ದರ ಹೆಚ್ಚಳ: ಶ್ರೀಸಾಮಾನ್ಯರಿಂದ ಸರ್ಕಾರಕ್ಕೆ ಹಿಡಿಶಾಪ
'ನಾಚಿಕೆ ಆಗಲ್ವೇನ್ರಿ ಈ ಸರ್ಕಾರಕ್ಕೇ.. ಸಿದ್ದುಗೆ ಏನು ಬಂದಿದೇ.. ಈ ರೀತಿ ಹುಚ್ಚು ನಿರ್ಣಯಗಳನ್ನು ತೆಗೆದುಕೊಂಡು ಜನರ ಹೊಟ್ಟೆ ಉರಿಸ್ತಾರೆ.. ಬಿಎಂಟಿಸಿ ಪಬ್ಲಿಕ್ ಸಂಸ್ಥೆ ಅಲ್ವಾ ಲಾಭ ನಷ್ಟ ಚಿಂತೆಯಲ್ಲಿ ಪಬ್ಲಿಕ್ ಗೆ ಕಷ್ಟ ಕೊಡೊದೇನ್ರಿ ಥುತ್' ಇದು ರಾಮಮೂರ್ತಿ ಒಬ್ಬರ ಮಾತಲ್ಲ. ಪ್ರತಿನಿತ್ಯ ಸಾರ್ವಜನಿಕ ಸಾರಿಗೆ ಬಿಎಂಟಿಸಿಯಲ್ಲಿ ಓಡಾಡುವ ಹಲವರ ಒಕ್ಕೊರಲ ಕೂಗು
ನಿನ್ನೆ ಮಧ್ಯರಾತ್ರಿಯಿಂದಲೇ ಟಿಕೆಟ್ ದರವನ್ನು ಕನಿಷ್ಠ 1 ರೂ.ನಿಂದ ಗರಿಷ್ಠ 15 ರೂ.ವರೆಗೆ, ದಿನದ ಪಾಸ್ ಗಳಲ್ಲಿ 10 ರೂ.ನಿಂದ 15 ರೂ.ಗೆ ಹಾಗೂ ಮಾಸಿಕ ಪಾಸಿನ ದರವನ್ನು 100 ರಿಂದ 300 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಮಾಸಿಕ ಪಾಸ್ ಗಳಾದ ಕಪ್ಪು ಹಲಗೆ ಪಾಸನ್ನು 725 ರಿಂದ 825 ಗೆ ಹಾಗೂ ಕೆಂಪು ಹಲಗೆ ಪಾಸನ್ನು 925 ರಿಂದ 1050 ಕ್ಕೆ ಹಾಗೂ ವೋಲ್ವೋ ಪಾಸನ್ನು 1,950 ರಿಂದ 2,250 ರೂ.ಗೆ ಹೆಚ್ಚಿಸಲಾಗಿದೆ.
ಸಾಮಾನ್ಯ ದಿನದ ಪಾಸ್ ದರವನ್ನು 60 ರಿಂದ 70ರೂ.ಗೆ, ವೋಲ್ವೋ ದಿನದ ಪಾಸನ್ನು 120 ರಿಂದ 140 ರೂ.ಗೆ, ಎಸಿ ಸುವರ್ಣ ಪಾಸ್ ದರವನ್ನು 80 ರಿಂದ 95 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಈ ಎಲ್ಲಾ ದರ ಹೆಚ್ಚಳ ಕಂಡು ಕೋಪಗೊಂಡಿರುವ ಶ್ರೀಸಾಮಾನ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾನೆ. [ವಿವರ ಇಲ್ಲಿ ಓದಿ]
ಚುನಾವಣೆ ನಂತರ ಇದು ಮಾಮೂಲಿ ಸಾರ್, ಕಳೆದ ವಿಧಾನಸಭೆ ಚುನಾವಣೆ ಮುಗಿದ ಮೇಲೂ ಕೂಡ ಇದೇ ರೀತಿ ಶೇ.16 ರಷ್ಟು ದರ ಹೆಚ್ಚಳ ಮಾಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದೆ. ಇದರಲ್ಲಿ ಸಿದ್ದರಾಮಯ್ಯ ಏನು ಮಾಡಕ್ಕಾಗಲ್ಲ ಎಂದು ಸರ್ಕಾರಕ್ಕೆ ಸಹಾನುಭೂತಿ ವ್ಯಕ್ತಪಡಿಸುವವರು ಇದ್ದಾರೆ. ಕೇವಲ ಒಂದು ವರ್ಷದ ಅವಧಿಯಲ್ಲೇ ಶೇ.31 ರಷ್ಟು ಬಸ್ ದರ ಹೆಚ್ಚಳ ಮಾಡಿರುವ ಇತಿಹಾಸ ಬೆಂಗಳೂರು ಬಿಟ್ಟರೆ ಜಗತ್ತಿನ ಯಾವುದೇ ನಗರದಲ್ಲಿ ಇಲ್ಲ ಎಂದು ಹೇಳಲಾಗುತ್ತಿದೆ.

