ಪತ್ರ : ಗ್ಯಾಸ್ ಸಿಲಿಂಡರ್ ಮೇಲೆ ಕನ್ನಡವೇಕಿಲ್ಲ?
ಮಾನ್ಯ ಸಂಪಾದಕರೆ,
ಪ್ರತಿ ವರುಷದಂತೆ, ಈ ವರ್ಷವೂ ಕೂಡ ಸೆಪ್ಟೆಂಬರ್ 14ರಂದು ಕೇಂದ್ರ ಸರಕಾರ ಹಿಂದಿ ದಿವಸವೆಂದು ಆಚರಿಸುತ್ತದೆ. ಹಾಗೆ, ಹಿಂದಿ ಅನುಷ್ಠಾನಕ್ಕೆಂದು ಕನ್ನಡಿಗರ ತೆರಿಗೆ ಹಣವನ್ನು ಅಪಾರ ಪ್ರಮಾಣದಲ್ಲಿ ಖರ್ಚು ಮಾಡುತ್ತಿದೆ. ಶಿಕ್ಷಣ, ಉದ್ಯೋಗ ಅಷ್ಟೇ ಅಲ್ಲದೆ ಗ್ರಾಹಕ ಸೇವೆಯಲ್ಲಿ ಹಿಂದಿ ಬಳಕೆ ತರಿಸಿ, ಬೇರೆ ಭಾಷಿಕರಿಗೆ ಹಿಂದಿ ಕಲಿಯದೆ ದಾರಿಯಿಲ್ಲ ಎಂಬಂತಹ ವಾತಾವರಣ ನಿರ್ಮಿಸುವು ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಗೇಲಿ ಮಾಡುತ್ತಿರುವಂತಿದೆ.
ಸರಿ ಈ ರಾಜಭಾಷೆಯ ಸೋಗಿನಲ್ಲಿ ಹಿಂದಿ ಭಾಷೆನ ಕನ್ನಡ ಗ್ರಾಹಕನ ಮೇಲೆ ಹೇರಕ್ಕೆ ಏನೆಲ್ಲಾ ಕಸರತ್ತು ಮಾಡ್ತಿದೆ ಎಂಬುದು ಒಮ್ಮೆ ಗಮನಿಸಿದರೆ, ನಾವು ಮನೆಗೆ ತರಿಸುವ ಅಡುಗೆ ಅನಿಲದ ಸಿಲಿಂಡರ್-ನಲ್ಲಿ ಸುರಕ್ಷತಾ ಸೂಚನೆ ಹಿಂದಿಯಲ್ಲಿರುತ್ತವೆ. ಕನ್ನಡ ಭಾಷೆಯಲ್ಲೇಕಿಲ್ಲ? ಕರ್ನಾಟಕದ ಒಳಗಡೆ ಪ್ರಯಾಣಿಸುವ ರೈಲುಗಳಲ್ಲಿ ಊರಿನ ಹೆಸರು ಮತ್ತು ಸುರಕ್ಷತೆ ಮಾಹಿತಿ ಹಿಂದಿಯಲ್ಲಿ ಬರೆಯಲಾಗಿರುತ್ತದೆ. ಇದಕ್ಕೆ ನಮ್ಮ ಮೆಟ್ರೋ ಕೂಡ ಏನು ಹೊರತಾಗಿಲ್ಲ, ಅಲ್ಲೂ ಕೂಡ ಒತ್ತಾಯದ ಹಿಂದಿ ಹೇರಿಕೆ ಮಾಡುವಲ್ಲಿ ಸಫಲವಾಗಿದೆ.
ಕನ್ನಡಿಗರು ತಮ್ಮ ಹಣ ಕಟ್ಟಿ ಪಡೆಯುವಂತಹ ಎಲ್.ಐ.ಸಿ ಬಾಂಡುಗಳ ವಿವರಣೆ, ಪಾಲಿಸಿಯ ಹೆಸರುಗಳು ಮತ್ತು ಜಾಹೀರಾತುಗಳು ಹಿಂದಿಯಲ್ಲಿರುತ್ತವೆ. ಇನ್ನು ಬ್ಯಾಂಕು/ಅಂಚೆ ಕಚೇರಿಗಳಲ್ಲಿ ನೀಡುವ ಚಲನ್-ಗಳು, ಮಾಹಿತಿ ಪತ್ರಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿರುತ್ತವೆ. ಆದರೆ ಆಯಾ ಕಚೇರಿಗಳು ಇರುವ ಪ್ರದೇಶದ ಭಾಷೆಯಲ್ಲಿ ಇರುವುದಿಲ್ಲ.
ಹಿಂದಿಯೇತರ ರಾಜ್ಯಗಳಲ್ಲಿ ತ್ರಿಭಾಷಾ ಸೂತ್ರದ ಅವಶ್ಯಕತೆಯಾದರು ಏನಿದೆ? ಕರ್ನಾಟಕದ ಜಿಲ್ಲೆಯ ಕೇಂದ್ರ ಸರಕಾರಿ ಕಚೇರಿಗಳಲ್ಲಿ ಕನ್ನಡ ಕೈ ಬಿಟ್ಟು, ಇಲ್ಲವೇ ಕಾಟಾಚಾರಕ್ಕೆ ಅನ್ನುವಂತೆ ಎರಡು ಅಕ್ಷರ ಬಳಸಿ, ಎಲ್ಲೆಡೆ ಹಿಂದಿಯನ್ನೇ ಬಳಸಲಾಗುತ್ತಿದೆ. ಅನೇಕತೆಯಲ್ಲಿ ಏಕತೆ ಎನ್ನುವುದನ್ನು ಕಡೆಗಣಿಸಿ ದಶಕಗಳಿಂದ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುತ್ತಿರುವ ಕೇಂದ್ರ ಸರ್ಕಾರದ ನಡವಳಿಕೆ ಒಕ್ಕೂಟವೊಂದರಲ್ಲಿ ಎಲ್ಲರೂ ಸಮಾನರು ಅನ್ನುವ ಮಾತನ್ನೇ ಅಳಿಸಿಹಾಕುತ್ತಿದೆ. ಇದರ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಬೇಕಾಗಿದೆ.
ನಿಮ್ಮ
ನಂಬುಗೆಯ,
ಜಯಂತ್
ಸಿದ್ಮಲ್ಲಪ್ಪ,
ಶಿವಮೊಗ್ಗ
[ಓದಿರಿ
:
ಒತ್ತಡ
ಹೇರಿದರೆ
ಹಿಂದಿ
ಕಲಿಯಲಾರೆ]