋಧನಾ ವರದಿ ಕೂಡ ಈ ಹಿಂದಿನ ಊಹೆಯನ್ನು ಸತ್ಯವೆಂದು ಪ್ರತಿಪಾದಿಸಿದೆ.
ಬ್ರಿಟನ್ನ ವೇಲ್ಸ್ ಕಾರ್ಡಿಫ್ ವಿಶ್ವವಿದ್ಯಾಲಯದ ಖಗೋಳ ವಿಜ್ಞಾನಿ ಜೇನ್ ಗ್ರೀವ್ಸ್ ನೇತೃತ್ವದಲ್ಲಿ ಸಂಶೋಧನೆ ಆರಂಭವಾಗಿತ್ತು. ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾಲಿಕ್ಯುಲರ್ ಆಸ್ಟ್ರೋಫಿಸಿಷಿಸ್ಟ್ ಕ್ಲಾರಾ ಸೌಸಾ ಹಾಗೂ ಸಿಲ್ವ ಕೂಡ ಸಂಶೋಧನೆಯ ಭಾಗವಾಗಿದ್ದರು. ಇನ್ನು ವಿಜ್ಞಾನಿಗಳ ಈ ಮಹತ್ವದ ಸಂಶೋಧನೆ ಮೂಲಕ ಮಾನವನಿಗೆ ಭೂಮಿಯಿಂದ ಹೊರಗೆ ಅಂದರೆ ಬೇರೆ ಗ್ರಹದಲ್ಲೂ ಸ್ನೇಹಿತರು ಸಿಗುವ ಕಾಲ ಹತ್ತಿರವಾದಂತಾಗಿದೆ.

ಭಾರತದಿಂದಲೂ ಶುಕ್ರ ಗ್ರಹಕ್ಕೆ ಉಪಗ್ರಹ..!
'ನೇಚರ್ ಅಸ್ಟ್ರಾನಮಿ'ಯ ಸಂಶೋಧನಾ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದ ಹೆಮ್ಮೆಯ 'ಇಸ್ರೋ' ಸಂಸ್ಥೆ ಮಹತ್ವದ ಘೋಷಣೆಯನ್ನು ಹೊರಡಿಸಿದೆ. 'ಶುಕ್ರಯಾನ-1' ಮೂಲಕ ಭಾರತದಿಂದ ಉಪಗ್ರಹವೊಂದು ಶುಕ್ರ ಗ್ರಹದ ಕಕ್ಷೆ ತಲುಪುವುದು ಪಕ್ಕಾ ಆಗಿದೆ. ಆದರೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ. ಈ ಹಿಂದೆ ಚಂದ್ರನ ಮೇಲೆ ನೀರಿನ ಸುಳಿವು ನೀಡಿದ್ದು ಕೂಡ ಇಸ್ರೋ ಸಂಸ್ಥೆ. ಅಲ್ಲದೆ ಮಂಗಳಯಾನ ಮೂಲಕ ಮಂಗಳ ಗ್ರಹದಲ್ಲಿ ನೀರಿನ ಸುಳಿವು ನೀಡಿದ್ದು ಕೂಡ ಭಾರತವೇ. ಈಗ ಭಾರತ ಶುಕ್ರಯಾನ ಯೋಜನೆಗೆ ಚಾಲನೆ ನೀಡಲು ನಿರ್ಧರಿಸಿದ್ದು, ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ.

