ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರೆಗಳ ಲೆಕ್ಕ ಪೂರೈಸಿದ ‘ಧ್ವನಿ’ ಶ್ರೇಷ್ಠರು!

By Staff
|
Google Oneindia Kannada News

ಯು.ಎ.ಇ. ಕನ್ನಡಿಗರ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿ ಆಯೋಜಿಸಿಲಾದ ಅಂತರರಾಷ್ಟ್ರೀಯ ಅನಿವಾಸಿ ಕವನ ಸ್ಪರ್ಧೆ ಯ ಪ್ರಶಸ್ತಿ ಪ್ರದಾನ ಮತ್ತು ಕವನ ಸಂಕಲನ ಬಿಡುಗಡೆ ಸಮಾರಂಭವು ದುಬಾಯಿಯ ಪ್ರೆಸಿಡೆಂಟ್‌ ಹೊಟೇಲಿನ ಸಭಾಗೃಹದಲ್ಲಿ ಕಿಕ್ಕಿರಿದು ಆಗಮಿಸಿದ ಜನಸ್ತೋಮದ ಮುಂದೆ ಸಂಭ್ರಮದಿಂದ ನೆರವೇರಿತು (ಜೂನ್‌ 18, 2004).

‘ತಾರೆ ಎಣಿಸಿ ಮೊತ್ತ ಹೇಳಿ...’ ಕವನ ಸಂಕಲನವನ್ನು ಯು.ಎ.ಇ.ಯ ಖ್ಯಾತ ಸಂಘಟಕ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಸರ್ವೋತ್ತಮ ಶೆಟ್ಟಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಧ್ವನಿ ಕವಿ ಶ್ರೇಷ್ಠ ಪ್ರಶಸ್ತಿಯನ್ನು ನೂಜಿಲ್ಯಾಂಡ್‌ ಕನ್ನಡತಿ ಮೃಣಾಲಿನಿ ಉದಯಕುಮಾರ್‌ ಅವರ ಪರವಾಗಿ ಅವರ ಸೋದರನಿಗೆ ಸರ್ವೋತ್ತಮ ಶೆಟ್ಟಿ ಪ್ರದಾನ ಮಾಡಿದರು.

ಯು.ಎ.ಇ.ಯಿಂದ ಜಾಗತಿಕ ಸ್ತರದಲ್ಲಿ ಕನ್ನಡ ಸಾಹಿತ್ಯ ಸ್ಪರ್ಧೆ ನಡೆಯುವುದು ಇದೇ ಮೊದಲು. ಯುವ ನಾಟಕಗಾರ ಹಾಗೂ ಕವಿ ಪ್ರಕಾಶ್‌ ರಾವ್‌ ಪಯ್ಯಾರು ಅವರು ಹನ್ನೊಂದು ದೇಶಗಳಲ್ಲಿ ವಾಸಿಸುತ್ತಿರುವ 39 ಕವಿಗಳ ಕವನಗಳನ್ನು ಒಂದೆಡೆ ಸೇರಿಸಿ ಪ್ರಕಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡನಾಡಿನಿಂದ ನಡೆಯಬೇಕಾದ ಈ ಕೆಲಸವನ್ನು ಧ್ವನಿ ಬಳಗವು ಕೊಲ್ಲಿ ರಾಷ್ಟ್ರದಲ್ಲಿ ನಡೆಸಿಕೊಟ್ಟು, ವಿಶ್ವ ಕನ್ನಡಿಗರೊಂದು ಮಾದರಿಯಾಗಿದೆ. ಇಂತಹ ಸ್ಪರ್ಧೆಗಳನ್ನು ವಿಶ್ವಾದಾದ್ಯಂತ ಪಸರಿಸಿರುವ ಕನ್ನಡ ಕೂಟ, ಸಾಂಸ್ಕೃತಿಕ ಸಂಘ ಸಂಸ್ಥೆಗಳು ಕಾಲ ಕಾಲಕ್ಕೆ ನಡೆಸುತ್ತ ಬಂದು, ಅನಿವಾಸಿ ಹವ್ಯಾಸಿ ಕವಿಗಳನ್ನು ಪ್ರೋತ್ಸಾಹಿಸಬೇಕು ಎಂದು ಸರ್ವೋತ್ತಮ ಶೆಟ್ಟಿ ಹೇಳಿದರು.

Sarvotthama Shetty releases Global Kannadigas Poetry collection Taare Enisi Motta Heli...ಧ್ವನಿ ಸಂಚಾಲಕ ಪ್ರಕಾಶ್‌ ರಾವ್‌ ಪಯ್ಯಾರು ಅವರು ಪ್ರತಿಯಾಬ್ಬ ಕವಿಯ ಭಾವಚಿತ್ರ, ವಿಳಾಸ ದೊಂದಿಗೆ ಕವನ ಸಂಕಲನ ಪ್ರಕಟಿಸಿ ಅಂತರರಾಷ್ಟ್ರೀಯ ನೆಲೆಯಲ್ಲಿ ಕನ್ನಡದ ಒಂದು ಮಹತ್ವ ಪೂರ್ಣ ಕೆಲಸ ಮಾಡಿದ್ದಾರೆ ಎಂದು ಸರ್ವೋತ್ತಮ ಶೆಟ್ಟಿ ಬಣ್ಣಿಸಿದರು.

