ಎಂ.ಬಿ.ಪಾಟೀಲರಿಗೆ ತಪ್ಪಿದ ಸಚಿವ ಸ್ಥಾನ: ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತ
ವಿಜಯಪುರ , ಜೂನ್.07 : ಡಾ. ಎಮ್.ಬಿ. ಪಾಟೀಲರಿಗೆ ಸಚಿವ ಸ್ಥಾನ ತಪ್ಪಿದ್ದನ್ನು ವಿರೋಧಿಸಿ ಇಂದು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ರಾಷ್ಟ್ರೀಯ ಬಸವಸೇನಾ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಡಾ. ರವಿಕುಮಾರ ಬಿರಾದಾರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಕಾರ್ಯಕರ್ತನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಯೂ ನಡೆಯಿತು. ಸ್ಥಳದಲ್ಲಿದ್ದ ಇತರ ಕಾರ್ಯಕರ್ತರು ಅವನನ್ನು ತಕ್ಷಣ ಈ ಅನಾಹುತದಿಂದ ತಪ್ಪಿಸಿದರು.
ಡಾ ರವಿಕುಮಾರ ಬಿರಾದಾರ ಮಾತನಾಡಿ, ಎಮ್ ಬಿ ಪಾಟೀಲರು ನೀರಾವರಿ ಕೆಲಸಗಳನ್ನು ಮಾಡಿ, ಇಡೀ ದೇಶದಲ್ಲೇ ನಂಬರ್ 1 ಸಚಿವಾರಾಗಿದ್ದರು. ಸ್ವತಃ ನರೇಂದ್ರ ಮೋದಿಯವರೇ ಅವರ ವಿರುದ್ಧ ಪ್ರಚಾರಕ್ಕೆ ಬಂದರೂ 30ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದರು.

ಆದರೆ ಅವರು ಬಸವಣ್ಣನವರ ತತ್ವ ಹಾಗೂ ಬಡ ಲಿಂಗಾಯತರ ಪರ ಹೋರಾಟ ಮಾಡಿದ್ದನ್ನೇ ನೆಪ ಮಾಡಿಕೊಂಡು ಅವರ ವಿರುದ್ಧ ಷಡ್ಯಂತ್ರ ಹೂಡಿ ಸಚಿವ ಸ್ಥಾನ ತಪ್ಪಿಸಿದ್ದಾರೆ.
ಅವರೊಬ್ಬ ಲಿಂಗಾಯತ ನಾಯಕರಾಗಿ ಬೆಳೆಯುತ್ತಿರುವುದನ್ನು ಸಹಿಸದೆ ಅವರ ವಿರೋಧಿಗಳು ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿರುವುದು ಮಾಧ್ಯಮದ ಮುಖಾಂತರ ತಿಳಿದು ಬಂದಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇಂಥವರಿಗೆ ತಕ್ಕ ಪಾಠ ಕಲಿಸಲಾಗುವುದು. ತತ್ ಕ್ಷಣ ಎಮ್ ಬಿ ಪಾಟೀಲರಿಗೆ ಸಚಿವ ಸ್ಥಾನ ಕಲ್ಪಿಸಬೇಕು. ಇಲ್ಲವಾದಲ್ಲಿ ಸಮಗ್ರ ಲಿಂಗಾಯತರು ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಶರಣೆ ಚಂದ್ರಕಲಾ ಗುಣದಾಳ, ಡಾ ಕಂಠೀರವ ಕುಲ್ಲೊಳ್ಳಿ ಮಾತನಾಡಿದರು.
ಪ್ರದೀಪ ತೊರವಿ, ಶಾಂತವೀರ ಥಾಲಭಾವಡಿ, ನೀಲಕಂಠ ಹಳ್ಳಿ, ನಿಂಗಪ್ಪ ಸಂಗಾಪುರ, ಜಿ ಬಿ ಸಾಲಕ್ಕಿ, ಜಗದೀಶ ಬಳೂತಿ, ಶರಣಗೌಡ ಬಿರಾದಾರ, ಚೌದರಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.












Click it and Unblock the Notifications