ನೋಟೀಸ್ ಗೆ ಉತ್ತರ ಕೊಡದ ಯತ್ನಾಳ್ ಗೆ ನಳಿನ್ ಚಾಟಿ
ಯಾದಗಿರಿ, ಅಕ್ಟೋಬರ್ 17: ನೆರೆ ಪರಿಹಾರ ಬಿಡುಗಡೆಯಲ್ಲಿ ವಿಳಂಬವಾಗಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿದ್ದು, ಇದುವರೆಗೂ ಯತ್ನಾಳ್ ಇಂದ ಯಾವುದೇ ಉತ್ತರ ಬರದಿದ್ದಕ್ಕೆ ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಾದಗಿರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಮೇಲಿನ ಯಡಿಯೂರಪ್ಪ ಹಿಡಿತ ತಪ್ಪಿಸಲು ನಳಿನ್ ಕಟೀಲ್ ಯತ್ನ
ಯಾದಗಿರಿಯ ಸರ್ಕೀಟ್ ಹೌಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಪಕ್ಷಕ್ಕೆ ಅದರದ್ದೇ ಆದ ನೀತಿ, ಚೌಕಟ್ಟಿದೆ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಅವರು ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತ. ಬಿ ಫಾರ್ಮ್ ಪಡೆದ ಮೇಲೆ ಪಕ್ಷದ ನೀತಿ ನಿಯಮದ ಒಳಗೆ ಮಾತಾಡಬೇಕು. ಅದರಲ್ಲಿ ವ್ಯತ್ಯಾಸ ಆದರೆ ವಿವರಣೆ ಕೇಳುವುದು ಸಹಜ. ಅದಕ್ಕೆ ಉತ್ತರಿಸಬೇಕಾದ್ದು ಅವರ ಜವಾಬ್ದಾರಿ. ನಾನು ರಾಜ್ಯಾಧ್ಯಕ್ಷ ಆದರೂ ನನ್ನಿಂದ ತಪ್ಪಾದರೆ ನನ್ನನ್ನೂ ವಿವರಣೆ ಕೇಳುತ್ತಾರೆ. ವಿವರಣೆ ಕೊಡುವುದು ನನ್ನ ಜವಾಬ್ದಾರಿ. ಅದರಲ್ಲಿ ಸಮಸ್ಯೆಯಿದ್ದರೆ ಹಿರಿಯರ ಜೊತೆ ಮಾತಾಡೋಣ. ಅದರಲ್ಲಿ ತಪ್ಪೇನಿದೆ? ಉತ್ತರ ಕೊಡದೇ ಹೋದರೆ ಅದು ಅಹಂಕಾರ ಎನಿಸಿಕೊಳ್ಳುತ್ತದೆ. ಮುಂದೆ ಕ್ರಮ ಕೈಗಳ್ಳಲಾಗುತ್ತದೆ" ಎಂದು ಕಟುವಾಗಿ ನುಡಿದಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಯಡಿಯೂರಪ್ಪ ಹಾಗೂ ಕಟೀಲ್ ಬೆಂಬಲಿಗರ ನಡುವಿನ ಕಿತ್ತಾಟ ನಡೆದಿತ್ತು ಎನ್ನಲಾದ ವಿಷಯವಾಗಿ ಪ್ರಸ್ತಾಪಿಸಿದ ಅವರು, "ಆ ತರಹದ ಯಾವುದೇ ಘಟನೆಗಳು ನಡೆದಿಲ್ಲ. ಇವೆಲ್ಲ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅವಾಂತರ. ನನ್ನ ಮತ್ತೆ ಯಡಿಯೂರಪ್ಪ ಅವರ ನಡುವೆ ಸಣ್ಣ ಮನಸ್ತಾಪವೂ ಇಲ್ಲ. ನಾನು ಎಲ್ಲಾ ಮಾಹಿತಿಯನ್ನು ಅವರಿಂದಲೇ ಪಡೆದುಕೊಳ್ಳುತ್ತೇನೆ. ಈ ರಾಜ್ಯದ ಮಾರ್ಗದರ್ಶಕ, ರಾಜ್ಯದ ಸುಪ್ರೀಂ ಅವರೇ. ಅವರ ಮಾರ್ಗದರ್ಶನದಲ್ಲೇ ನಾನು ನಡೆಯುತ್ತಿದ್ದೇನೆ. ನಮ್ಮಿಬ್ಬರ ನಡುವೆ ಮನಸ್ತಾಪ ಇದೆ ಎನ್ನುವುದು ಸುಳ್ಳು ಸುದ್ದಿ" ಎಂದರು.
'ಯಡಿಯೂರಪ್ಪರನ್ನು ಇಳಿಸಲು ಬಿಜೆಪಿ ಸಂಸದರಿಂದಲೇ ಕುತಂತ್ರ'
ಇದೇ ಸಂದರ್ಭದಲ್ಲಿ ತಮ್ಮ ರಾಜ್ಯದ ಪ್ರವಾಸದ ಕುರಿತು ಅವರು ಮಾತನಾಡಿದರು. "ನನಗೆ ರಾಜ್ಯಾಧ್ಯಕ್ಷ ಜವಾಬ್ದಾರಿಯನ್ನು ನೀಡಿದ ಮೇಲೆ ಇಡೀ ರಾಜ್ಯದ ಪ್ರವಾಸ ಮಾಡುತ್ತಿದ್ದೇನೆ. ಮತಗಟ್ಟೆ ಸಮಿತಿ ರಚನೆ ಮಾಡಲು ಹಾಗೂ ಸದಸ್ಯತ್ವ ಅಭಿಯಾನಕ್ಕೆ ವೇಗ ಕೊಡುವುದಕ್ಕೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಬಂದಿದ್ದೇನೆ" ಎಂದಿದ್ದಾರೆ.