ಬೆಂಗಳೂರು: ಶಂಕರ್ ನಾಗ್ ವೃತ್ತದ ಸುತ್ತ ಇದೆಂಥ ವಾಸನೆ?
ಮನೆಗೆ ತೆರಳಲು ಹೊರಟಿದ್ದ ನಾನು ಬಸ್ ಏರಬೇಕಾಗಿದ್ದದ್ದು ವಿದ್ಯಾಪೀಠ ವೃತ್ತದಲ್ಲಿ. ರಾತ್ರಿ 8.30ಕ್ಕೆ ನಾನು ಬಸ್ ಏರಬೇಕಿತ್ತು. ಶ್ರೀನಿವಾಸನಗರದಲ್ಲಿದ್ದ ನಾನು ಶಂಕರ್ ನಾಗ್ ವೃತ್ತದ ಮಾರ್ಗವಾಗಿ ವಿದ್ಯಾಪೀಠಕ್ಕೆ ತೆರಳುವ ನಿರ್ಧಾರ ಮಾಡಿದೆ.
ಪುಟ್ ಪಾತ್ ನಲ್ಲಿ ನಡೆದುಕೊಂಡು ಹೊರಟರೆ ದಾರಿಯೇ ಇಲ್ಲ. ಮಾಂಸದ ಅಂಗಡಿಗಳಿಂದ ಹೊರಡುವ ಘಾಟು ವಾಕರಿಕೆ ತರಿಸಿತ್ತು. ನನಗೆ ಆಗಲೇ ಆಗಿದ್ದು ಶಂಕರ್ ನಾಗ್ ವೃತ್ತದ ಪರಿಸ್ಥಿತಿಯ ದಿಗ್ದರರ್ಶನ[ಮಾಧ್ಯಮಗಳೇ ಹೀಗೆ ಮಾಡಿದ್ರೆ? ಸ್ವಲ್ಪ ಯೋಚಿಸಿ ಸ್ವಾಮಿ!]

ಚಿಮಣಿ ಇಲ್ಲದ ಮಾಂಸದ ಅಂಗಡಿ, ಎಲ್ಲೆಂದರಲ್ಲಿ ನಿಲ್ಲಿಸುವ ಆಟೋಗಳು, ಪಕ್ಕದ ಕ್ರೀಡಾಂಗಣದಲ್ಲಿ ಮದ್ಯದ ಪ್ಯಾಕೇಟ್, ಬಾಟಲಿಗಳು, ಕಸದ ವಾಸನೆ, ಕ್ರೀಡಾಂಗಣದ ಪಕ್ಕದ ಶೌಚಾಲಯದ ಹಿಂದೆ ತುಂಬಿಕೊಂಡಿರುವ ಕಸ, ಕಟ್ಟಿಕೊಂಡ ಚರಂಡಿ ಇವೆಲ್ಲ ಕರಾಟೆ ಕಿಂಗ್ ಶಂಕರ್ ನಾಗ್ ಹೆಸರಿನ ವೃತ್ತದ ಸದ್ಯದ ಸ್ಥಿತಿ.
ಅಲ್ಲಲ್ಲಿ ಬಿದ್ದಿರುವ ಪ್ಲಾಸ್ಟಿಕ್ , ಈರುಳ್ಳಿ ಸಿಪ್ಪೆ, ಮಾಂಸದ ವಾಸನೆಗೆ ಕಾದು ಕುಳಿತ ಬೀದಿ ನಾಯಿಗಳು ಅಬ್ಬಬ್ಬಾ ಹೇಳಲು ಅಸಾಧ್ಯ. ಪುಟ್ ಪಾತ್ ಮೇಲೆ ತೆರಳಲು ಸಾಧ್ಯವಿಲ್ಲ ಎಂದು ಬಂದ ದಾರಿಯಲ್ಲೇ ಸ್ವಲ್ಪ ಹಿಂದಕ್ಕೆ ಹೋಗಿ ಮುಖ್ಯ ರಸ್ತೆಗೆ ಇಳಿದೆ. ಮುಂದೆ ಬಂದಾಗ ಎದುರಾಗಿದ್ದು ಆಟೋಗಳ ಸಾಲು. ಶಂಕರ್ ನಾಗ್ ವೃತ್ತದ ಸುತ್ತ ನೋ ಪಾರ್ಕಿಂಗ್ ಇದೆ. ಆದರೆ ಆಟೋಗಳನ್ನು, ದ್ವಿಚಕ್ರ ವಾಹನಗಳನ್ನು ಮನಸ್ಸಿಗೆ ಬಂದ ಹಾಗೆ ನಿಲ್ಲಿಸಲಾಗಿತ್ತು.

ಅತ್ತ ತೆರಳೋಣವೆಂದರೆ ವೇಗವಾಗಿ ಬರುತ್ತಿದ್ದ ವಾಹನಗಳು, ಅಲ್ಲಿಯೇ ನಿಲ್ಲೋಣ ಎಂದರೆ ಅಸಹ್ಯ ವಾಸನೆ. ಪೊಲೀಸ್ ವಾಹನಗಳು ಗಸ್ತು ತಿರುಗುವುದನ್ನು ನೋಡಿದೆ ಆದರೆ ಅವರ್ಯಾರು ಪರಿಹಾರ ಕ್ರಮ ಮುಂದಾಗುವವರಂತೆ ಕಾಣಲಿಲ್ಲ.
ಅಂತೂ ಇಂಥೂ ಹೇಗೋ ಸುಧಾರಿಸಿಕೊಂಡು ವಿದ್ಯಾಪೀಠ ಸೇರುವಷ್ಟರ ಹೊತ್ತಿಗೆ ಸಾಕು ಸಾಕಾಗಿ ಹೋಯಿತು. ಬೆಂಗಳೂರಿನ ಎಲ್ಲ ಏರಿಯಾಗಳ ಸ್ಥಿತಿಯೂ ಹೀಗೆಯೇ ಇದೆಯೇ? ಅಥವಾ ಇಲ್ಲಿ ಮಾತ್ರ ಹೀಗೆಯೇ? ಬಿಬಿಎಂಪಿ ಚುನಾವಣೆ ಎದುರಾಗಿದೆ. ಇವು ಚಿಕ್ಕ ಸಮಸ್ಯೆ ಎಂದು ಅನಿಸಬಹುದುದು, ಆದರೆ ಪ್ರತಿದಿನ ಉಂಟುಮಾಡುವ ಕಿರಿಕಿರಿಯನ್ನು ಹೇಳಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳು ಈ ಬಗೆಯ ಸಮಸ್ಯೆ ಪರಿಹಾರದ ಬಗ್ಗೆಯೂ ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡರೆ ಒಳಿತು.
ಇಂತಿ ನಮ್ಮ ಓದುಗ ನಾಗರಾಜು











Click it and Unblock the Notifications