ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಕೇರಿ’ಯಲ್ಲಿ ‘ಸಂಪಿಗೆ’ ದಶಮಾನೋತ್ಸವದ ಸೊಬಗು!

By Staff
|
Google Oneindia Kannada News


ತುಂಬಾ ಉದ್ದುದ್ದ ಬರೆದು ಬಿಟ್ಟೆ, ಒಬ್ಬ ಹುಡುಗನ ಬಗ್ಗೆ ಅನ್ಕೊಂಡ್ರೇನೋ. ಏನ್ಮಾಡ್ಲೀ? ನನಗಂತೂ ಹಾಗನ್ಸೊಲ್ಲ. ಅಮ್ಜದ್‌ ಅಲಿ ಖಾನ್‌, ಭೀಮಸೇನ್‌ ಜೋಷಿ, ಬಾಲಮುರಳಿ ಕೃಷ್ಣ, ಅವರುಗಳಂತ ಮಹಾನ್‌ ಕಲಾವಿದರ ಸಂಗೀತ ಕಛೇರಿಯಲ್ಲಿ ಕುಳಿತು, ಅವರುಗಳ ಸಂಗೀತಕ್ಕೆ ಮೈಮರೆತಿದ್ದ ನನಗೆ, ಲಾಲ್ಗುಡಿ ಜಯರಾಮನ್‌ ಸಂಗೀತವನ್ನು ಪ್ರತ್ಯಕ್ಷ ಅನುಭವಿಸಿದ್ದ ನನ್ನ ಅಲ್ಪ ಜ್ಞಾನಕ್ಕೆನ್ನಿ ಬೇಕಾದರೆ, ಹದಿನಾರರ ಪೋರನ ಸಂಗೀತವೂ ತಲೆತೂಗಿಸಿದರೆ, ಹೆಮ್ಮೆಯಿಂದ ನಿಮ್ಮೊಡನೆ ಹಂಚಿಕೊಳ್ಳದಿರುವುದು ಹೇಗೆ? ಮುಂದೆ ಹೇಳಹೊರಟಿರುವ ವಿಷಯವೂ ಅಷ್ಟೇ ಬಾಲಿಶವಿದ್ದೀತು ನೋಡಿ. ನಮ್ಮ ಕೇರಿಗೆ ನಾಕೂರಿನಿಂದ ಬಂದರು ಎಂದೆನೆಲ್ಲಾ, ನಾಲ್ಕು ಖಂಡಗಳಾಚೆ ತವರಿನಿಂದಲೂ ತಮ್ಮ ಸಂದೇಶ ಕಳಿಸಿ ಚಿತ್ತೈಸಿದ ಚಿತ್ತಾಲರ ಬಗ್ಗೆ ಕೊಚ್ಚಿ ಕೊಳ್ಳಲೇ ಇಲ್ಲ ನೋಡೀ. ಚಿತ್ತಾಲರ ಸಂದೇಶ ಗಿಟ್ಟಿಸಿಕೊಂಡೆವೆಂದು ನಿಮಗೆ ಹೊಟ್ಟೆ ಕಿಚ್ಚಾದಾರೆ (:-) ನಮಗೆ ಸಂತೋಷ.

ನೆನೆದೇವು ನಾವು...

ಸಂಪಿಗೆಗೆ ಹತ್ತು ತುಂಬಿದ ಸಂದರ್ಭದಲ್ಲಿ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದ ಕೆಲಸ ಮಾಡುತ್ತಾ ಬಂದ ‘ಭೂಮಿಕಾ’ ಸಂಸ್ಥೆಯ ಸಾಧನೆಗಳನ್ನು ಗುರುತಿಸಿ ಗೌರವಿಸಲಾಯಿತು. ಕನ್ನಡ ಸಂಘಗಳ ಮೂಲ ಉದ್ದೇಶ ಸಾಮಾಜಿಕ ನೆಲೆಗಟ್ಟಿನಲ್ಲಿದ್ದರೆ, ಭೂಮಿಕಾ, ಸಾಹಿತ್ಯ ರಂಗ, ಸಾಹಿತ್ಯಗೋಷ್ಠಿ ಗಳಂತಹ ಸಂಸ್ಥೆಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಯನ್ನೆ ಪ್ರಧಾನ ಉದ್ದೇಶವಾಗಿಸಿಕೊಂಡು ಕೆಲಸ ಮಾಡುತ್ತಾ ಬಂದಿವೆ.

