ಮಲೇಶಿಯಾ ಕನ್ನಡ ವೃಂದದ ಚಿಲಿಪಿಲಿ
ಮಲೇಶಿಯಾ ಕನ್ನಡ ಸಂಘ (ಮಕಸ) 2002ರಲ್ಲಿ ಪ್ರಾರಂಭವಾಯಿತು. ಬೆರಳೆಣಿಕೆಯಷ್ಟು ಕನ್ನಡ ಪ್ರೇಮಿಗಳಿಂದ ಜನ್ಮ ತಳೆದ ಕನ್ನಡ ಸಂಘ ಇಂದು ಸುಮಾರು 300 ಕುಟುಂಬಗಳ ಕನ್ನಡ ಹೆಮ್ಮೆಗೆ ಪ್ರತೀಕವಾಗಿ ಬೆಳೆದಿದೆ. ನಾನಾ ಜನಾಂಗ, ನಾನಾ ದೇಶಗಳ ನಾಗರಿಕರು ತುಂಬಿರುವ ಈಶಾನ್ಯ ಭಾಗದಲ್ಲಿ ಕನ್ನಡ ಜನರು ತಮ್ಮ ಕರ್ನಾಟಕ ಬಾಂಧವರೊಂದಿಗೆ ಸಾಮೀಪ್ಯ ಸ್ನೇಹ ಸಂಪಾದನೆಗೆ ಅನುವುಮಾಡಿಕೊಟ್ಟಂಥ ಕನ್ನಡ ಕುಟೀರ ಮಕಸ.
ಹ.ರ. ಚಂದ್ರಮೌಳಿ, ಕುಚಿಂಗ್, ಮಲೇಶಿಯ
ಹೆಚ್ಚುಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕೆಂಬ ಹಂಬಲ ನಮಗಿದ್ದರೂ ಕೇವಲ ಕಾರ್ಯಕ್ರಮದ ಅಂಕೆಸಂಖ್ಯೆಗಳ ಆಧಾರದ ಮೇಲೆ ನಿಂತ ಕನ್ನಡ ಸಂಘವಲ್ಲ ನಮ್ಮದು. ನಾಲಕ್ಕು ಕುಟುಂಬದವರೊಂದಿಗೆ ಇನ್ನೊಂದು ಹೊಸಕುಟುಂಬ ಸೇರಿ ಸಹಭೋಜನ ಮಾಡಿದರೆ ಅದೆ ಯುಗಾದಿ. ನಮ್ಮ ಮಕ್ಕಳು ಕಲೆತು ಕನ್ನಡ ಹಾಡು ಹಾಡಿದ ದಿನಗಳೆಲ್ಲ ಕನ್ನಡ ರಾಜ್ಯೋತ್ಸವ.
ಸಂಘದ ವತಿಯಿಂದ ಕರ್ನಾಟಕದ ಕಲಾವಿದರಾದ ಮಿಮಿಕ್ರಿ ದಯಾನಂದ ಹಾಗು ರಾಜು ಅನಂತಸ್ವಾಮಿ ಅವರಿಂದ ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಅದು ನಡೆದದ್ದು 2002ರಲ್ಲಿ. ಸಿಂಗಪುರದ "ಸಿಂಗಾರ" ಹಾಗು ಆಸ್ಟ್ರೇಲಿಯ ಕನ್ನಡ ಸಂಘದ ಸಹಯೋಗದಿಂದ ನಡೆದಿತ್ತು ಆ ಕಾರ್ಯಕ್ರಮ. ಇದೇ ಸೆಪ್ಟೆಂಬರ್ 20 ರಂದು ಮಲೇಶಿಯಾದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಒಂದು ಕಡೆ ಸೇರಿ ಮತ್ತೆ ರೂಪಿಸಿದ ಕಾರ್ಯಕ್ರಮ "ನಮ್ಮೂರು".
ಕೌಲಾಲಂಪುರ ನಗರದ ಮಧ್ಯದಲ್ಲಿ ಇರುವ ದಿವಾನ್ ದತೋ ಶ್ರೀ ಕೆ.ಆರ್ ಸೋಮನವರ ವಿಶಾಲವಾದ ಸಭಾಂಗಣದಲ್ಲಿ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳಿಗೆ ಸ್ಥಳದಲ್ಲೇ ಚಿತ್ರಬಿಡಿಸುವ ಸ್ಪರ್ಧೆಯಿಂದ ಮೊದಲ್ಗೊಂಡು ಸಮೂಹ ಗಾಯನ, ಮಕ್ಕಳಿಂದ ಛದ್ಮವೇಶ, ಭರತ ನಾಟ್ಯ, ಹಾಗು ನಮ್ಮ ಕೆಲವು ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಒಳಗೊಂಡಿದ್ದವು.