ತುಳು, ಕನ್ನಡ ಸಂಘಟಕ ಸಿ.ಆರ್‌.ಶೆಟ್ಟಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಧ್ವನಿ ಬಳಗವು ಯು.ಎ.ಇ.ಯಲ್ಲಿ ಸಾಹಿತ್ಯಿಕ ಕೆಲಸಗಳನ್ನು ಹಮ್ಮಿಕೊಂಡು ಒಂದು ಹೊಸ ಅಲೆಯನ್ನು ಎಬ್ಬಿಸಿದೆ, ಹಾಗಾಗಿ ತುಳು ಮತ್ತು ಈಗಾಗಲೇ ಸಂಘಟಿತರಾಗಿರುವ ಕೊಂಕಣಿ ಲೇಖಕರ ಬಳಗ ಸೇರಿದಂತೆ ಕರ್ನಾಟಕದ ಎಲ್ಲ ಭಾಷೆಯ ಲೇಖಕರು ಒಂದೇಡೆ ಸೇರಬೇಕು ಎಂದು ಸಿ.ಆರ್‌.ಶೆಟ್ಟಿ ಹೇಳಿದರು.

ಪುಸ್ತಕ ಬಿಡುಗಡೆಯಂಥ ಸಮಾರಂಭಕ್ಕೆ ದುಬಾಯಿಯಲ್ಲಿ ನೂರೈವತ್ತಕ್ಕೂ ಹೆಚ್ಚು ಜನರು ಸೇರಿರುವುದು ದುಬಾಯಿಯ ಕನ್ನಡಿಗರ ಕನ್ನಡ ಸಾಹಿತ್ಯ ಪ್ರೇಮಕ್ಕೊಂದು ಪ್ರತ್ಯಕ್ಷ ಸಾಕ್ಷಿ ಯಾಗಿದೆ. ಹಾಗಾಗಿ ಇನ್ನೂ ಹೆಚ್ಚು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಶೆಟ್ಟಿ ಅಭಿಪ್ರಾಯಪಟ್ಟರು.

ಇನ್ನೊಬ್ಬ ಆತಿಥಿಗಳಾದ ಕೊಂಕಣಿಯ ಖ್ಯಾತ ಕವಿ ಮೆಲ್ವಿನ್‌ ರೊಡ್ರಿಗಸ್‌ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಕವನ ರಚನೆಗೆ ಬೇಕಾಗುವ ಪರಿಸರ ಹೇಗೆ ನಿರ್ಮಾಣವಾಗುತ್ತದೆ, ಮತ್ತು ಸ್ಫೂರ್ತಿ ಹೇಗೆ ದೊರೆಯುತ್ತದೆ ಹಾಗೂ ಕವಿತೆಗಳು ಹೇಗಿರಬೇಕು ಎಂದು ಸಂಕ್ಷಿಪ್ತವಾಗಿ ವಿವರಿಸಿದ ರೊಡ್ರಿಗಸ್‌- ಧ್ವನಿ ಇನ್ನು ಮುಂದೆಯೂ ಪ್ರತಿ ವರ್ಷ ಅಂತರರಾಷ್ಟ್ರೀಯ ಮಟ್ಟದ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲಿ ಎಂದು ಆಶಿಸಿದರು.

