90ರ ಕಾಟ : ಉದಾಸೀನ ಬೇಡ
ಮಾನ್ಯರೇ,
ಅದು ಯಾಕೋ ಕೈಗೆ ಬಂದಿದ್ದು, ಬಾಯಿಗೆ ಬರುತ್ತಿಲ್ಲ. ಸಚಿನ್ ಅವರಿಗೆ ಬೇಸರವಾಗಿದೆಯೋ ಇಲ್ಲವೋ ಗೊತ್ತಿಲ್ಲ. ನಮಗಂತೂ ಬಲುಬಲುಬಲು ಬೇಸರವಾಗಿದೆ. ಇದು ಒಂದಲ್ಲ ಎರಡಲ್ಲ ಹತ್ತಾರು ಸಲ ಸೆಂಚುರಿವರೆಗೆ ಬಂದು, 90ದಾಟಿದ ತಕ್ಷಣ ಸಚಿನ್ ಸೋಲುತ್ತಿದ್ದಾರೆ. ಯಾಕೆ ಹೀಗೆ? ನಾವೆಲ್ಲರೂ ಗಂಭೀರವಾಗಿ ಕೂತು ಯೋಚಿಸಲೇ ಬೇಕಾಗಿದೆ.
ಮೊನ್ನೆ(ನ.15) ಗ್ವಾಲಿಯಾರ್ ನಲ್ಲಿ ನಡೆದ ಪಾಕ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಸಚಿನ್ ಚೆನ್ನಾಗಿ ಆಡಿದರು. ಅವರು ಈ ಪಂದ್ಯದಲ್ಲಿ ಸೆಂಚುರಿ ಮಾಡೇ ಮಾಡುತ್ತಾರೆ ಎಂದು ಎಲ್ಲರೂ ನಂಬಿದ್ದರು. ಆದರೆ 97ಕ್ಕೆ ಔಟ್ ಆದರು. ಪಾಕ್ ವಿರುದ್ಧ ಇದು 6ನೇ ಬಾರಿಗೆ ಅವರು 90ರ ನರ್ವಸ್ ಅನುಭವಿಸುತ್ತಿದ್ದಾರೆ.
ಟೀಕೆ ಟಿಪ್ಪಣಿ ಏನೇ ಇರಲಿ, ಸಚಿನ್ ಒಳ್ಳೆ ಆಟಗಾರ. ಅವರು ಟೀಮ್ ಇಂಡಿಯಾದಲ್ಲಿ ಇದ್ದರೇ, ಕ್ರಿಕೆಟ್ ಗೊಂದು ಕಳೆ. ತೆಂಡೂಲ್ಕರ್ ಬ್ಯಾಟಿಂಗ್ ಅಂದ್ರೆ, ಎಲ್ಲರಿಗೂ ಇಷ್ಟ. ಆದರೆ ಅವರು ಪದೇ ಪದೇ 90ರ ಹೊಸ್ತಿಲಲ್ಲಿ ಮುಗ್ಗರಿಸುತ್ತಿದ್ದಾರೆ. ಇದಕ್ಕೆ ಕ್ರಿಕೇಟೇಟರ ಕಾರಣವಿದೆ ಎಂದು ನನಗನಿಸುತ್ತಿದೆ. ರಾಹು ಅಥವಾ ಕೇತು ಅವರ ಹೆಗಲೇರಿರಬೇಕು. ಜ್ಯೋತಿಷಿಗಳು ಸಚಿನ್ ಜಾತಕ ತಿರುವಿ ಹಾಕಿ, ಈ ಬಗ್ಗೆ ಸಲಹೆ ನೀಡಬೇಕಾಗಿದೆ.
ಯಾವುದಕ್ಕೂ ಸಚಿನ್ ಒಂದು ಮಹಾಚಂಡಿಯಾಗವನ್ನು ಮಾಡಿದರೆ ಒಳ್ಳೆಯದು. ಅವರು ಈ ಬಗ್ಗೆ ಸಲಹೆ ಬೇಕಿದ್ದರೇ, ಕರ್ನಾಟಕದತ್ತ ನೋಡಬಹುದು. ಜ್ಯೋತಿಷಿಗಳು ಮತ್ತು ವಾಸ್ತು ತಜ್ಞರ ತವರು ಮನೆಯಾದ ಕರ್ನಾಟಕದಲ್ಲಿ ಈ ಬಗ್ಗೆ ಸಲಹೆಗಳು ಸಿಕ್ಕೇ ಸಿಗುತ್ತವೆ. ದೇವೇಗೌಡರು ಮತ್ತು ಯಡಿಯೂರಪ್ಪ ಪೂಜೆ ಪುನಸ್ಕಾರದ ಮಾಹಿತಿ ನೀಡುತ್ತಾರೆ. ಸಚಿನ್ ಕೊಲ್ಲೂರಿಗೋ, ಕುಕ್ಕೆಗೋ ಹೋಗಿ ಒಂದಷ್ಟು ಪೂಜೆ ಮಾಡಿಸಬೇಕು. ಸರ್ಕಾರ ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಯಾವುದಕ್ಕೂ ಒಂದು ಸಲ ಕರ್ನಾಟಕಕ್ಕೆ ಬರುವಂತೆ, ಬಂದು ಪೂಜೆ ಮಾಡಿಸುವಂತೆ ಯಡಿಯೂರಪ್ಪ ಆಹ್ವಾನ ನೀಡಬೇಕು.
ಕೇಶವಸುತ












Click it and Unblock the Notifications