ಯಾದಗಿರಿ; ಕಣ್ವ ಮಠಕ್ಕೆ ನೂತನ ಪೀಠಾಧಿಪತಿಗಳ ನೇಮಕ
ಯಾದಗಿರಿ, ಅಕ್ಟೋಬರ್ 17 : ಯಾದಗಿರಿ ಜಿಲ್ಲೆಯ ಕಣ್ವ ಮಠಕ್ಕೆ ನೂತನ ಪೀಠಾಧಿಪತಿಗಳನ್ನು ನೇಮಕ ಮಾಡಲಾಗಿದೆ. ಮಠದ ಪೀಠಾಧಿಪತಿಯಾಗಿದ್ದ ವಿದ್ಯಾವಾರಧಿ ತೀರ್ಥರು ಮಹಿಳೆ ಜೊತೆ ನಡೆಸಿದ ಮಾತುಕತೆ ವಿವರ ಬಹಿರಂಗವಾದ ಬಳಿಕ ಪೀಠ ತ್ಯಾಗ ಮಾಡಿದ್ದರು.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಣ್ವ ಮಠದ ಪೀಠಾಧಿಪತಿಯಾಗಿ ರವೀಂದ್ರಾಚಾರ್ಯ ಜೋಷಿ ಆಯ್ಕೆಯಾದರು. ಸುರಪುರ ಅರಮನೆಯಲ್ಲಿ ಸಂಸ್ಥಾನಿಕ ರಾಜಾ ಕೃಷ್ಣಪ್ಪ ನಾಯಕ ನೂತನ ಪೀಠಾಧಿಪತಿಗಳ ಹೆಸರು ಘೋಷಿಸಿದರು.
1796ರಲ್ಲಿ ರಾಜಾ ಇಮ್ಮಡಿ ವೆಂಕಟಪ್ಪ ನಾಯಕರ ರಾಜಾಶ್ರಯದಲ್ಲಿ ಕಣ್ವಮಠ ಸ್ಥಾಪನೆಯಾಗಿತ್ತು. ವಿದ್ಯಾವಾರಧಿ ತೀರ್ಥರು ಪೀಠ ತ್ಯಾಗಕ್ಕೆ ಮುಂದಾಗಿದ್ದರಿಂದ ನೂತನ ಪೀಠಾಧಿಕಾರಿ ನೇಮಕ ಜವಾಬ್ದಾರಿಯನ್ನು ರಾಜಾ ಕೃಷ್ಣಪ್ಪ ನಾಯಕ ಅವರಿಗೆ ವಹಿಸಲಾಗಿತ್ತು.

ಕೆಲವು ದಿನಗಳ ಹಿಂದೆ ನೂತನ ಪೀಠಾಧಿಪತಿ ಆಯ್ಕೆ ಬಗ್ಗೆ ಮಠದಲ್ಲಿ ಸಭೆ ನಡೆದಿತ್ತು. ಜಾತಕ, ಭವಿಷ್ಯ, ವೇದಾಧ್ಯಯನ, ಪಾಂಡಿತ್ಯ ಮುಂತಾದ ಅಂಶಗಳನ್ನು ಪರಿಗಣಿಸಿ ರವೀಂದ್ರಾಚಾರ್ಯ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
ನೂತನ ಪೀಠಾಧಿಪತಿಗಳ ಪೂರ್ಣ ಹೆಸರು ರವೀಂದ್ರಾಚಾರ್ಯ ನರಸಿಂಹಾಚಾರ್ಯ ಜೋಷಿ. ಪ್ರಸ್ತುತ ಬೆಂಗಳೂರಿನ ಯಶವಂತಪುರದ ಮಹಾಗಣಪತಿ ದೇವಸ್ಥಾನದ ಅರ್ಚಕರಾಗಿದ್ದಾರೆ.
ಪೀಠಾಧಿಪತಿಯಾಗಿದ್ದ ವಿದ್ಯಾವಾರಧಿ ತೀರ್ಥರು ಮಹಿಳೆ ಜೊತೆ ನಡೆಸಿದ ವಾಟ್ಸಪ್ ಚಾಟಿಂಗ್, ವಿಡಿಯೋ ಕಾಲ್ ವಿವರಗಳು ಬಹಿರಂಗವಾಗಿದ್ದವು. ಬಳಿಕ ಅವರು ಆರೋಪ ಮುಕ್ತರಾಗುವ ತನಕ ಪೀಠತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕಣ್ವ ಮಠಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖಾ ಮಠವಿದೆ. ಬೆಂಗಳೂರಿನ ಯಲಹಂಕದಲ್ಲಿ ಶಾಖಾ ಮಠವಿದೆ. ವಿದ್ಯಾವಾರಧಿ ತೀರ್ಥರು ಯಲಹಂಕದಲ್ಲಿ ಇರುವಾಗಲೇ ಅವರ ವಿರುದ್ಧ ಆರೋಪ ಕೇಳಿಬಂದಿತ್ತು.












Click it and Unblock the Notifications