ಸಾಮಾಜಿಕ ಜಾಲತಾಣದಲ್ಲಿ ಅನಂತ್ ನೆನೆದು ಮಿಡಿದ ಕಂಬನಿ
ರಾಜಕೀಯವಾಗಿ ಅನಂತ್ ಕುಮಾರ್ ಅವರನ್ನು ಎಷ್ಟೋ ಜನ ವಿರೋಧಿಸಬಹುದು ಅಥವಾ ದ್ವೇಷಿಸಬಹುದು. ಆದರೆ, ವೈಯಕ್ತಿಕವಾಗಿ ಅವರನ್ನು ಅವರನ್ನು ವಿರೋಧಿಸುವವರು ಕೂಡ ದ್ವೇಷಿಸಲಾರರು. ಅನಂತ್ ಅವರಲ್ಲಿ ಎಷ್ಟೇ ಕುಂದುಕೊರತೆಗಳಿದ್ದರೂ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ಅನಂತ್ ಕುಮಾರ್.
59 ವರ್ಷ ವಯಸ್ಸಿನವರಾಗಿದ್ದ ಅನಂತ್ ಕುಮಾರ್ ಅವರು ಕ್ಯಾನ್ಸರಿಗೆ ಬಲಿಯಾಗಿರುವ ಹೊತ್ತಿನಲ್ಲಿ ಎಲ್ಲೆಡೆಯಿಂದಲೂ ಶೋಕದ ಸಂದೇಶಗಳು ಹರಿದುಬರುತ್ತಿವೆ. ಅವರನ್ನು ಬಲ್ಲವರು, ಸ್ನೇಹ ಗಳಿಸಿದ್ದವರು, ಗುರುತು ಪರಿಚಯ ಇಲ್ಲದವರು ಕೂಡ ಪಕ್ಷಭೇದ ಮರೆತು ಅನಂತ್ ಅಗಲಿಕೆಗೆ ಕಂಬನಿ ಮಿಡಿಯುತ್ತಿದ್ದಾರೆ.
ಅನಂತ್ ಕುಮಾರ್ ಇದ್ದಿದ್ದೇ ಹಾಗೆ. ರಾಜಕೀಯ ವಿರೋಧಿಗಳನ್ನು ಟೀಕಿಸುವಾಗ ಕೂಡ ಮಾತಿನ ಎಲ್ಲೆ ಮೀರುತ್ತಿರಲಿಲ್ಲ. ಇನ್ನು ಸ್ನೇಹವನ್ನು ಅವರು ಅಷ್ಟು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ವಿರೋಧ ಪಕ್ಷಗಳ ಹಲವಾರು ನಾಯಕರೊಂದಿಗೆ ಕೂಡ ಅವರದು ಸಲುಗೆಯ ಗೆಳೆತನ. ಅವರ ಅಗಲಿಕೆಯಿಂದ ಇಡೀ ಕನ್ನಡ ನಾಡೇ ದುಃಖದಿಂದ ಪರಿತಪಿಸುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಕೂಡ ಅನಂತ್ ಅವರು ಸಮಾಜಕ್ಕೆ ನೀಡಿದ ಕಾಣಿಕೆಯನ್ನು ನೆನೆದು, ಅವರ ನಿಷ್ಕಲ್ಮಶ ವ್ಯಕ್ತಿತ್ವವನ್ನು ನೆನಪಿಸಿಕೊಂಡು ಹಲವಾರು ನೆಟ್ಟಿಗರು ಅಗಲಿದ ನಾಯಕನಿಗೆ ನಮನ ಸಲ್ಲಿಸಿದ್ದಾರೆ. ನೆಟ್ಟಿಗರ ಮಾತುಗಳೇ ಅನಂತ್ ಕುಮಾರ್ ಅವರ ಮೇರು ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಕ್ಯಾನ್ಸರ್ ನೊಂದಿಗೆ ಕೆಲಕಾಲ ಹೋರಾಟ ಮಾಡಿದ ಅವರು ಕಡೆಗೂ ಸೋತು, ನವೆಂಬರ್ 12ರಂದು ಬೆಳಗಿನ ಜಾವ 3 ಗಂಟೆಗೆ ಬೆಂಗಳೂರಿನ ಶಂಕರ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಫೇಸ್ ಬುಕ್ಕಿನಲ್ಲಿ ಅನಂತ್ ಅವರಿಗೆ ಸಲ್ಲಿಸಲಾದ ಕೆಲ ಸಂದೇಶಗಳು ಇಲ್ಲಿವೆ.

