'ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ವಾಪಸ್, ಎಂ.ಬಿ.ಪಾಟೀಲ್ ಷಡ್ಯಂತ್ರ'
ಬಬಲೇಶ್ವರ (ವಿಜಯಪುರ ಜಿಲ್ಲೆ), ಜನವರಿ 8: ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬ ಚಳವಳಿ ನಡೆಸುತ್ತಿರುವವರಿಂದ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿ ಆಗುತ್ತಿದೆ ಎಂದು ಬಬಲೇಶ್ವರ ಬೃಹನ್ಮಠದ ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದಾರೆ.
ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ಕ್ಷೇತ್ರದಲ್ಲಿ ಆಯೋಜಿಸಿದ ಬೃಹತ್ ಸಮಾವೇಶಕ್ಕೆ ಅಡ್ಡಿ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಕಾರ್ಯಕ್ರಮಕ್ಕೆ ನೀಡಿದ್ದ ಪರವಾನಗಿ ಏಕಾಏಕಿ ಹಿಂಪಡೆಯಲಾಗಿದೆ. ಇದು ಸಚಿವ ಎಂ.ಬಿ.ಪಾಟೀಲರ ಷಡ್ಯಂತ್ರ ಎಂದು ಸ್ವಾಮೀಜಿ ಆರೋಪ ಮಾಡಿದ್ದಾರೆ.
ಜನವರಿ 9ರಂದು ಬಬಲೇಶ್ವರದಲ್ಲಿ ಹಾನಗಲ್ಲ ಕುಮಾರಸ್ವಾಮಿಗಳ ಜಯಂತಿ, ಪಂಚಾಚಾರ್ಯರ ಯುಗಮಾನೋತ್ಸವ ಹಾಗೂ ಬಸವ ಜಯಂತಿ ಆಯೋಜಿಸಲಾಗಿದೆ. ಪಂಚಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದು ಏಕಾಏಕಿ ಆಯೋಜಿಸಿದ ಕಾರ್ಯಕ್ರಮವಲ್ಲ. ಈಗ ಆಕ್ಷೇಪಣೆ ಮಾಡಿರುವ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಯಾವುದೇ ಅಡೆತಡೆ ಮಾಡಿಲ್ಲ ಎಂದರು.

ಇದೀಗ ರಾಜಕೀಯ ಪ್ರೇರಿತವಾಗಿ ತಡೆ ಮಾಡುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂದು ಹೋರಾಟದ ಮುಂಚೂಣಿಯಲ್ಲಿ ಇರುವವರು ಅಡ್ಡಿ ಪಡಿಸುತ್ತಿದ್ದಾರೆ. ಕಾನೂನಾತ್ಮಕವಾಗಿ ಅನುಮತಿ ಪಡೆದರೂ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಇದು ಧಾರ್ಮಿಕ ಕಾರ್ಯಕ್ರಮವಾದ್ದರಿಂದ ಜಿಲ್ಲಾಡಳಿತ ಕೂಡಲೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಅಂದಿನ ಕಾರ್ಯಕ್ರಮ ನಡೆದೇ ನಡೆಯುತ್ತದೆ. ಒಂದು ವೇಳೆ ಅಂದಿನ ಕಾರ್ಯಕ್ರಮದಲ್ಲಿ ಅನಾಹುತವಾದರೆ ಸಚಿವ ಎಂ.ಬಿ. ಪಾಟೀಲರೇ ಹೊಣೆಗಾರರು ಎಂದು ಸ್ವಾಮೀಜಿ ಹೇಳಿದರು.












Click it and Unblock the Notifications