‘ತಾರೆ ಎಣಿಸಿ ಮೊತ್ತ ಹೇಳಿ..’ ಕವನ ಸಂಕಲವನ್ನು ಪರಿಚಯಿಸಿದ ಮನೋಹರ್‌ ತೋನ್ಸೆ , ‘ಇಲ್ಲಿರುವ ಹಲವಾರು ಕವನಗಳು ಮನದಾಳವನ್ನು ಕೆದಕುವ ಸಾಮರ್ಥ್ಯವನ್ನು ಹೊಂದಿವೆ, ಹೆಚ್ಚಿನ ಕವನಗಳಲ್ಲಿ ಅನ್ವೇಷಣ ಭಾವ, ಪರದೇಶದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಪ್ರಯತ್ನಗಳ ವಸ್ತುವನ್ನು ಕಾಣಬಹುದೆಂದು ಅಭಿಪ್ರಾಯ ಪಟ್ಟರು. ಒಟ್ಟಿನಲ್ಲಿ ಸಂಕಲನದಲ್ಲಿ ಪ್ರಕಟಗೊಂಡಿರುವ ಕವನಗಳನ್ನು ಪ್ರೇಮ ಕವನಗಳು ಮತ್ತು ಅನ್ವೇಷಣ ಪ್ರಜ್ಞೆಯ ಕವನಗಳೆಂದು ಎರಡು ವಿಭಾಗ ಮಾಡಬಹುದು. ಪ್ರೇಮ ಕವನಗಳು ಅಷ್ಟು ಗಟ್ಟಿಯಾಗಿ ನಿಲ್ಲುವುದಿಲ್ಲ , ಎರಡನೇ ವಿಧದ ಕವನಗಳು ಉತ್ತಮವಾಗಿ ಮೂಡಿ ಬಂದಿವೆ. ಪ್ರಥಮ ಬಹುಮಾನಿತ ‘ನೆರಳು’ ಕವನ, ತೃತೀಯ ಬಹುಮಾನಿತ ‘ಕಳೆದು ಹೋಗಿದ್ದಾನೆ’ ಈ ಸಾಲಿನಲ್ಲಿ ನಿಲ್ಲುತ್ತವೆ. ಒಟ್ಟಿನಲ್ಲಿ ಅನಿವಾಸಿ ಕವಿಗಳ ಪ್ರಯತ್ನ ಶ್ಲಾಘನೀಯವೆಂದು ತೋನ್ಸೆ ಹೇಳಿದರು.

ಸಮಾರಂಭದಲ್ಲಿ ಸಂಕಲನದ ಸಂಪಾದಕ ಪಯ್ಯಾರು ಅವರನ್ನು ಅವರ ಯು.ಎ.ಇ. ಅಭಿಮಾನಿಗಳು ಶಾಲು ಹೊದಿಸಿ, ಫಲಪುಷ್ಪಗಳನಿತ್ತು ಸನ್ಮಾನಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಪಯ್ಯಾರು- ಅನಿವಾಸಿ ಅಂತರರಾಷ್ಟ್ರೀಯ ಕವನ ಸ್ಪರ್ಧೆಯ ಎಲ್ಲ ಗೌರವವು ಯು.ಎ.ಇ. ಕನ್ನಡಿಗರಿಗೆ ಸಲ್ಲತಕ್ಕದೆಂದು ಹೇಳಿ ಸನ್ಮಾನಕ್ಕಾಗಿ ಋಣಿಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ರವಿರಾಜ ತಂತ್ರಿ ಹಾಗೂ ಸುಬ್ರಮಣ್ಯ ಭಟ್‌ರ ಭಾವಗೀತೆ, ವಿಜಯ ನರೋನ್ಹ ಅವರ ಸಂಗೀತವೂ ಇತ್ತು. ಅಂತರರಾಷ್ಟ್ರೀಯ ಅನಿವಾಸಿ ಕವನ ಸ್ಪರ್ಧೆಗೆ ತೀರ್ಪುಗಾರರಾಗಿದ್ದ ಡಾ.ಹೆಚ್‌.ಎಸ್‌.ವೆಂಕಟೇಶ್‌ ಮೂರ್ತಿ, ಎ.ಈಶ್ವರಯ್ಯ ಹಾಗೂ ಜಯಂತ ಕಾಯ್ಕಿಣಿ ಅವರ ಸಹಕಾರವನ್ನು ಸಭೆಯಲ್ಲಿ ಸ್ಮರಿಸಲಾಯಿತು.

ಶ್ರೀಮತಿ ಕೃಷ್ಣರಾಜ ತಂತ್ರಿಯವರ ಪ್ರಾರ್ಥನೆ, ಶ್ರೀಮತಿ ಕಸ್ತೂರಿ ಮೂಲೀಮನಿ ಸ್ವಾಗತ, ಸುಧಾಕರ ತುಂಬೆಯವರಿಂದ ಅತಿಥಿಗಳ ಪರಿಚಯ, ಅಶೋಕ್‌ ಅಂಚನ್‌ರ ವಂದನಾರ್ಪಣೆ, ವಿಠ್ಠಲ್‌ಶೆಟ್ಟಿ ಅವರ ನಿರ್ವಹಣೆ ಸಮರ್ಪಕವಾಗಿತ್ತು . ಅರ್ಥರ್‌ ಪಿರೇರ ಮತ್ತು ಪದ್ಮನಾಭ ಎಕ್ಕಾರು , ಜಯಾನಂದ ಕುಂದರ್‌ ಅವರು ರಂಗ ಪರಿಕರ ಗಳ ಜವಾಬ್ದಾರಿ ವಹಿಸಿದ್ದರು.


ಪೂರಕ ಓದಿಗೆ-
ಧ್ವನಿ ಶ್ರೇಷ್ಠರು ಹಾಗೂ ಅವರು ಹೆಕ್ಕಿ ತಂದ ಚುಕ್ಕಿಗಳು !


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X