ಮಕ್ಕಳ ಛದ್ಮವೇಶ ದಲ್ಲಿ ಮೈಸೂರು ಮಹಾರಾಜರ ಜೋಡಿ, ತುಳುನಾಡ ಮೀನುಗಾರರ ಜೋಡಿ, ಬಿಜಾಪುರದ ಖಾರ ಮೆಣಸಿನಕಾಯಿ ಜೋಡಿ ಹಾಗು ಕೊಡಗಿನ ಬೆಡಗಿಯ ಜೋಡಿಯು ನೋಡುಗರ ಮನಸೂರೆಗೊಂಡವು. ಕರ್ನಾಟಕ ಶಾಸ್ತ್ರಿಯ ಸಂಗೀತದಲ್ಲಿ ಅರಳುತ್ತಿರುವ ಪ್ರತಿಭೆ ಶೃಂಗೇರಿಯವರಾದ ಸಂಪಗೋಡು ವಿಶ್ವನಾಥ್ ರವರ ಕಾರ್ಯಕ್ರಮ ಅದ್ಭುತವಾಗಿತ್ತು. ನಮ್ಮ ಕೆಲವು ಕನ್ನಡ ಕುಟುಂಬದ ಸದಸ್ಯರುಗಳಿಂದ ನಡೆಸಿಕೊಟ್ಟ ಅದ್ಬುತವಾದ ಭರತ ನಾಟ್ಯ ಕೂಡ ಮನಮುಟ್ಟುವಂತಿತ್ತು.
"ಘೀಯ ಘೀಯ ಗಾಗಿಳಿ ಘೀಯ ನಾವು ಬಂದೇವ ನಾವು ಬಂದೇವ, ನಾವು ಬಂದೇವ ಶ್ರೀಶೈಲ ನೋಡಲಕ್ಕ" ಈ ಹಾಡನ್ನು ಬಹುತೇಕ ಕನ್ನಡಿಗರು ಕೇಳದೆ ಇರಲಾರರು. (ಕಲ್ಯಾಣ್ ಕುಮಾರ್ ಅಭಿನಯದ 'ಪಾಪಪುಣ್ಯ'). ನಮ್ಮ ಮಕಸ ಕನ್ನಡ ಸದಸ್ಯರಿಂದ ಕೊನೆಯ ಕಾರ್ಯಕ್ರಮವಾಗಿ ಘೀಯ ಘೀಯ ಮೂಡಿಬಂತು. ಕಲಾವಿದರು ವೇಷಧಾರಿಗಳಾಗಿ ಆವೇಶದಿಂದ ಹಾಡಿದ್ದಲ್ಲದೆ ಒನ್ಸ್ ಮೋರ್ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು.ಕೊನೆಯದಾಗಿ ಕವಿ ನಿಸಾರರ ನಿತ್ಯೋತ್ಸವದ ವಂದನಾರ್ಪಣೆಯೊಂದಿಗೆ ನಾಂದಿ ಹಾಡಿ ಎಲ್ಲರು ಸುಗ್ರಾಸ ಭೋಜನ ಸವಿಯಲು ಹೊರಟೆವು.
ಕೊನೆಯದಾಗಿ ದಟ್ಸ್ ಕನ್ನಡ ಓದುಗರಲ್ಲಿ ನಾನು ಒಂದು ವಿಚಾರವನ್ನು ಹಂಚಿಕೊಳ್ಳಲು ಬಯಸುತ್ತೇನೆ .ಈ ಕಾರ್ಯಕ್ರಮದ ಆಹ್ವಾನಿತರಲ್ಲಿ ಕೆಲವು ಸ್ಥಳಿಯ ಮಲ್ಯೇಶಿಯದ ಕುಟುಂಬದವರು ಇದ್ದರು. ಮೂಲತಃ ಇವರ ಪೂರ್ವಿಕರು ಕರ್ನಾಟಕದಿಂದ ಮಲೇಷಿಯಾಗೆ ವಲಸೆ ಬಂದಂತಹ ಕನ್ನಡ ಮಾತೃಭಾಷೆಯ ದೇವಾಂಗ ಜನಾಂಗದವರು. ಆದರೆ ಇವರ್ಯಾರಿಗೂ ಕನ್ನಡದ ಭಾಷೆಯ ಬಳಕೆ ಅಷ್ಟಾಗಿ ಇಲ್ಲ. ಇಲ್ಲಿನ ಭಾರತೀಯ ಮೂಲದವರಲ್ಲಿ ತಮಿಳು ಭಾಷೆಯ ಪ್ರಭಾವ ಹೆಚ್ಚಾಗಿರುವುದರಿಂದ ಅವರೆಲ್ಲ ತಮಿಳನ್ನೇ ಬಳಸುತ್ತಿದ್ದಾರೆ.
ಮಕಸ ದ ಮುಂದಿನ ಯೋಜನೆಯೇನೆಂದರೆ ಕನ್ನಡ ತರಗತಿಗಳನ್ನು ಶುರು ಮಾಡಿ ಈ ದೇಶದಲ್ಲಿ ಚದುರಿಹೋಗಿರುವ ಮೂಲ ಕನ್ನಡಿಗರಿಗೆ ಹಾಗು ಹಾಲಿ ಕನ್ನಡ ಸದಸ್ಯರ ಕುಟುಂಬದ ಮಕ್ಕಳಿಗೆ ಕನ್ನಡ ಭಾಷೆಯನ್ನು ಮತ್ತೆ ಕಲಿಸುವುದು. ಭಾಷೆಯ ಸೊಗಡನ್ನು, ನಮ್ಮ ಸಂಸ್ಕೃತಿಯ ಪರಿಮಳವನ್ನು ಮಲೇಶಿಯಾದಲ್ಲಿ ಪಸರಿಸುವುದು.












Click it and Unblock the Notifications