ದರ ಹೆಚ್ಚಳದ ಬಗ್ಗೆ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವೆ ವಾದ, ವಿವಾದ ತಾರಕಕ್ಕೆ ಮುಟ್ಟಿದೆ. ಅಯ್ಯೋ ನಮ್ಮನ್ನು ಏಕೆ ಕೇಳುತ್ತೀರಾ. ಸರ್ಕಾರ ದರ ಹೆಚ್ಚಳ ಮಾಡಿದೆ ನೀವು ಹೋಗಿ ಸರ್ಕಾರವನ್ನು ಕೇಳಿ, ಸರಿಯಾಗಿ ಚೇಂಜ್ ಕೊಡಿ ಎಂದು ಕಂಡಕ್ಟರ್ ಗಳು ವಿಧಿ ಇಲ್ಲದೆ ಪ್ರಯಾಣಿಕರ ಮೇಲೆ ಹರಿಹಾಯುತ್ತಿದ್ದಾರೆ.
ಬಿಎಂಟಿಸಿ ಏನು ಖಾಸಗಿ ಕಂಪನಿಯೇ? : ಬಿಎಂಟಿಸಿ ಎಂಬುದು ಸಾರ್ವಜನಿಕ ಸೇವೆಗೆ ಮೀಸಲಾದ ಸಂಸ್ಥೆ. ಇಲ್ಲಿ ಲಾಭ ಏಕೆ ನೋಡಬೇಕ? ಸಾರ್ವಜನಿಕ ಸೇವೆಗೆ ಮೀಸಲಾದ ಸಂಸ್ಥೆಗಳು ಲಾಭದ ಉದ್ದೇಶವಿಲ್ಲದೆ ಕೆಲಸ ಮಾಡಬೇಕು ಎಂಬುದು ನಿಯಮ.? ರಾಮಲಿಂಗಾರೆಡ್ಡಿ ಅವರು ಆರ್ ಅಶೋಕ್ ಅವರ ಕಾಲದ ಲೆಕ್ಕಾಚಾರ ಮೀರಿಸಲು ಯತ್ನಿಸುತ್ತಿದ್ದಾರೆಯೇ? ಒಂದೆರಡು ವರ್ಷಗಳ ಹಿಂದೆ 250 ಕೋಟಿ ರೂ. ಲಾಭ ಬಂದಿದೆ ಎಂದು ಹೇಳುತ್ತಿದ್ದ ಸಂಸ್ಥೆ ಈಗ ಈ ಪರಿಯ ದರ ಹೆಚ್ಚಳದ ನಡುವೆಯೂ 250 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಹೇಳುತ್ತಿದೆ.
ಮೊದಲಿಗೆ ಹಿರಿಯ ಅಧಿಕಾರಿಗಳ ಸಂಬಳ ಕಡಿತಗೊಳಿಸಿ, ಟೆಂಡರ್ ಪ್ರಕ್ರಿಯೆ ಪಾರದರ್ಶಕಗೊಳಿಸಿ, ಟೈರು, ಬಸ್ ಖರೀದಿ ಹೆಸರಿನಲ್ಲಿ ಸಣ್ಣ ಪುಟ್ಟ ಅಧಿಕಾರಿಗಳು, ಫುಲ್ ಎಲೆಕ್ಟ್ರಿಕ್ ಬಸ್ ಎಂಬ ಹೆಸರಿನಲ್ಲಿ ಜನರಿಗೆ ಬೇಡವಾದ ಬಸ್ ತೋರಿಸಿ ಹಣ ಮಾಡುವುದನ್ನು ಕೈ ಬಿಡಿ. ಇಂಧನ ಬೆಲೆ ಏರಿಕೆ ಕಾಣದಿದ್ದರೂ ಕಾಂಗ್ರೆಸ್ ಸರ್ಕಾರ ಏಕಾಏಕಿ ಬಸ್ ದರ ಏರಿಸಿರುವುದು ಅಮಾನವೀಯ ಕೃತ್ಯ. ಮೊದಲು ಬಿಎಂಟಿಸಿಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಿ, ಹಿರಿಯ ಅಧಿಕಾರಿಗಳು ಲೂಟಿ ಮಾಡುವುದನ್ನು ತಡೆಗಟ್ಟಿ ಆಗ ಸಂಸ್ಥೆ ಲಾಭದಾಯಕವಾಗುತ್ತದೆ. ಸುಮ್ಮನೆ ಸಾರ್ವಜನಿಕರ ಮೇಲೆ ಏಕೆ ಹೊರೆ ಹಾಕುತ್ತೀರಿ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಸರ್ಕಾರಕ್ಕೆ ಹಣಬೇಕಾದರೆ ಐಟಿ ಕಂಪನಿಗಳಿಗೆ ಕಳಿಸುವ ಗುತ್ತಿಗೆ ಬಸ್ ದರ ಏರಿಕೆ ಮಾಡಲಿ.. ಅದು ಸಾಧ್ಯವಿಲ್ಲದ ಮಾತು ಎಂಬುದು ಬಿಎಂಟಿಸಿ ಅಧಿಕಾರಿಗಳಿಗೆ ಗೊತ್ತಿದೆ. ದರ ಏರಿಸಿದರೆ ಐಟಿ ಕಂಪನಿಗಳು ಖಾಸಗಿ ಬಸ್ ಸಂಸ್ಥೆಗಳತ್ತ ತಿರುಗುವುದನ್ನು ತಡೆಯಲು ಸಾಧ್ಯವಿಲ್ಲ. ಹೀಗಾಗಿ ಅರಣ್ಯರೋದನ ಮಾಡುವ ಸತ್ ಪ್ರಜೆಗಳ ಮೇಲೆ ಹೆಣಭಾರ ಹೊರೆಸಲಾಗಿದೆ. [ನಿಮ್ಮ ಅನಿಸಿಕೆ ಏನು? ಇಲ್ಲಿ ಮತ ಹಾಕಿ]











Click it and Unblock the Notifications