ಸಚಿವೆ ಶೋಭಾ ಕರಂದ್ಲಾಜೆಗೆ ಶಾಸಕರ ಬೆದರಿಕೆ
ಗ್ಯಾಸ್ ಪಡೆಯಲು ಬಹಳ ಕಷ್ಟ ಉಂಟಾಗಿದೆ. ತಮ್ಮ ಇಲಾಖೆಯ ಹೊಸ ನಿಯಮದಲ್ಲಿ ಒಂದು ವಿದ್ಯುತ್ತಿನ ಮೀಟರಿಗೆ ಒಂದೇ ಗ್ಯಾಸ್ ಕನೆಕ್ಷನ್ ಎಂದು ಆದೇಶ ನೀಡಿರುವುದರಿಂದ ಮಧ್ಯಮ ವರ್ಗದ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಇದರಿಂದ ತುಂಬಾ ತೊಂದರೆಯಾಗಿದೆ.
ಏಕೆಂದರೆ, ಈ ಹಿಂದೆ ಅವರುಗಳು ಬಾಡಿಗೆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿದಾಗ ಅವರ ಮಾಲೀಕರ ಮನೆಯ ವಿದ್ಯುತ್ ಮೀಟರಿನ ನಂಬರು ಕೊಟ್ಟು ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುತ್ತಾರೆ.
ಇದೀಗ ತಾವು ಹೊಸ ನಿಯಮಗಳನ್ನು ತಂದು ಅದನ್ನು ಅಕ್ರಮವೆಂದು ಪರಿಗಣಿಸುವುದು ಹೇಗೆ? ಅವರು ಮಾಡಿದ ತಪ್ಪಾದರೂ ಏನು? ಎರಡನೆಯದಾಗಿ, ಗ್ಯಾಸ್ ಬಳಕೆದಾರರು ಸರಿಯಾದ ಮಾಹಿತಿಯನ್ನು ನೀಡಿದ್ದರೂ ಕೂಡ ಗಣಕ ಯಂತ್ರದಲ್ಲಿ ಮಾಹಿತಿಗಳು ತಪ್ಪಾಗಿ ಸಂಗ್ರಹವಾಗಿ ಬಳಕೆದಾರರು ಗ್ಯಾಸ್ ಸಿಲಿಂಡರ್ ಪಡೆಯಲು ವೃಥಾ ತೊಂದರೆಗೆ ಒಳಗಾಗಿದ್ದಾರೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವುದೇ ಸರಿಯಾದ ಮಾಹಿತಿ ನೀಡಲು ಪಡಿತರ ಅಂಗಡಿ ಅಥವಾ ಆಹಾರ ಇಲಾಖೆಯಲ್ಲಿ ಸೂಕ್ತವಾದ ವ್ಯವಸ್ಥೆ ಇರುವುದಿಲ್ಲ. ಇಲಾಖೆಯಲ್ಲಿ ಸಿಬ್ಬಂದಿ ಮತ್ತು ಗಣಕ ಯಂತ್ರದ ಕೊರತೆಯಿಂದ ನಾಗರಿಕರು ಪರದಾಡುತ್ತಿದ್ದಾರೆ.
ಹಬ್ಬ ಆಚರಣೆ ಹೇಗೆ?: ಅದೂ ಅಲ್ಲದೆ ಇದನ್ನು ಸರಿಪಡಿಸಲು ಕೇವಲ 15 ದಿನಗಳ ಕಾಲಾವಕಾಶ ನೀಡಿದ್ದಾರೆ. ಇದೇ ತಿಂಗಳು ರಂಜಾನ್ ಉಪವಾಸ, ಗೌರಿ, ಗಣೇಶ, ದಸರಾ, ಮತ್ತು ದೀಪಾವಳಿ ಮುಂತಾದ ಹಬ್ಬಗಳು ಬರುತ್ತಿರುವುದರಿಂದ ಈ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದು ಈ ನಿಯಮದ ಲೋಪ-ದೋಷಗಳನ್ನು ಸರಿಪಡಿಸಿ ಅಕ್ರಮ ಗ್ಯಾಸನ್ನು ತಡೆಗಟ್ಟಲು ಸೂಕ್ತವಾದ ನಿಯಮಾವಳಿಯನ್ನು ರಚಿಸಬೇಕೆಂದು ಕೋರುತ್ತೇವೆ.
ತಕ್ಷಣವೇ ಈ ಗೊಂದಲವನ್ನು ಸರಿಪಡಿಸಲು ಆದೇಶವನ್ನು ರದ್ದುಪಡಿಸಬೇಕು ಅಥವಾ ತಾತ್ಕಾಲಿಕವಾಗಿ ಆದೇಶವನ್ನು ತಡೆಹಿಡಿದು ಈ ಆದೇಶದಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಗೃಹ ಬಳಕೆದಾರರಿಗೆ ಈ ಹಿಂದಿನಂತೆ ಗ್ಯಾಸನ್ನು ವಿತರಿಸಲು ಗ್ಯಾಸ್ ಏಜೆನ್ಸಿಗಳಿಗೆ ಸೂಚಿಸಬೇಕು.
ಇಲ್ಲವಾದಲ್ಲಿ ಇದರ ವಿರುದ್ಧ ಜನಸಾಮಾನ್ಯರ ಪರವಾಗಿ ಹೋರಾಟ ಮಾಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
* ಗೋಪಾಲ ಭಂಡಾರಿ ಶಾಸಕರು, ಕಾರ್ಕಳ ಮತಕ್ಷೇತ್ರ ಹಾಗೂ ಖಾದರ್, ಯು ಟಿ ಖಾದರ್ ಶಾಸಕರು ಮಂಗಳೂರು ಮತ ಕ್ಷೇತ್ರ