ಅಮೇರಿಕನ್ನಡ’, ‘ಬೆಳ್ಳಿ ಬುಗ್ಗೆ’ ಯಂತಹ ಪತ್ರಿಕೆಗಳನ್ನು ಪ್ರಕಟಿಸಿ ಕನ್ನಡವನ್ನು ಬೆಳೆಸುವುದು ಒಂದು ರೀತಿಯಾಗಿದ್ದರೆ, ನಾಲ್ಕು ಜನ ಒಂದೆಡೆ ಸೇರಿ, ಕನ್ನಡದ ಬಗ್ಗೆ ಮಾತು ಕಥೆಗಳನ್ನಾಡಿ, ಚರ್ಚಿಸುವುದಕ್ಕೆ ಅನುವಾಗುವಂತಹ ವಾತಾವರಣವನ್ನು ಶಿಸ್ತಿನಿಂದ ತಿಂಗಳಿಗೊಮ್ಮೆ ನೀಡುತ್ತಾ ಬಂದ ಹೆಮ್ಮೆ ‘ಭೂಮಿಕಾ’ ಸಂಸ್ಥೆಯದ್ದು. ಈ ದಿಕ್ಕಿನಲ್ಲಿ ‘ಭೂಮಿಕಾ’ ಉತ್ತರ ಅಮೆರಿಕಾದ ಮೊದಲ ಪ್ರೌಢ ಪ್ರಯತ್ನ. ಅದಕ್ಕೆ ಸಾಕ್ಷಿಯಾಗಿ ಹತ್ತು ವರುಷಕ್ಕೂ ಮೀರಿದ ಸಾಧನೆಗಳ ಪಟ್ಟಿ.

ಭೂಮಿಕಾದ ಅಂಗಳವನ್ನು ಹೊಕ್ಕು ಅದರ ಆಗುಹೋಗುಗಳಲ್ಲಿ ಭಾಗವಹಿಸಿದವರ ಪಟ್ಟಿ ಬಲು ದೊಡ್ಡದು. ಅದರಲ್ಲಿ, ಅನಂತಮೂರ್ತಿ, ಕಂಬಾರ, ಬಿ. ವಿ. ಕಾರಂತರಂತವರು ಸೇರಿದ್ದಾರೆ. ಮನಸ್ಸು ಬಂದಾಗೊಮ್ಮೆ ಬರೆದು ಸುಮ್ಮನಾಗುವ ನನ್ನಂಥವರನ್ನೆಲ್ಲಾ ಒಂದೆಡೆ ಸೇರಿಸಿ ಕಲೆಹಾಕುವ ಕೆಲಸ ಸುಲಭದ್ದಲ್ಲ. ಅದರಲ್ಲೂ ಶಿಸ್ತಿನಿಂದ ತಿಂಗಳಿಗೊಮ್ಮೆ ನಡೆಸಿಕೊಂಡು ಬಂದಿರುವ ಹೆಮ್ಮೆಯ ಸಂಸ್ಥೆಯ ಪ್ರತಿನಿಧಿಗಳಾಗಿ, ವಿಜಯ ಕುಲಕರ್ಣಿ ಮತ್ತು ಶಾಂತಲಾ ದಾಮ್ಲೆ ಹಾಜರಿದ್ದು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

