ಜಮೀನು, ಹೆಣ್ಣು; ವಿದ್ಯಾವಾರಧಿ ತೀರ್ಥರ ವಿರುದ್ಧ ವಿವಿಧ ಆರೋಪಗಳು
ಯಾದಗಿರಿ, ಸೆಪ್ಟೆಂಬರ್ 18 : "ಸಮಾಜದಲ್ಲಿ ಭಿನ್ನ ಭಿನ್ನವಾದ ವಿಚಾರಗಳನ್ನು ಹೊಂದಿರುವ ಮುನಷ್ಯರಿದ್ದರೂ ಭೇದಭಾವ ಹೋಗಲಾಡಿಸಿ ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುವವರೇ ನಿಜವಾದ ಮಹಾಗುರುಗಳು" ಐದು ದಿನಗಳ ಹಿಂದೆ ಕಣ್ವ ಮಠದ ವಿದ್ಯಾವಾರಧಿ ತೀರ್ಥರು ನೀಡಿದ ಹೇಳಿಕೆ ಇದು.
Recommended Video
ಯಾದಗಿರಿಯ ಪ್ರತಿಷ್ಠಿತ ಕಣ್ವ ಮಠದ ವಿದ್ಯಾವಾರಧಿ ತೀರ್ಥರು ಬುಧವಾರ ರಾಜ್ಯದ ಸುದ್ದಿ ಮಾಧ್ಯಗಳ ಕೇಂದ್ರಬಿಂದುವಾಗಿದ್ದಾರೆ. ಯಾದಗಿರಿಯ ಹುಣಸಿಹೊಳಿಯ ಕಣ್ವ ಮಠಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಶಾಖೆಗಳಿವೆ. ಬೆಂಗಳೂರಿನ ಯಲಹಂಕದಲ್ಲಿಯೂ ಶಾಖಾ ಮಠವಿದೆ.
ಕಣ್ವ ಮಠದ ವಿದ್ಯಾವಾರಧಿ ತೀರ್ಥರು ಮಹಿಳೆ ಜೊತೆ ಮಾಡಿದ್ದಾರೆ ಅನ್ನಲಾದ ಆಡಿಯೋ, ವಿಡಿಯೋ ಚಾಟಿಂಗ್ ಬಗ್ಗೆ ಬುಧವಾರ ಭಾರಿ ಚರ್ಚೆ ನಡೆಯುತ್ತಿದೆ. ಸ್ವಾಮೀಜಿಗಳು ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದಾರೆ ಎಂಬುದು ಆರೋಪ.
2014ರಲ್ಲಿ ಕಣ್ವ ಮಠದ ಪೀಠಾಧಿಪತಿಯಾಗಿ ವಿದ್ಯಾವಾರಧಿ ತೀರ್ಥರು ಪೀಠವೇರಿದ್ದರು. ಈಗ ಬಂದಿರುವ ಆರೋಪಗಳ ಹಿಂದೆ ಸ್ವಾಮೀಜಿಗಳಿಗೆ ಆಪ್ತರಾಗಿರುವವರು ಇದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ಯಲಹಂಕದ ಮಠದಲ್ಲಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.
ವಿದ್ಯಾವಾರಧಿ ತೀರ್ಥರ ಸುದ್ದಿ ಹೊರಬರುತ್ತಿದ್ದಂತೆ ಪ್ರತಿಭಟನೆಗಳು ನಡೆದಿವೆ. ಯಲಹಂಕದಲ್ಲಿರುವ ಶಾಖಾ ಮಠದಲ್ಲಿ ಕೆಲವು ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ಸ್ವಾಮೀಜಿಗಳ ಭಾವಚಿತ್ರಕ್ಕೆ ಮಸಿಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಬೀಗ ಜಡಿಯಲಾಗಿದೆ.

