ಮುಖ್ಯಮಂತ್ರಿ ಚಂದ್ರುಗೆ ರಾಜ್ಯೋತ್ಸವ ಶುಭಾಶಯ ಇಲ್ಲವು
ನವೆಂಬರ್ ತಿಂಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರ ಮತ್ತು ಬಿ.ಬಿ.ಎಂ.ಪಿ ಹಮ್ಮಿಕೊಳ್ಳುತ್ತದೆ. ಆದರೆ ಇವೆಲ್ಲದರ ನಡುವೆ, ಬೆಂಗಳೂರಲ್ಲಿ ಕನ್ನಡದ ಕಂಪನ್ನು ಕಾಣಿಸಬೇಕೆಂಬ ಪ್ರಯತ್ನಗಳಲ್ಲಿ ಒಂದು ಅಂಶ ಸರ್ಕಾರ ಮತ್ತು ಬಿ.ಬಿ.ಎಂ.ಪಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನದಿಂದ ಜಾರಿ ಹೋಗಿದೆ. ಅದೆಂದರೆ, ಕರ್ನಾಟಕ ಅಂಗಡಿಗಳ ಮತ್ತು ವಾಣಿಜ್ಯ ಕಾರ್ಯ ಸಂಸ್ಥೆಗಳ (ತಿದ್ದುಪಡಿ) ನಿಯಮ ಕಲಂ 26A ಅನುಷ್ಠಾನ.
ಈ ನಿಯಮದ ಪ್ರಕಾರ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ, ಬಸ್ ನಿಲ್ದಾಣ, ಹೋಟೆಲ್, ಮಾಹಿತಿ ತಂತ್ರಜ್ಞಾನ ಕಚೇರಿ, ಸರ್ಕಾರ ಕಚೇರಿ, ಸರ್ಕಾರ ಮತ್ತು ಖಾಸಗಿ ಜಾಹೀರಾತುಗಳಲ್ಲಿ ಕನ್ನಡ ಕಡ್ಡಾಯವಾಗಿ ನಮೂದಿಸತಕ್ಕದ್ದು. ವ್ಯಾಪಾರ ಮಳಿಗೆ, ಕಚೇರಿ ಹಾಗು ಸಂಸ್ಥೆಯ ಸಂಬಂಧಪಟ್ಟ ನಾಮಫಲಕ, ಜಾಹೀರಾತಿನ ಫಲಕಗಳಲ್ಲಿ ಕನ್ನಡ ನುಡಿಗೆ ಮೊದಲ ಆದ್ಯತೆ ನೀಡಿ ಬಳಕೆಯಾಗಬೇಕು. ಈ ನಿಯಮವನ್ನು ಉಲ್ಲಂಘಿಸಿದವರಿಗೆ 10,000 ರೂಪಾಯಿ ದಂಡ ವಿಧಿಸಲಾಗುವುದು.
ಈ ರೀತಿ ನಿಯವಿದ್ದರೂ ಬೆಂಗಳೂರಿನ ಸುಮಾರು ಕಡೆ ನಾಮಫಲಕಗಳಲ್ಲಿ, ಜಾಹೀರಾತುಗಳಲ್ಲಿ ಕನ್ನಡ ಕಾಣೆಯಾಗಿದೆ. ಇನ್ನು ಕೆಲವು ಕಡೆ ನಿಯಮ ಪಾಲಿಸುವ ನೆಪದಲ್ಲಿ ಕನ್ನಡ ನುಡಿಯನ್ನು ನಾಮಫಲಕದ ಮೇಲಿನ ಅಥವಾ ಕೆಳಗಿನ ಭಾಗಗಳಲ್ಲಿ ಸಣ್ಣದಾಗಿ ಮುದ್ರಣ ಮಾಡ್ತಾರೆ. ದುರ್ಬೀನು ಹಾಕಿ ನೋಡಿದರೂ ಕನ್ನಡ ಕಾಣದು. ಯಾರು ಕೂಡ ಓದುವುದಕ್ಕೆ ಆಗುವುದಿಲ್ಲ. ಸುಮಾರು ಕಡೆ ಈ ತರಹ ನಿಯಮ ಉಲ್ಲಂಘನೆಯಾಗಿದೆ. ಈ ನಿಯಮವನ್ನು ಅನುಷ್ಠಾನ ಮಾಡಬೇಕೆಂದು ಒತ್ತಾಯ ಮಾಡಿದ ಕನ್ನಡ ಪರ ಸಂಘಟನೆಯವರಿಗೆ ಸೆರೆಮನೆಯ ಕೊಡುಗೆ ಸಿಕ್ಕಿದೆಯೆ ಹೊರತು ನಿಯಮವನ್ನು ಅನುಷ್ಠಾನಗೊಳ್ಳುವ ಕೆಲಸದ ಬಗ್ಗೆ ಸರ್ಕಾರವಾಗಲಿ, ಬಿ.ಬಿ.ಎಂ.ಪಿಯವರ ಕಡೆಯಿಂದ ಮಾತಿಲ್ಲ.
ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರುಗಳಾದ ಚಂದ್ರಶೇಖರ ಪಾಟೀಲ, ಇದ್ದಿನಬ್ಬ, ಸಿದ್ದಲಿಂಗಯ್ಯ, ಬರಗೂರು ರಾಮಚಂದ್ರಪ್ಪ ಮತ್ತು ಈಗಿನ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಅವರುಗಳೆಲ್ಲ ಈ ನಿಯಮ ಜಾರಿಗೆ ತರುವಲ್ಲಿ ಹೀನಾಯವಾಗಿ ಸೋತಿದ್ದಾರೆ. ಇವರಿಗೆ ಮತ್ತು ಇಂಥ ಕನ್ನಡದ ಕಟ್ಟಾಳುಗಳಿಗೆ ನಾನು ಕನ್ನಡ ರಾಜ್ಯೋತ್ಸವ ಶುಭಾಶಯ ಹೇಳುವುದಕ್ಕೆ ಮನಸ್ಸು ಒಪ್ಪುವುದಿಲ್ಲ. ಜೈ ಕರ್ನಾಟಕ ಮಾತೆ.
* ವಿವೇಕ್ ಶಂಕರ್, ರಾಜಮಹಾಲ್ ವಿಲಾಸ್ ಬಡಾವಣೆ, ಬೆಂಗಳೂರು.
| ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7