ಭಯೋತ್ಪಾದನೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ: ಪಾಕ್ಗೆ ಯುಎಸ್, ಭಾರತ ಮನವಿ
ವಾಷಿಂಗ್ಟನ್, ಏಪ್ರಿಲ್ 12: ತನ್ನ ಹಿಡಿತದಲ್ಲಿರುವ ಯಾವುದೇ ಪ್ರದೇಶವನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ "ತಕ್ಷಣ ಕ್ರಮ" ತೆಗೆದುಕೊಳ್ಳುವಂತೆ ಭಾರತ ಮತ್ತು ಯುಎಸ್ ಪಾಕಿಸ್ತಾನಕ್ಕೆ ಮನವಿ ಮಾಡಿದೆ. ಹಾಗೆಯೇ 26/11 ಮುಂಬೈ ದಾಳಿ ಮತ್ತು ಪಠಾಣ್ಕೋಟ್ ದಾಳಿಯ ದುಷ್ಕರ್ಮಿಗಳನ್ನು ನ್ಯಾಯಾಂಗಕ್ಕೆ ತರಬೇಕು ಎಂದು ಕರೆ ನೀಡಿದೆ.
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಭಾಗವಹಿಸಿದ್ದ 2+2 ಸಚಿವರ ಸಭೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯ ಮೂಲಕ ಪಾಕಿಸ್ತಾನಕ್ಕೆ ಈ ಒತ್ತಾಯವನ್ನು ಮಾಡಲಾಗಿದೆ. ಇಮ್ರಾನ್ ಖಾನ್ ಪದಚ್ಯುತಿ ಬಳಿಕ ಪಾಕಿಸ್ತಾನದ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅಧಿಕಾರವನ್ನು ಸ್ವೀಕಾರ ಮಾಡಿದ ಒಂದು ದಿನದ ನಂತರ ಈ ಬೆಳವಣಿಗೆ ಕಂಡುಬಂದಿದೆ.
"ಪಾಕಿಸ್ತಾನವು ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶವನ್ನು ಭಯೋತ್ಪಾದಕ ದಾಳಿಗೆ ಬಳಸದಂತೆ ಖಚಿತಪಡಿಸಿಕೊಳ್ಳಲು ತಕ್ಷಣ, ನಿರಂತರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಂತ್ರಿಗಳು ಪಾಕಿಸ್ತಾನಕ್ಕೆ ಕರೆ ನೀಡಿದರು," ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕ ಗುಂಪುಗಳು ಮತ್ತು ವ್ಯಕ್ತಿಗಳ ವಿರುದ್ಧ ನಿರ್ಬಂಧಗಳು, ಸಂಶಯಸ್ತರ ಬಗ್ಗೆ ನಿರಂತರ ಮಾಹಿತಿ ವಿನಿಮಯ, ಹಿಂಸಾತ್ಮಕ ಮೂಲಭೂತವಾದವನ್ನು ಎದುರಿಸುವುದು, ಭಯೋತ್ಪಾದಕ ಉದ್ದೇಶಗಳಿಗಾಗಿ ಇಂಟರ್ನೆಟ್ ಬಳಕೆ ಮತ್ತು ಭಯೋತ್ಪಾದಕರ ಗಡಿಯಾಚೆಗಿನ ಚಲನೆಯನ್ನು ತಡೆಯಲು ಉಭಯ ರಾಷ್ಟ್ರದ ನಾಯಕರುಗಳು ಬದ್ಧರಾಗಿದ್ದಾರೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.
ಭಯೋತ್ಪಾದನೆ-ವಿರೋಧಿ ಸಂಸ್ಥೆ ಎಫ್ಎಟಿಎಫ್ ಶಿಫಾರಸುಗಳಿಗೆ ಅನುಗುಣವಾಗಿ ಎಲ್ಲಾ ದೇಶಗಳಿಂದ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮತ್ತು ಹಣ ವರ್ಗಾವಣೆ-ವಿರೋಧಿ ಕುರಿತು ಅಂತರರಾಷ್ಟ್ರೀಯ ಮಾನದಂಡಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಪಾಕಿಸ್ತಾನವು ಜೂನ್ 2018 ರಿಂದ ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ನ ಗ್ರೇ ಲಿಸ್ಟ್ನಲ್ಲಿದೆ. ಮನಿ ಲಾಂಡರಿಂಗ್ ಅನ್ನು ಪರಿಶೀಲಿಸಲು ವಿಫಲವಾಗಿದೆ. ಭಯೋತ್ಪಾದನೆಗೆ ಹಣಕಾಸು ಒದಗಿಸುತ್ತಿದೆ ಎಂಬ ಆರೋಪವನ್ನು ಪಾಕಿಸ್ತಾನ ಹೊತ್ತಿದೆ. ಅಂದಿನಿಂದ, ಎಫ್ಎಟಿಎಫ್ ಆದೇಶಗಳನ್ನು ಅನುಸರಿಸಲು ವಿಫಲವಾದ ಕಾರಣ ದೇಶವು ಆ ಪಟ್ಟಿಯಲ್ಲಿದೆ.

