ನಾರ್ತ್ ಕ್ಯಾರೋಲೈನಾದಲ್ಲಿ ಪುರಂದರ ಆರಾಧನಾ
"ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ" ಹೀಗೆಂದು ವರುಷಕ್ಕೊಮ್ಮೆ ಸಂಗೀತಪ್ರೇಮಿಗಳೆಲ್ಲರೂ ಕರ್ನಾಟಕ ಸಂಗೀತ ಪಿತಾಮಹನಿಗೆ ಭಕ್ತಿಯ ನಮನ ಸಲ್ಲಿಸುವ ಸುದಿನ ಇತ್ತೀಚೆಗೆ ಶಾರ್ಲೆಟ್ ನಗರದಲ್ಲಿಯೂ ಜರುಗಿತು. ಶಾರ್ಲೆಟ್ ದೇವರನಾಮ ಗ್ರೂಪ್ ಆಯೋಜಿಸಿದ್ದ ಪುರಂದರ ಆರಾಧನೋತ್ಸವ ಇಲ್ಲಿನ ಹಿಂದು ಸೆಂಟರಿನಲ್ಲಿ ಫೆಬ್ರವರಿ 10 ರಂದು ಮುಕ್ತಾಯವಾಯಿತು.
ಗಣೇಶ-ಗುರು ಪೂಜೆಯ ನಂತರ ಪ್ರಾರಂಭವಾದ ಸಮೂಹಗಾಯನ, ಪಿಳ್ಳರಿ ಗೀತೆಗಳೊಂದಿಗೆ ಪ್ರಾರಂಭಿಸಿ, ಕ್ರಮವಾಗಿ ಶ್ರೀಪುರಂದರದಾಸರು ರಚಿಸಿದ ಆಯ್ದ ನವರತ್ನ ಕೀರ್ತನೆಗಳೊಂದಿಗೆ ಹಾಡಲಾಯಿತು. ಸಿದ್ಧಿ ವಿನಾಯಕನಿಗೆ ಶರಣಾಗಿ, ರಾಮಮಂತ್ರವ ಜಪಿಸುತ್ತಾ, ಆಚಾರವಿಲ್ಲದ ನಾಲಿಗೆಗೆ ತಿಳಿಹೇಳುತ್ತಾ, ಸಕಲಗ್ರಹಬಲನನ್ನು ಸ್ತುತಿಸುತ್ತಾ, ಪಿಳ್ಳಂಗೋವಿಯ ಚೆಲ್ವ ಕೃಷ್ಣನನ್ನು ನೋಡುವ ಪ್ರಯತ್ನ ಸುಶ್ರಾವ್ಯವಾಗಿ ಮೂಡಿಬಂದುದು ಸಾರ್ಥಕ್ಯ ಭಾವ ಮೂಡಿಸಿತ್ತು. ಇಷ್ಟೇ ಅಲ್ಲದೆ ಕನ್ನಡದ ಕಂದಮ್ಮಗಳಿಗೂ, ಬಾಲಪ್ರತಿಭೆಗಳಿಗೂ ಇದೊಂದು ಸುವರ್ಣಾವಕಾಶವನ್ನು ಕಲ್ಪಿಸಿತ್ತು. ಮಕ್ಕಳಿಂದ ದಾಸರ ಕೃತಿಗಳ ನಿರೂಪಣೆ, 'ಬಾರೋ ಕೃಷ್ಣಯ್ಯ' - ನೃತ್ಯ, 'ಬಂದನೇನೇ ರಂಗ' ಕೃತಿಗೆ ಪುಟಾಣಿಗಳಿಂದ ನೃತ್ಯ ನಯನಮನೋಹರವಾಗಿತ್ತು.
ಕಾರ್ಯಕ್ರಮದ ಹಿಂದಿನ ಸ್ಫೂರ್ತಿ ಸ್ವತಃ ಪಿಟೀಲು ವಿದ್ವಾಂಸರಾದ ಶ್ರೀಯುತ ಸದಾಶಿವ ಭಟ್ಟರು. ಇವರ ಶಿಷ್ಯವರ್ಗ, ಸಂಗೀತೋಪಾಸಕರು, ಸಂಗೀತಪ್ರೇಮಿಗಳು, ಮಕ್ಕಳಾದಿಯಾಗಿ ವಿದ್ವಾಂಸರೂ ಇಲ್ಲಿ ಭಾಗವಹಿಸಿದ್ದು ಈ ಕಾರ್ಯಕ್ರಮದ ವಿಶೇಷ.
ನಾರ್ತ್ ಕ್ಯಾರೋಲೈನಾ-ಶಾರ್ಲೆಟ್ ಮೆಟ್ರೋ ಏರಿಯಾದ ಕನ್ನಡಪ್ರೇಮಿಗಳು, ಸಂಗೀತಾಸಕ್ತರು, ಶ್ರೀಪುರಂದರದಾಸರ ಅಭಿಮಾನಿಗಳು ಈಗ್ಗೆ ಕೆಲವು ವರ್ಷಗಳ ಹಿಂದೆ ಒಂದುಗೂಡಿದಾಗ ಉದಯಿಸಿದ ಸಂಘ - ಶಾರ್ಲೆಟ್ ದೇವರನಾಮ ಗ್ರೂಪ್. ಈ ಸಂಸ್ಥೆ ಪುರಂದರದಾಸರ ಆರಾಧನೆಯನ್ನು ಸತತ ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಸಂಪರ್ಕಿಸಿ:
[email protected] ಅಥವಾ [email protected]












Click it and Unblock the Notifications