ಸಾಕ್ರಮೆಂಟೋದಲ್ಲಿ ಮೊಳಗಿದ ಸುವರ್ಣ ಕನ್ನಡ ಕಹಳೆ!
ಉತ್ತರ ಕ್ಯಾಲಿಫೋರ್ನಿಯದ ಸಾಕ್ರಮೆಂಟೋದಲ್ಲಿ ಕನ್ನಡದ ಪರಿಮಳವನ್ನು ಹರಡುತ್ತಿರುವ ಸಾಕ್ರಮೆಂಟೋ ಕನ್ನಡ ಸಂಘದ ವತಿಯಿಂದ ಸಂಘದ 3ನೇ ವಾರ್ಷಿಕೋತ್ಸವ ಹಾಗು ಸುವರ್ಣ ಕರ್ನಾಟಕ ರಾಜ್ಯೋತ್ಸವವನ್ನು ಪ್ರೀತಿ-ಯಿಂದ, ಹೆಮ್ಮೆಯಿಂದ ಆಚರಿಸಲಾಯಿತು.
- ವೇಣುಗೋಪಾಲ್ ಮಲ್ಲೇಸರ, ರೋಸ್ ವಿಲ್, ಕ್ಯಾಲಿಫೋರ್ನಿಯಾ
ಸಾಕ್ರಮೆಂಟೋದ ರೋಸ್ ಮಾಂಟ್ ಹೈಸ್ಕೂಲ್ ರಂಗಮಂದಿರದಲ್ಲಿ ಅಂದು(ಡಿ.2) ಸಂಜೆ 5 ಘಂಟೆಯಿಂದ ರಾತ್ರಿ 10 ಘಂಟೆಯವರೆಗೆ ಜರುಗಿದ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚಿನ ಸ್ಥಳೀಯ ಕನ್ನಡಿಗರು ಪಾಲ್ಗೊಳ್ಳುವ ಮೂಲಕ, ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ಕನ್ನಡ ರಾಜೇಶ್ವರಿಗೆ ದೀಪ ಬೆಳಗಿಸಿ, ಪ್ರಾರ್ಥನೆಯಾಂದಿಗೆ ಆರಂಭಿಸಿದ ಕಾರ್ಯಕ್ರಮಕ್ಕೆ, ಸಂಘದ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ಕರ್ನಾಟಕದ ಇತಿಹಾಸವನ್ನು ನವೀನ ರೀತಿಯ ಫ್ಯಾಶನ್ ಶೋ ಮೂಲಕ ಪ್ರಸ್ತುತ ಪಡಿಸಿದ ಮಕ್ಕಳು, ನಂತರ ‘ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಎನ್ನುವ ರೂಪಕದ ಮೂಲಕ ಬೆಂಗಳೂರಿನ ವಿವಿಧ ಬಡಾವಣೆಗಳನ್ನು ಪರಿಚಯಿಸಿದರು.
ಗಾಂಧಿಬಜಾರ್/ಬಸವನಗುಡಿ, ಚಿಕ್ಕಪೇಟೆ, ಕೆ. ಆರ್. ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ ಹಾಗು ಬ್ರಿಗೇಡ್ ರೋಡ್ ಜನ-ಜೀವ-ನ-ದ ಆಚಾರ ವಿಚಾರ ಹಾಗು ನಡೆ ನುಡಿಯನ್ನು ಪ್ರತಿಬಿಂಬಿಸುವ ವೇಷಭೂಷಣಗಳನ್ನು ಧರಿಸಿ, ಪ್ರೇಕ್ಷಕರನ್ನು ‘ಉದ್ಯಾನವನ ನಗರ’ ಕ್ಕೆ ಕೊಂಡೊಯ್ದರು. ವಿಧವಿಧವಾದ ಹಾಡು ಹಾಗು ನೃತ್ಯ ಕಾರ್ಯಕ್ರಮಗಳಿಂದ ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನೂ, ಕನ್ನಡಾಭಿಮಾನವನ್ನೂ ಪ್ರದರ್ಶಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು.
‘ಬೇ ಏರಿಯ ಕನ್ನಡ ಮಿತ್ರ’ರು ಕನ್ನಡ ರಸಮಂಜರಿ ಮೂಲಕ ಡಾ।। ರಾಜ್ ರನ್ನು ನೆನಪಿಸಿದರೆ, ಅರ-ಳು-ವ ಪ್ರತಿಭೆಗಳಾದ ತಾರಿಣಿ ಮತ್ತು ಸುಮುಖ ತಮ್ಮ ಗಾಯನದಿಂದ ಪ್ರೇಕ್ಷಕರನ್ನು ಮೂಕವಿಸ್ಮಿತಗೊಳಿಸಿದರು. ಅಜಯ್ ಚಿತ್ರದ ‘ರಾಮ ಅಂತ ಕೃಷ್ಣ ಅಂತ’ ಮತ್ತು ‘ಏನ್ ಚೆಂದ’ ಹಾಡಿಗೆ ಮಕ್ಕಳು, ಜೋಗಿ ಚಿತ್ರದ ‘ಚಿಕು ಬುಕು ರೈಲು’ ಹಾಡಿಗೆ ಮಹಿಳೆಯರು ಹಾಗು ‘ಏಳುಮಲೆ ಮೆಲೇರಿ ಮಹದೇವ’ ಹಾಡಿಗೆ ಪುರುಷರು ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.
‘ಇಳಿದು ಬಾ ತಾಯೇ ಇಳಿದು ಬಾ’ ಹಾಡನ್ನು ವಿನೂತನ ಶೈಲಿಯಲ್ಲಿ ಮಹಿಳೆಯರು ಪ್ರಸ್ತುತ ಪಡಿಸಿದರು.
ಬೆಂಗಳೂರಿನ ಮೂವರು ಕನ್ನಡ ಸ್ನೇಹಿತರ ಅಮೆರಿಕ ಅನುಭವದ ರೂಪಕ ಇಲ್ಲಿನ ಇಂದಿನ ಸ್ಥಿತಿಗತಿಗಳನ್ನು ಪ್ರತಿಬಿಂಬಿಸಿದರೆ, ಹೆಚ್. ಎನ್. ನರಸಿಂಹಮೂರ್ತಿಯವರ ‘ಕಿವುಡು ಸಾರ್ ಕಿವುಡು’ ನಗೆನಾಟಕ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸಿತು.
ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಸಮಸ್ತ ಸಾಕ್ರಮೆಂಟೋ ಕನ್ನಡಿಗರಿಗೆ, ಕನ್ನಡ ಸಂಘ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದೂ ಕೂಡ ಇನ್ನೂ ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ವಿನಂತಿಸಿದೆ.












Click it and Unblock the Notifications