‘‘ವೀರ ಬಭ್ರುವಾಹನ’’ ಪ್ರಸಂಗದ ಮೂಲಕ ಯಕ್ಷಗಾನದ ಯಕ್ಷಲೋಕವನ್ನು ನಮ್ಮ ಮುಂದಿಟ್ಟ ಕಲಾವಿದರ ಉದಾತ್ತ ಉದ್ದೇಶ, ತಾಯ್ನಾಡಿನ ಕಲಾವಿದರ ಏಳಿಗೆಗಾಗಿ ಹಣ ಸಂಗ್ರಹಣೆ. ಅಂದಿನ ಕಾರ್ಯಕ್ರಮಕ್ಕೆ ಮುಕುಟಪ್ರಾಯವಾಗಿ ಅಮೆರಿಕದ ನಾಲ್ಕು ಮೂಲೆಗಳಿಂದ ಬಂದು ‘‘ವೀರ ಬಭ್ರುವಾಹನ’’ ಪ್ರಸಂಗದ ಮೂಲಕ, ಕಲಾವಿದರ ಯಕ್ಷಲೋಕಕ್ಕೆ ನಮ್ಮನ್ನೊಯ್ದವರುಗಳು, ವಾಸು ಐತಾಳರ ನೇತೃತ್ವದಲ್ಲಿ ಸೇರಿದ್ದ: ಡಾ. ರಾಜೇಂದ್ರ ಕೆದ್ಲಾಯ (ಶಿಕಾಗೊ), ಡಾ. ರಮೇಶ್‌ ಕೇಕುಡ (ಮ್ಯಾಡಿಸನ್‌), ಶ್ರೀಮತಿ ಶಾಂತಿ ತಂತ್ರಿ (ವಾಷಿಂಗ್ಟನ್‌ ಡಿ ಸಿ), ಸುರೇಖ (ಅಗಸ್ಟಾ), ಮತ್ತು ಭಾರತಿ ಸುದರ್ಶನ್‌ (ವಿನ್ಸ್ಟನ್‌ ಸೇಲಮ್‌). ಕಣ್ಸೆಳೆಯುವ ವೇಶಭೂಷಣ, ಭಾವಾವೇಶಗಳಿಗೆ ಸರಿಹೊಂದುವ ಹಿಮ್ಮೇಳ, ಚಮತ್ಕಾರಿಕೆಯ ಮಾತುಗಾರಿಕೆಗಳು ಯಕ್ಷಗಾನದ ಛಾಪುಗಳೆನ್ನಬಹುದು. ಅವೆಲ್ಲವುಗವುಗಳನ್ನು ಸಮರ್ಪಕವಾಗಿ ನೆರೆದವಿರಿಗೆ ಉಣಿಸಿದ ಸಾಧನೆ ಐತಾಳರ ತಂಡದ್ದು.

ಬಭ್ರುವಾಹನನಾಗಿ ಕೆದ್ಲಾಯ, ಚಿತ್ರಾಂಗದೆಯಾಗಿ ಶಾಂತಿ ತಂತ್ರಿ ಮತ್ತು ಅರ್ಜುನನಾಗಿ ಕೇಕುಡ ಅವರುಗಳು, ನೆರೆದವರ ಮನದಲ್ಲಿ ಅಚ್ಚಾದರು. ಕರಾವಳಿಯಲ್ಲಿ ಜನಪ್ರಿಯವಾಗಿರುವ ಈ ಜಾನಪದ ಕಲೆಗೆ ಹೊರಗೆ ಸಿಗುವ ಮನ್ನಣೆ ಸಾಲದೆಂದೇ ಹೇಳಬೇಕು. ಅಂದು ಅಭಿಮಾನಗಳ ಮನ ಸೂರೆಗೊಂಡು, ಅವರುಗಳು ಕೊಟ್ಟ ಕಿರುಕಾಣಿಕೆಯನ್ನು ಕರ್ನಾಟಕದ ಕಲಾವಿದರುಗಳಿಗೆ ಅರ್ಪಿಸಿದ ರೀತಿ ಸ್ತುತ್ಯಾರ್ಹ.

ರುಚಿಕರ ಊಟಮಾಡುತ್ತ ಪ್ರಾಯೋಜಕರಿಗೆ (Saffron Restaurant) ಧನ್ಯವಾದಗಳನ್ನರ್ಪಿಸುತ್ತ ಆರತಿ ಮೂರ್ತಿ ಮತ್ತು ಮಧು ನಂದಗಿರಿಯವರ ‘ಆರ್ಕೆಸ್ಟ್ರಾ’ಗೆ ಕಿವಿಗೊಡ್ಡಿದ ಕನ್ನಡಿಗರಿಗೆ ಅಮೆರಿಕದ ಮೂಲೆಯೊಂದರಲ್ಲಿ ಕರ್ನಾಟಕ ಮತ್ತು ಕನ್ನಡದ ಸಂಸ್ಕೃತಿಗಳು ಮೈದೆಳೆದ ರೀತಿ ಹೆಮ್ಮೆ ಮತ್ತು ಅಭಿಮಾನ ಮೂಡಿಸಿದ್ದುವು. ಅದರಲ್ಲೂ ಎಲ್ಲೆಡೆಗಳಿಂದ ಬಂದು ಪ್ರೋತ್ಸಾಹಿಸಿದ ಅಮೇರಿಕನ್ನಡಿಗರೆಲ್ಲರಿಗೆ ಮತ್ತೊಮ್ಮೆ ನಮ್ಮ ಹೃತ್ಪೂರ್ವಕ ನಮನಗಳು.


ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X