ದುರ್ಬಲ ಲೋಕಾಯುಕ್ತ ಏಕೆ, ಸುಮ್ಮನೆ ಮುಚ್ಚಿ ಬಿಡಿ

ಆದರೆ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ, ಅವರ ಜಾಗಗಳಿಗೆ ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವ ಅಧಿಕಾರಿಗಳನ್ನು ವರ್ಗಾ ಮಾಡುತ್ತಿರುವುದು ಪ್ರಜೆಗಳಿಗೆ ಮಾಡುತ್ತಿರುವ ಅನ್ಯಾಯ.
ರಾಜಕಾರಣಿಗಳಿಗೆ ಇಷ್ಟವಾಗುವ ಅಧಿಕಾರಿಗಳನ್ನೇ ನೇಮಕ ಮಾಡುತ್ತಾ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿ, ಸರ್ಕಾರದ ಪುಂಗಿನಾದಕ್ಕೆ ಕುಣಿಯುವಂತೆ ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯ.
ಇತ್ತೀಚಿನ ಕೆಲವು ಅಪ್ರಿಯ ಘಟನೆಗಳ ಕಾರಣ ದಿಂದ ಕರ್ನಾಟಕ ಸರ್ಕಾರಕ್ಕೆ ಇದು ಅತ್ಯಗತ್ಯವಾಗಿರುವಂತೆ ತೋರುತ್ತದೆ. ಇಲ್ಲವಾಗಿದ್ದರೆ ಅಂತಹ ಆರೋಪಿಗಳಲ್ಲಿ ಒಬ್ಬರು ನ್ಯಾಯಾಂಗ ಬಂಧನದಿಂದ ಜಾಮೀನಿನ ಪಡೆದು ವಾರ ಕೂಡಾ ಕಳೆಯುವ ಮುನ್ನವೇ ಲೋಕಾಯುಕ್ತದ ಅಧಿಕಾರಿಗಳ ಬದಲಾವಣೆಯ ಅವಶ್ಯಕತೆಯಾದರೂ ಏನಿತ್ತು?
ಹೀಗೆಲ್ಲ ಆಗುತ್ತಿರುವುದನ್ನುನೋಡಿದರೆ ಕರ್ನಾಟಕಕ್ಕೆ ನಿಜವಾಗಿಯೂ ಲೋಕಾಯುಕ್ತದ ಅಗತ್ಯವಿದೆಯಾ ಎಂದು ಅನುಮಾನ ಹುಟ್ಟುತ್ತದೆ. ಈ ರೀತಿ ಲೋಕಾಯುಕ್ತ ವ್ಯವಸ್ಥೆಯನ್ನೇ ದುರ್ಬಲಗೊಳಿಸುವ ಬದಲು ಪೂರ್ಣ ರದ್ದುಗೊಳಿಸಿಬಿಟ್ಟರೆ ಮತ್ತೆ ಕರ್ನಾಟಕ ಕಂಡ ಅತಿ ಶೇಷ್ಠ ಮುಖ್ಯಮಂತ್ರಿ ಸದಾನಂದ ಗೌಡರು ಎಂಬುದಾಗಿ ಅವರ ಸಹವರ್ತಿಗಳು ಕೂಡಾ ಕೊಂಡಾಡಬಹುದು.
ಲೋಕಾಯುಕ್ತರೇನು ಕ್ರೈಂ ರಿಪೋರ್ಟರಾ? : ಆ ಬಗ್ಗೆ ವಿಧಾನಸಭೆಯ ಮುಂದಿನ ಅಧಿವೇಶನದಲ್ಲೇ ಸೂಕ್ತ ಮಸೂದೆಯೊಂದನ್ನು ಮಂಡಿಸುವುದು ಸೂಕ್ತ. ಕ್ರೈಂ ಎಲ್ಲಿ ನಡೆಯುತ್ತಿದೆ, ಭ್ರಷ್ಟರು ಎಲ್ಲಿದ್ದಾರೆ ಯಾವ ಇಲಾಖೆಯಲ್ಲಿ ಏನು ಅಕ್ರಮ ಎಂದು ತೋರಿಸಿಕೊಟ್ಟು ರೋಚಕ ವರದಿ ನೀಡಲು ಟಿವಿ ಮಾಧ್ಯಮಗಳಿವೆ, ಪೂರಕವಾಗಿ ದಿನಪತ್ರಿಕೆ, ಪೀತಪತ್ರಿಕೆಗಳಿವೆ. ಈ ಕೆಲಸ ಮಾಡಲು ನಿವೃತ್ತ ನ್ಯಾಯಾಧೀಶರೇ ಬೇಕೆಂದಿಲ್ಲ.
ಹೆಚ್ಚೆಂದರೆ ಲೋಕಾಯುಕ್ತ ಸಂಸ್ಥೆ ಭ್ರಷ್ಟರ ಮೇಲೆ ಆರೋಪ ಹೊರೆಸಿ ವರದಿ ನೀಡಬಹುದು. ನಂತರ ಸರ್ಕಾರಕ್ಕೆ ಇಷ್ಟವಾದರೆ ವರದಿಯಲ್ಲಿರುವ ಆರೋಪಿಗಳ ಮೇಲೆ ತನಿಖೆ ಇಲ್ಲದಿದ್ದರೆ ವರದಿ ಕಸದ ಬುಟ್ಟಿಗೆ ಹೋಗುತ್ತದೆ. ಇಡೀ ನ್ಯಾಯಾಂಗ ವ್ಯವಸ್ಥೆಯ ಅಣಕದ್ದಂತಿರುವ ಲೋಕಾಯುಕ್ತ ಸಂಸ್ಥೆ ಮುಚ್ಚಿ ಮಾನ ಕಾಪಾಡಿ, ಇಲ್ಲಾಂದ್ರೆ ಲೋಕಾಯುಕ್ತಕ್ಕೆ ಪರಮಾಧಿಕಾರ ಕೊಟ್ಟು ಜನಪ್ರತಿನಿಧಿಗಳನ್ನು ಶಿಕ್ಷಿಸುವ ಹಕ್ಕು ನೀಡಿ












Click it and Unblock the Notifications