ಯುವತವಕ!
ಮತ್ತದೊಂದು ದಿನ ದೂರದಿ ಕೂತು ದೇಶಭಕ್ತಿಯ ಕವಿತೆ ಬರೆದುಬಿಡುವನು.... ಯಾರವನು? ಪದ್ಯ ಓದಿ..
- ರಾಬರ್ಟ್ ಉದ್ಯಾವರ, ದುಬೈ
ಒಬ್ಬನದುಉದ್ದತೋಳಿನ ಟೀ-ಶರ್ಟ್ ಮತ್ತದರ
ಮೇಲೊಂದು ಪದರ ಗಿಡ್ಡತೋಳಿನ ಅಂಗಿ
ತಿಳಿದೋ ತಿಳಿಯದೆಯೋ ಬ್ಯಾಟ್ಮ್ಯಾನ್ ಶೂರ
ಒಳಚಡ್ಡಿಯನು ಹೊರಧರಿಸಿರುವಂತೆ-
ಇನ್ನೊಬ್ಬನ ಮೇಲೆ
ಅದೇನು ಮಹಾತ್ಮರ ಪ್ರಭಾವವೋ?
ತಿರುಪತಿ ತಿಮ್ಮಪ್ಪನ ದರುಶನವೀಯದೆ
ವೈರಾಗಿಯಂತೆ ತಲೆಯ ಬೋಳಿಸಿಹನಾದರೂ
ಬಾಚುವ ಬಾಚಣಿಕೆ ಮಾತ್ರ ಜೊತೆಗೊಯ್ಯುವನು ಚಾಚೂ ತಪ್ಪದೆ
ಮತ್ತೊಬ್ಬನದು ಬೇರೆಯೇ ರೂಪು
ಉದ್ದುದ್ದ ಕೂದಲ ಕ್ರಾಪು
ರಾಷ್ಟ್ರಪತಿ ಕಲಾಮರ ಚಾಪು
ಅಷ್ಟಲ್ಲದೆ ಅರ್ಧಸೊಂಟದಿ
ದೊಂಬರಾಟವಾಡುವ ಜೀನ್ಸ್
ಸೊಂಟಪಟ್ಟಿಯ ಹಂಗಿಗೆ ಸಿಲುಕಿ ಜೋತುಬಿದ್ದಂತೆ-
ಮಗದೊಬ್ಬನ ಪರಿ
ಒಂದು ಕಿವಿಗಷ್ಟೆ ಬೆಳ್ಳಿಯುಂಗರ
ಶನಿಕಾಟವ ತಪ್ಪಿಸಲು
ಶಿಖಂಡಿಯಾಗಿ ಅಣಿಯಾದಂತೆ
ತೊಡುವನು ಉಡುಪು ಕಡುಗಪ್ಪು
ಶೋಕಸಭೆಗೆ ಹೊರಟಂತೆ
ಸೋಡಾಗ್ಲಾಸಿನ ಕನ್ನಡಕ
ವಿದ್ವಾಂಸಕ ಜೀನಿಯಸ್ನಂತೆ
ಬಿಲ್ಗೇಟ್ಸ್, ಮೂರ್ತಿಯವರಂತಾಗಬೇಕು
ಮಲ್ಯ ಮಿತ್ತಲ್ ಅಂಬಾನಿಯವರಂತೆ
ರವಿಚಂದ್ರನ್ ಉಪೇಂದ್ರರಂತೆ ಮೆರೆದಾಡಬೇಕು
ಜೋನ್ ಅಬ್ರಹಾಮ್ನಂತೆ ಸೆಲೆಬ್ರೆಟಿಯಾಗಿ
ಬಿಪಾಶಳ ಬಿಸಿಯಪ್ಪುಗೆಯ ಸವಿಯುಣ್ಣಬೇಕೆಂದು
ಹಗಲುಗನಸುಕಾಣುವನು
ರಾಷ್ಟ್ರಾಭಿಮಾನಕ್ಕೆ ಕೊರತೆ ಇರದಿದ್ದರೂ
ರಾಷ್ಟ್ರದ ಭ್ರಷ್ಟಾಚಾರದಿಂದ ಬೇಸತ್ತು
ಅವಕಾಶಸಿಕ್ಕಲ್ಲಿ ತನ್ನವರಿಗೆ, ತನ್ನ ನಾಡಿಗೆ ವಿದಾಯ ಹೇಳಲು ಹೇಸದೆ
ಅಮೆರಿಕಾ ಕೆನಡಾದ ಐಶ್ವರ್ಯಜೀವನ ಬೇಡವೆನ್ನದವನು
ತಾನೊಬ್ಬನಿಲ್ಲಿ ನಿಲ್ಲದಿರೆ ಏನು ವ್ಯತ್ಯಾಸ?
ನೂರೊಕೋಟಿ ಜನಸಾಗರದಲಿ ತಾನೊಂದು ಬರಿಯ ಬಿಂದೆಂದು
ತತ್ವ ಆದರ್ಶಗಳ ಸರಿಸಿ ಬದಿಗಿರಿಸಿ
ಬೀಸಿ ನಡೆದುಬಿಡುವನು
ಮತ್ತದೊಂದು ದಿನ ದೂರದಿ ಕೂತು
ದೇಶಭಕ್ತಿಯ ಕವಿತೆ ಬರೆದುಬಿಡುವನು....












Click it and Unblock the Notifications