'ವಿಜಯಪುರ ಚಲೋ'ಗೆ ಅನುಮತಿ ನಕಾರ, ಕರ್ಫ್ಯೂ ಜಾರಿ
ವಿಜಯಪುರ, ಜನವರಿ 09: ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಖಂಡಿಸಿ ಇಂದು ದಲಿತಪರ ಸಂಘಟನೆಗಳು ಮತ್ತು ಬಾಲಕಿ ಮೇಲಿನ ಅತ್ಯಾಚಾರ ವಿರೋಧಿ ವೇದಿಕೆ ಸದಸ್ಯರು ಮಂಗಳವಾರ ಕರೆ ನೀಡಿದ್ದ ವಿಜಯಪುರ ಚಲೋ ಗೆ ಪೊಲೀಸರಿಂದ ವಿಘ್ನ ಎದುರಾಗಿದೆ.
ವಿಜಯಪುರ ಚಲೋ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ವಿಜಯಪುರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ರಿಂದ ಬುಧವಾರ ಬೆಳಿಗ್ಗೆ 6ರವರೆಗೆ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ವಿಜಯಪುರದಲ್ಲಿ ಎರಡು ದಿನ ನಿಷೇಧಾಜ್ಞೆ ಹೇರಿಕೆ
ವಿಜಯಪುರ ಚಲೋ ಕರೆ ಹಿನ್ನೆಲೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹೋರಾಟದ ಮುಂಚೂಣಿಯಲ್ಲಿರುವ ಭಾಸ್ಕರ್ ಪ್ರಸಾದ್ ಮತ್ತು ನರಸಿಂಹಮೂರ್ತಿ ಅವರನ್ನು ಪೊಲೀಸರು ಸೋಮವಾರ ತಡರಾತ್ರಿ ತಮ್ಮ ವಶಕ್ಕೆ ಪಡೆದಿದ್ದಾರೆ.
ವಿಜಯಪುರದ ಪ್ರಮುಖ ವೃತ್ತಗಳು, ಬಸ್ ನಿಲ್ದಾಣ ಮತ್ತಿತರೆ ಕಡೆಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದು, ನಿಷೇಧಾಜ್ಞೆ ಬಗ್ಗೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದಾರೆ. ನಾಲ್ಕು ಜನಕ್ಕಿಂತಲೂ ಹೆಚ್ಚು ಜನ ಗುಂಪು ಸೇರಿದ ಕಡೆ ಗುಂಪು ಚದುರಿಸುವ ಕಾರ್ಯ ಮಾಡುತ್ತಿದ್ದಾರೆ.
ನಾಳೆ ಶಾಲಾ ಕಾಲೇಜುಗಳಿಗೆ ರಜೆ ನೀಡಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಕೆಬಿ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.