ಲಾಸ್ ಏಂಜಲಿಸ್ನಲ್ಲಿ ನೂತನ ಶ್ರೀ ಕೃಷ್ಣ ಬೃಂದಾವನ
ಉಡುಪಿಯ ಶ್ರೀ ಪುತ್ತಿಗೆ ಮಠದ ಅಂಗಸಂಸ್ಥೆಯಾದ ಶ್ರೀ ಕೃಷ್ಣ ಬೃಂದಾವನ ಲಾಸಂಜಲೀಸ್ ನಲ್ಲಿ 2004ರಲ್ಲೇ ವುಡ್ಲ್ಯಾಂಡ್ ಹಿಲ್ಸ್ ನಲ್ಲಿ ಸ್ಥಾಪಿಸಲಾಗಿತ್ತು. ದೈನಂದಿನ ಪೂಜೆ, ಆರಾಧನೆಗಳು, ಹಬ್ಬ ಹರಿದಿನಗಳ ಆಚರಣೆ ಹಾಗೂ ಆಧ್ಯಾತ್ಮಿಕ ವಿಚಾರದಲ್ಲಿ ಸಾವಿರಾರು ಭಕ್ತಾದಿಗಳಿಗೆ ಶ್ರೀ ಕೃಷ್ಣ ಬೃಂದಾವನ ಕೇಂದ್ರಬಿಂದುವಾಗಿತ್ತು. ಪೂಜಾ ಮಂದಿರದ ಮತ್ತು ವಾಹನ ನಿಲುಗಡೆಯ ಸ್ಥಳಾವಭಾವದ ಕಾರಣದಿಂದ ಶ್ರೀ ಮಠದ ಆಡಳಿತವರ್ಗದವರು ನೂತನ ನಿವಾಸದ ಹುಡುಕಾಟದಲ್ಲಿ ತೊಡಗಿದ್ದರು.

ಶ್ರೀ ಹರಿ ವಾಯು ಗುರುಗಳ ಅನುಗ್ರಹದಿಂದ ಶ್ರೀ ಕೃಷ್ಣ ಬೃಂದಾವನಕ್ಕೆ ಥೌಸಂಡ್ ಓಕ್ಸ್ ನ ಬಳಿಯಲ್ಲಿ 5 ಎಕರೆ ವಿಶಾಲವಾದ ಸ್ಥಳ ದೊರಕಿತು. ಜೂನ್ 28, 2015 ಭಾನುವಾರದಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಹಾಗು ಬನ್ನಂಜೆ ಗೋವಿಂದಾಚಾರ್ಯರ ಉಪಸ್ಥಿತಿಯಲ್ಲಿ ನೂತನ ದೇವಸ್ಥಾನದ ಪ್ರತಿಷ್ಠಾಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.
ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ಶ್ರೀ ಮಠದ ವಿವಿಧ ಶಾಖೆಗಳಿಂದ ಅನೇಕ ಹಿರಿಯ ಅರ್ಚಕರು ಬಂದು ನಡೆಸಿಕೊಟ್ಟರು. ಸುಮಾರು 800ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಕ್ಯಾಲಿಫೋರ್ನಿಯ ರಾಜ್ಯದ 39ನೇ ಕಾಂಗ್ರೆಸ್ಸನಲ್ ಜಿಲ್ಲೆಯ, ಅಮೆರಿಕಾದ ಹೌಸ್ ಆಫ್ ರೆಪ್ರೆಸೆಂಟ್ಟಿಟಿವ್ ಸದಸ್ಯರಾದ ಎಡ್ ರಾಯ್ಸ್ ರವರೂ ಉಪಸ್ಥಿತರಿದ್ದರು.

ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರು "ಆಧುನಿಕ ಯುಗದಲ್ಲಿ ಭಗವದ್ಗೀತೆ ಹಾಗೂ ಮಧ್ವ ಶಾಸ್ತ್ರದ ಪ್ರಾಮುಖ್ಯತೆ"ಯ ಬಗ್ಗೆ ಪ್ರವಚನವನ್ನಿತ್ತು ಶುಭ ಹಾರೈಸಿದರು. ಬಳಿಕ ಕರ್ನಾಟಕದ ಸುಪ್ರಸಿದ್ದ ಶಾಸ್ತ್ರೀಯ ಸಂಗೀತಗಾರರಾದ ಡಾ .ಆರ್.ಕೆ. ಪದ್ಮನಾಭನ್ ಹಾಗು ಸಂಗಡಿಗರಿಂದ ಸಂಗೀತ ಕಚೇರಿ ಏರ್ಪಡಿಸಲಾಗಿತ್ತು. ಊರ ಪರಊರ ಭಕ್ತಾದಿಗಳೆಲ್ಲ ಬಂದು ದೇವರ ಅನುಗ್ರಹ ಪ್ರಸಾದ ಸ್ವೀಕರಿಸಿ ಪುನೀತರಾದರು.












Click it and Unblock the Notifications