ರೈತರ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿ: ಭಾರತಕ್ಕೆ ಅಮೆರಿಕ ಕಾಂಗ್ರೆಸ್ ಒತ್ತಾಯ
ವಾಷಿಂಗ್ಟನ್, ಫೆಬ್ರವರಿ 6: ಪ್ರಜಾಪ್ರಭುತ್ವದ ನಿಯಮಾವಳಿಗಳನ್ನು ಕಾಪಾಡುವ ಮತ್ತು ಪ್ರತಿಭಟನಾಕಾರರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಅವಕಾಶ ನೀಡುವುದು ಹಾಗೂ ಅಂತರ್ಜಾಲ ಸೌಲಭ್ಯಗಳನ್ನು ಮರಳಿ ಒದಗಿಸುವುದರ ಬಗ್ಗೆ ಭಾರತ ಸರ್ಕಾರ ಖಾತರಿವಹಿಸಬೇಕು ಎಂದು ಅಮೆರಿಕದ ಪ್ರತಿಷ್ಟಿತ ಕಾಂಗ್ರೆಸ್ಸನಲ್ ಇಂಡಿಯಾ ಕಾಕಸ್ ಆಗ್ರಹಿಸಿದೆ.
ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತು ರಿಪಬ್ಲಿಕನ್ ಪಕ್ಷದ ಇತರೆ ಸಹ ಅಧ್ಯಕ್ಷ ಸ್ಟೀವ್ ಛಾಬೋಟ್ ಮತ್ತು ಉಪಾಧ್ಯಕ್ಷ ರೋ ಖನ್ನಾ ಅವರೊಂದಿಗೆ ಸೇರಿ ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್ಜಿತ್ ಸಂಗ್ ಸಂಧು ಜತೆ ಸಭೆ ನಡೆಸಿರುವುದಾಗಿ ಕಾಂಗ್ರೆಸ್ಸನಲ್ ಇಂಡಿಯಾ ಕಾಕಸ್ನ (ಭಾರತೀಯ ಸಮಿತಿ) ಸಹ ಅಧ್ಯಕ್ಷ ಕಾಂಗ್ರೆಸ್ ಸಂಸದ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ.
ಭಾರತದ ವಿವಾದಾತ್ಮಕ ಕೃಷಿ ಕಾಯ್ದೆಗಳಿಗೆ ಅಮೆರಿಕ ಬೆಂಬಲ
ಅಮೆರಿಕದ ಜನಪ್ರತಿನಿಧಿ ಸಭೆಗಳಲ್ಲಿ ಇರುವ ವಿವಿಧ ದೇಶಗಳ ಕುರಿತಾದ ಸಮಿತಿಯಲ್ಲಿಯೇ ಅತಿ ದೊಡ್ಡದು ಎನಿಸಿರುವ ಭಾರತೀಯ ಸಮಿತಿಯ ಮೊದಲ ಸಭೆ ಇದಾಗಿದೆ.
'ಪ್ರತಿಭಟನಾ ಸ್ಥಳಗಳಲ್ಲಿ ಪ್ರಜಾಪ್ರಭುತ್ವದ ನಿಯಮಾವಳಿಗಳನ್ನು ಪಾಲಿಸುವುದನ್ನು ನೋಡಿಕೊಳ್ಳುವಂತೆ ಮತ್ತು ಪ್ರತಿಭಟನಾಕಾರರಿಗೆ ಶಾಂತಿಯುತ ಪ್ರದರ್ಶನ ನಡೆಸಲು ಅವಕಾಶ ಕಲ್ಪಿಸುವಂತೆ, ಅಂತರ್ಜಾಲ ಸೌಲಭ್ಯ ಒದಗಿಸಲು ಹಾಗೂ ಪತ್ರಕರ್ತರಿಗೆ ಅವಕಾಶ ಒದಗಿಸುವುದನ್ನು ಖಾತರಿಪಡಿಸಲು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಭಾರತದ ಎಲ್ಲ ಸ್ನೇಹಿತರೂ ಈ ಬಗ್ಗೆ ಉಭಯ ಪಕ್ಷಗಳು ಒಪ್ಪಂದಕ್ಕೆ ಬರಬಹುದು ಎಂಬ ಭರವಸೆ ಹೊಂದಿದ್ದಾರೆ' ಎಂದು ಶೆರ್ಮನ್ ತಿಳಿಸಿದ್ದಾರೆ.