‘ಫಾಸ್ಫೈನ್’ ಗ್ಯಾಸ್ ಎಂದರೇನು..?
3 ಹ್ರೈಡ್ರೋಜನ್ ಅಣುಗಳ ಜೊತೆಯಲ್ಲಿ 1 ಫಾಸ್ಫರಸ್ ಅಣು ಸಂಯೋಜನೆಯಾದಾಗ ಫಾಸ್ಫೈನ್ ಅನಿಲ ಉತ್ಪತ್ತಿಯಾಗುತ್ತದೆ. ಆದರೆ ಇದು ಮಾನವರಿಗೆ ತುಂಬಾ ವಿಷಕಾರಿ. ಆದರೆ ಶುಕ್ರ ಗ್ರಹದಲ್ಲಿ ಫಾಸ್ಫೈನ್ ಅನಿಲ ಕಂಡುಬಂದಿದ್ದು ಹೇಗೆ ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಉಲ್ಕೆ, ಜ್ವಾಲಾಮುಖಿ, ಮಿಂಚು ಅಥವಾ ಸಿಡಿಲು ಬಿಟ್ಟರೆ ಇನ್ನಿತರ ರಾಸಾಯನಿಕ ಪ್ರಕ್ರಿಯೆಗಳಿಂದ ಈ ಫಾಸ್ಫೈನ್ ಗ್ಯಾಸ್ ಉತ್ಪತ್ತಿ ಆಗಿರಬಹುದಾ ಎಂಬ ಅನುಮಾನ ದಟ್ಟವಾಗಿದೆ.

ಆಕ್ಸಿಜೆನ್ ಇಲ್ಲದಿದ್ದರೂ ‘ಫಾಸ್ಫೈನ್’ ಗ್ಯಾಸ್ ಸಾಕು..!
ಅಷ್ಟಕ್ಕೂ ಭೂಮಿಯಲ್ಲಿರುವ ಫಾಸ್ಫೈನ್ ಗ್ಯಾಸ್ನ ಗುಣಗಳನ್ನು ಗಮನಿಸಿದರೆ ಶುಕ್ರ ಗ್ರಹದಲ್ಲೂ ಜೀವಿಗಳ ಇರುವಿಕೆಯ ಸುಳಿವು ಸಿಗುತ್ತದೆ. ಆಕ್ಸಿಜೆನ್ ಇಲ್ಲದ ವಾತಾವರಣದಲ್ಲೂ ಬದುಕಬಲ್ಲ ಬ್ಯಾಕ್ಟೀರಿಯಾಗಳಿಂದ ಭೂಮಿಯಲ್ಲಿ ಫಾಸ್ಫೈನ್ ಅನಿಲ ಸೃಷ್ಟಿಯಾಗುತ್ತದೆ. ಈಗ ಶುಕ್ರನ ಮೋಡಗಳಲ್ಲೂ ಕೂಡ ಈ ಫಾಸ್ಫೈನ್ ಗ್ಯಾಸ್ ಕಂಡುಬಂದಿದೆ. ಹೀಗಾದರೆ ಶುಕ್ರ ಗ್ರಹದಲ್ಲೂ ಸೂಕ್ಷ್ಮಜೀವಿಗಳು ಬದುಕುತ್ತಿರಬಹುದು ಎಂಬ ಆಶಯ ವಿಜ್ಞಾನಿಗಳಲ್ಲಿ ಮೂಡಿದೆ.

ನರಕದಂತಹ ಗ್ರಹದಲ್ಲಿ ಜೀವಿಗಳು ಬದುಕಬಹುದಾ..?
ಶುಕ್ರ ಗ್ರಹವನ್ನು ನೋಡಿದರೆ ಥೇಟ್ ನರಕವೇ ನೆನಪಾಗುತ್ತದೆ. ಏಕೆಂದರೆ ಶುಕ್ರ ಗ್ರಹದ ಪರಿಸ್ಥಿತಿ ಹಾಗೇ ಇದೆ. ಎಲ್ಲಾ ಕಡೆಯೂ ಕೊತ ಕೊತ ಕುದಿಯುವ ನೆಲ. ಪ್ರತಿಕ್ಷಣಕ್ಕೂ ಸ್ಫೋಟವಾಗುವ ಜ್ವಾಲಾಮುಖಿಗಳು. ಹಾಗೇ ಆಕಾಶಕ್ಕೆ ಹಾರುವ ಟನ್ಗಟ್ಟಲೇ ಆಸಿಡ್ ಗ್ಯಾಸ್. ಇದನ್ನೆಲ್ಲಾ ನೋಡುತ್ತಿದ್ದರೆ ನರಕ ನೆನಪಾಗದೇ ಇರದು. ಆದರೂ ಕೂಡ ಶುಕ್ರನಲ್ಲಿ ಜೀವಿಗಳು ಬದುಕಿರಬಹುದು ಎಂಬ ಕುರುಹನ್ನು ಈ ಫಾಸ್ಫೈನ್ ಗ್ಯಾಸ್ ನೀಡಿದೆ.