ಹನಿಟ್ರ್ಯಾಪ್ ಬಲೆಗೆ ಬಿದ್ದರು?
ವಿದ್ಯಾವಾರಧಿ ತೀರ್ಥರು ಹನಿಟ್ರ್ಯಾಪ್ ಬಲೆಗೆ ಬಿದ್ದರೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮಹಿಳೆ ಜೊತೆ ಸ್ವಾಮೀಜಿಗಳು ನಡೆಸಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆ, ಚಾಟ್, ವಿಡಿಯೋ ಕಾಲಿಂಗ್ ವಿವರ ಬಹಿರಂಗವಾಗಿದೆ. ಆದರೆ, ಮಹಿಳೆಯನ್ನು ನೇರವಾಗಿ ಭೇಟಿ ಮಾಡಿದ್ದಾರೆ ಎಂಬುದಕ್ಕೆ ಆಧಾರಗಳು ಇಲ್ಲ.

ದಾಖಲೆ ಇದೆ ಎಂದು ಹಣಕ್ಕೆ ಬೇಡಿಕೆ
ಮಹಿಳೆಯ ಗಂಡ ಎಂದು ಪರಿಚಯ ಮಾಡಿಕೊಂಡಿದ್ದ ವ್ಯಕ್ತಿ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದ. ನಿಮ್ಮಿಂದ ನನ್ನ ಸಂಸಾರ ಹಾಳಾಗಿದೆ. ಪರಿಹಾರ ಕೊಡಿ ಎಂದು 1 ಕೋಟಿ ರೂ.ಗೆ ಬೇಡಿಕೆ ಇಟ್ಟಿರುತ್ತಾನೆ. ಹಣ ಕೊಡದಿದ್ದರೆ ತನ್ನ ಬಳಿ ಇರುವ ಆಡಿಯೋ, ವಿಡಿಯೋ ಮುಂತಾದ ದಾಖಲೆ ಬಿಡುಗಡೆಗೊಳಿಸುವ ಬೆದರಿಕೆ ಹಾಕುತ್ತಾನೆ. ವಿದ್ಯಾವಾರಧಿ ತೀರ್ಥರು ಚಾರ್ತುಮಾಸ ಮುಗಿದ ಬಳಿಕ 50 ಲಕ್ಷ ನೀಡಲು ಒಪ್ಪಿಗೆ ಕೊಟ್ಟಿರುತ್ತಾರೆ ಎಂದು ತಿಳಿದುಬಂದಿದೆ.

ಸ್ವಾಮೀಜಿಗಳ ವಿರುದ್ಧ ಹಲವು ಆರೋಪಗಳು
ವಿದ್ಯಾವಾರಧಿ ತೀರ್ಥರ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿವೆ. ಪೂರ್ವಶ್ರಮದ ಕಾಲದಿಂದಲೂ ಅನೇಕ ಮಹಿಳೆಯರ ಜೊತೆ ಸ್ವಾಮೀಜಿಗೆ ಸಂಬಂಧವಿದೆ. ಮದುವೆಯಾಗಿದೆ, ಮಠದ ಹೆಸರಿನಲ್ಲಿದ್ದ ಆಸ್ತಿಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪಗಳು ಇವೆ.

ವಿದ್ಯಾವಾರಧಿ ತೀರ್ಥರ ಸ್ಪಷ್ಟನೆ
ವಿದ್ಯಾವಾರಧಿ ತೀರ್ಥರು ಸುದ್ದಿಗಳು ಪ್ರಕಟವಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಆರೋಪ ಎದುರಾಗಿರುವುದರಿಂದ ನೈತಿಕ ಹೊಣೆ ಹೊತ್ತು ಸ್ವ ಇಚ್ಛೆಯಿಂದ ಪೀಠತ್ಯಾಗ ಮಾಡುತ್ತೇನೆ. ಮಠದ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ತೀರ್ಮಾನ ಮಾಡುತ್ತೇನೆ. ಆರೋಪ ಮುಕ್ತನಾದ ಬಳಿಕ ಮತ್ತೆ ಪೀಠ ಏರಬೇಕೋ, ಬೇಡವೋ ಎಂದು ನಿರ್ಧಾರ ಮಾಡುತ್ತೇನೆ. ಅಲ್ಲಿಯ ತನಕ ಧ್ಯಾನದಲ್ಲಿರುತ್ತೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ.












Click it and Unblock the Notifications