ಎಲ್ಲಾ ಭಯೋತ್ಪಾದಕ ಗುಂಪುಗಳ ನಿಷೇಧಕ್ಕೆ ಕರೆ
"ಯುಎನ್ಎಸ್ಸಿ 1267 ನಿರ್ಬಂಧಗಳ ಸಮಿತಿಯು ಅಲ್-ಖೈದಾ, ಐಎಸ್ಐಎಸ್/ದೇಶ್, ಲಷ್ಕರ್-ಎ-ತೈಬಾ (ಎಲ್ಇಟಿ), ಮತ್ತು ಜೈಷ್-ಎ-ಮೊಹಮ್ಮದ್ (ಜೆಎಂ) ನಂತಹ ಗುಂಪುಗಳನ್ನು ಒಳಗೊಂಡಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತ ಕ್ರಮಕ್ಕೆ ಅವರು ಕರೆ ನೀಡಿದರು," ಎಂದು ಜಂಟಿ ಹೇಳಿಕೆ ತಿಳಿಸಿದೆ.
2+2 ಸಚಿವರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜನಾಥ ಸಿಂಗ್ ಭಯೋತ್ಪಾದನೆ ನಿಗ್ರಹದ ವಿಷಯದ ಬಗ್ಗೆ ಮಾತನಾಡಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮ ನೆರೆಹೊರೆಯ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಗಿದೆ ಎಂದಿದ್ದಾರೆ.
"ಸಭೆಯ ಸಮಯದಲ್ಲಿ, ನಾವು ನಮ್ಮ ನೆರೆಹೊರೆಯವರ ಬಗ್ಗೆಯೂ ಚರ್ಚೆ ಮಾಡಿದ್ದೇವೆ. ಈ ಸಭೆಯಲ್ಲಿ, ನಾವು ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತನಾಡಿದ್ದೇವೆ ಮತ್ತು ಇದನ್ನು ಭಾರತದ ವಿರುದ್ಧ ಹೇಗೆ ಬಳಸಲಾಗಿದೆ ಎಂಬುದರ ಕುರಿತು ಮಾತನಾಡಿದ್ದೇವೆ," ಎಂದು ತಿಳಿಸಿದರು.
ಭಾರತ ಮತ್ತು ಯುಎಸ್ ಭಯೋತ್ಪಾದನೆ ನಿಗ್ರಹ ಮತ್ತು ಕಡಲ ಭದ್ರತೆಯಲ್ಲಿ ನಿಕಟ ಪಾಲುದಾರಿಕೆ ಹೊಂದಿದ್ದು, ಜಗತ್ತನ್ನು ಹೆಚ್ಚು ಸುರಕ್ಷಿತ ಸ್ಥಳವನ್ನಾಗಿ ಮಾಡಿದೆ ಎಂದು ಜೈಶಂಕರ್ ಹೇಳಿದರು. "ನಾವು ಅಫ್ಘಾನಿಸ್ತಾನ ಮತ್ತು ಸುತ್ತಮುತ್ತಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇವೆ ಎಂದು ಹೇಳಿದರು.
ಇನ್ನು ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ಪಾಕಿಸ್ತಾನದೊಂದಿಗೆ ಸಾಮಾನ್ಯ ನೆರೆಯ ಸಂಬಂಧಗಳನ್ನು ಬಯಸುವುದಾಗಿ ಭಾರತ ಹೇಳಿದೆ. ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ನಿರ್ಮಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಹೇಳಿದೆ.












Click it and Unblock the Notifications