ಭೂಮಿಗೆ ಅತ್ಯಂತ ಸಮೀಪದ ಗ್ರಹ
ಸೌರಮಂಡಲದಲ್ಲಿ ಶುಕ್ರ ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗ್ರಹವಾಗಿದೆ. ಭೂಮಿಯಿಂದ ಶುಕ್ರ ಗ್ರಹ ಸುಮಾರು 140 ಮಿಲಿಯನ್ ಕಿಲೋಮೀಟರ್ ಅಂದರೆ 14 ಕೋಟಿ ಕಿಲೋಮೀಟರ್ ದೂರದಲ್ಲಿದೆ. ಈ ಅಂತರ ಭಾರಿ ಎನಿಸಿದರೂ, ಸೌರಮಂಡಲದಲ್ಲಿ ಬೇರೆ ಯಾವುದೇ ಗ್ರಹವೂ ಭೂಮಿಗೆ ಇಷ್ಟು ಹತ್ತಿರದಲ್ಲಿ ಇಲ್ಲ. ರಾತ್ರಿ ಆಕಾಶದಲ್ಲಿ ಬರಿಗಣ್ಣಿಗೆ ಕಾಣುವಷ್ಟು ಶುಕ್ರ ಗ್ರಹ ಭೂಮಿಗೆ ಹತ್ತಿರದಲ್ಲಿದೆ. ಹೀಗಾಗಿ ಪ್ರಸಕ್ತ ಸಂಶೋಧನಾ ವರದಿ ಖಗೋಳ ವಿಜ್ಞಾನದಲ್ಲೇ ದೊಡ್ಡ ತಿರುವು ಎನ್ನಬಹುದಾಗಿದೆ. ಅಕಸ್ಮಾತ್ ಮಾನವನೂ ಕೂಡ ಶುಕ್ರಗ್ರಹದಲ್ಲಿ ಬದುಕಲು ಸಾಧ್ಯವಾದರೆ, ಭವಿಷ್ಯದಲ್ಲಿ ದೊಡ್ಡ ಜಾದೂ ನಡೆದುಹೋಗಲಿದೆ.

ಜೀವಜಗತ್ತು ಭೂಮಿಗಷ್ಟೇ ಸೀಮಿತವಲ್ಲ..!
ತಮ್ಮ ಸಂಶೋಧನೆ ಬಗ್ಗೆ ಅನುಭವ ಹಂಚಿಕೊಂಡಿರುವ ವಿಜ್ಞಾನಿ ಕ್ಲಾರಾ ಸಿಲ್ವ, ನಮ್ಮ ಸಂಶೋಧನೆಯನ್ನು ನೋಡುವುದಾದರೆ ಜೀವಿಗಳು ಶುಕ್ರ ಗ್ರಹದ ಮೇಲೆ ಬದುಕಿರುವ ಸಾಧ್ಯತೆ ಇದೆ. ಏಕೆಂದರೆ ಜೀವಜಗತ್ತು ಭೂಮಿಗಷ್ಟೇ ಸೀಮಿತವಲ್ಲ. ಎಲ್ಲೆಡೆ ಬಹಳ ಸಾಮಾನ್ಯವಾಗಿ ಜೀವಿಗಳ ಅಸ್ತಿತ್ವದಲ್ಲಿರಬಹುದು. ನಮ್ಮ ಗೆಲಾಕ್ಸಿಯಲ್ಲೇ ಇತರ ಗ್ರಹಗಳಲ್ಲಿ ಜೀವಿಗಳು ಇರಬಹುದು ಎನ್ನುತ್ತಾರೆ.