ಅನಂತ ಚೇತನಕ್ಕೆ ಅನಂತ ನಮನಗಳು
ಅನಂತ ನಾ ಅನಂತವಾಗಿ ಏರುತಿಹೆನು ಅಮರನಾಗಿ ಎಂದು ಇಹಲೋಕ ಯಾತ್ರೆ ಮುಗಿಸಿದ ಅನಂತ ಚೇತನಕ್ಕೆ ಅನಂತ ನಮನಗಳು. ನಿಮ್ಮ ಆತ್ಮಕ್ಕೆ ಶಾಂತಿ ಸದ್ಗತಿ ದೊರೆಯಲಿ.
ಗವಿ ಸ್ವಾಮಿ

ಅನಂತ್, ನಿಮ್ಮನ್ನು ಹೇಗೆ ನೆನೆಯಲಿ
ಅನಂತ ಕುಮಾರ್. ಹೇಗೆ ಇವರನ್ನು ನೆನಪು ಮಾಡಿಕೂಳ್ಳಲಿ. ಅವರು ಸೈಕಲ್ ಮೇಲೆ ಬರುತ್ತಿದ್ದ ದಿನಗಳು ನೆನಪಿದೆ. ನಾನು ಮತ್ತು ಅವರ ಕುಟುಂಬ ಜೂತೆಯಾಗಿ (ಉತ್ತರ ಕನ್ನಡ ಜಿಲ್ಲೆಯಲ್ಲಿರುವ) ಯಾಣಕ್ಕೆ ಪ್ರವಾಸ ಮಾಡಿದ್ದು ನೆನಪಾಗುತ್ತಿದೆ. ನನಗೆ ಬದುಕಿನ ಪಾಠ ಮಾಡಿದ್ದು.... ನೂರೆಂಟು ನೆನಪುಗಳು.... ಅನಂತ್ ಯಾಕೆ ಇಷ್ಟು ಬೇಗ ಹೊರಟು ಬಿಟ್ಟಿರಿ ನೀವು.....
ಶಶಿಧರ ಭಟ್

ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ
ಉತ್ತಮ ಸಂಸದೀಯ ಪಟು, ಕೇಂದ್ರದ ಸಚಿವ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ಅನಂತ ಕುಮಾರ್ ಅವರ ನಿಧನ ತೀವ್ರ ಆಘಾತಕಾರಿಯಾದ ವಿಷಯ. ಅವರ ನಿಧನದಿಂದ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ಬಂಧು ಬಳಗದವರಿಗೆ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ.
ಎಎನ್ ನಟರಾಜ್ ಗೌಡ

ಆದರೆ ಇಷ್ಟು ಬೇಗ...?
ದೇವರು ಒಳ್ಳೆಯ ಅವಕಾಶ ನೀಡಿದ್ದರು. ಅದನ್ನು ಇನ್ನೂ ಒಳ್ಳೆಯ ರೀತಿಯಲ್ಲಿ ಜನೋಪಯೋಗಿಯಾಗಿ ಬಳಸಿಕೊಳ್ಳುವ ಸಾಮರ್ಥ್ಯವೂ ಇತ್ತು. ಆದರೆ ಇಷ್ಟು ಬೇಗ...?
ಛೇ...
ಆತ್ರಾಡಿ ಸುರೇಶ್ ಹೆಗ್ಡೆ
ಶುದ್ಧ ಸಭ್ಯ ವ್ಯಕ್ತಿತ್ವ ನಿಮ್ಮಲ್ಲಿತ್ತು..
ನಮ್ಮ ನಾಡನ್ನು ಆಳಲು ನೀವಿರಬೇಕಿತ್ತು..
ನಾಡಿಗೆ ನಾಡೇ ನಿಮ್ಮ ಆಗಮನವ ಕಾಯುತ್ತಿತ್ತು..
ಇಷ್ಟು ಬೇಗ ಮರೆಯಾಗುವ ಅವಸರ ಏನಿತ್ತು..
..
ಶುದ್ಧ ಸಭ್ಯ ವ್ಯಕ್ತಿತ್ವ ನಿಮ್ಮಲ್ಲಿತ್ತು..
ನಮ್ಮ ನಾಡನ್ನು ಆಳಲು ನೀವಿರಬೇಕಿತ್ತು..
..
ಇಷ್ಟು ಅವಸರ ಏನಿತ್ತು..
ನೀವು ಇರಬೇಕಿತ್ತು..
ಕೃಷ್ಣ ಬೆಳ್ತಂಗಡಿ

ಅನಂತ ಕುಮಾರ ನಿಮಗೆ ನನ್ನ ಕೋಟಿ ನಮನ
ಸುಸಂಸ್ಕೃತ ಬ್ರಾಹ್ಮಣ. ಸಂಘ ಪರಿವಾರದ ಶಿಸ್ತಿನ ಸೇವಕ, ಬೆಂಗಳೂರ ದಕ್ಷಿಣದ ಸಂಸದ, ಬಿ.ಜೆ.ಪಿ. ವಾಕ್ ಚತುರ ಅನಂತ ಕುಮಾರ ನಿಮಗೆ ನನ್ನ ಕೋಟಿ ನಮನ.
ಆನಂದ ವೈದ್ಯ, ಧಾರವಾಡ












Click it and Unblock the Notifications