ಜೀವಿಗಳು ಇದ್ದು ನಾಶವಾಗಿ ಹೋದವಾ..?
ಶುಕ್ರನಲ್ಲಿ ಜೀವಿಗಳು ಬದುಕಿದ್ದರೆ ಯಾವ ಆಧಾರದಲ್ಲಿ ಅಸ್ತಿತ್ವದಲ್ಲಿದ್ದಿರಬಹುದು ಎಂಬ ಪ್ರಶ್ನೆ ಸಂಶೋಧಕರನ್ನು ಕಾಡುತ್ತಿದೆ. ಈ ಮಧ್ಯೆ ಶುಕ್ರನ ಮೇಲ್ಮೈನಲ್ಲಿ ಯಾವ ಜೀವಿಯೂ ಬದುಕಲು ಸಾಧ್ಯವಿಲ್ಲ ಎಂದು ಬಹುತೇಕರು ಈಗಲೂ ಪ್ರತಿಪಾದಿಸುತ್ತಿದ್ದಾರೆ. ಆದರೆ, ಲಕ್ಷಾಂತರ ವರ್ಷಗಳ ಹಿಂದೆ ಶುಕ್ರಗ್ರಹದಲ್ಲಿ ಜೀವ ಜಗತ್ತು ಇದ್ದಿರಬಹುದು. ಆದರೆ 'ಗ್ರೀನ್ ಹೌಸ್ ಎಫೆಕ್ಟ್' ಅಥವಾ ಹಸಿರುಮನೆ ಅನಿಲಗಳ ಪರಿಣಾಮದಿಂದ ಶುಕ್ರ ಗ್ರಹದಲ್ಲಿದ್ದ ಜೀವಜಗತ್ತು ನಾಶವಾಗಿರಬಹುದು ಎಂಬ ಪ್ರತಿಪಾದನೆ ಕೂಡ ವಿಜ್ಞಾನಿಗಳದ್ದಾಗಿದೆ.

ಶುಕ್ರ ಗ್ರಹ ಬಿಸಿ ಬಿಸಿ..!
ಶುಕ್ರ ಗ್ರಹ ಸೂರ್ಯನಿಗೆ ತೀರಾ ಸಮೀಪದಲ್ಲಿದ್ದು, ಸೌರಮಂಡಲದ ಸಾಲಿನಲ್ಲಿರುವ 2ನೇ ಗ್ರಹವಾಗಿದೆ. ಈ ಗ್ರಹದ ನಂತರ ನಮ್ಮ ಭೂಮಿ ಇದ್ದು, ನಾವು ವಾಸಿಸುವ ಭೂಮಿ 3ನೇ ಗ್ರಹವಾಗಿದೆ. ಹಾಗೆ ನೋಡಿದರೆ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವ ಶುಕ್ರ ಗ್ರಹದಲ್ಲಿ ಭಾರಿ ಉಷ್ಣಾಂಶವಿದೆ. ಶುಕ್ರ ಗ್ರಹದಲ್ಲಿ ಸಾಮಾನ್ಯ ತಾಪಮಾನವೇ 471 ಡಿಗ್ರಿ ಸೆಲ್ಸಿಯಸ್ನಷ್ಟು ಇರುತ್ತದೆ. ಏಕೆಂದರೆ ಈ ಗ್ರಹದ ವಾತಾವರಣ ಬಹಳ ದಟ್ಟ ಹಾಗೂ ವಿಷಕಾರಿಯಾಗಿದ್ದು ಸೂರ್ಯನ ಬಿಸಿಲನ್ನು ಹಿಡಿದಿಟ್ಟುಕೊಳ್ಳುತ್ತದೆ. ಆದರೂ ಶುಕ್ರ ಗ್ರಹ ಥೇಟ್ ಭೂಮಿಯಂತ ರಚನೆಯನ್ನೇ ಹೊಂದಿರುವುದು ಭಾರಿ ಕುತೂಹಲ ಕೆರಳಿಸಿದೆ. ಮಂಗಳ ಗ್ರಹವನ್ನು ಬಿಟ್ಟರೆ ನಮ್ಮ ಸೌರಮಂಡದಲ್ಲಿ ಜೀವಿಗಳ ಇರುವಿಕೆ ಸಾಧ್ಯವಿರುವುದು ಶುಕ್ರ ಗ್ರಹದಲ್ಲಿ ಮಾತ್ರ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications