ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿನ ವಿಶೇಷತೆಗಳು
ವಿಜಯಪುರ, ಫೆಬ್ರವರಿ 17 : " ವಿಜಯಪುರ ಜಿಲ್ಲೆಯ ಜನತೆಯ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದಂತಾಯಿತು. ವಿಜಯಪುರ ಮತ್ತು ಬಾಗಲಕೋಟೆಯ ಜನರಿಗೆ ರೈಲು ಸೇವೆಯಿಂದ ಸಹಾಯಕವಾಗಲಿದೆ" ಎಂದು ಸಂಸದ ರಮೇಶ್ ಜಿಗಜಿಣಗಿ ಹೇಳಿದರು.
ಸೋಮವಾರ ಸಂಸದರು ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿಗೆ ವಿಜಯಪುರ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ವಿಜುಗೌಡ ಪಾಟೀಲ, ಅಪ್ಪಾಸಾಹೇಬ ಪಟ್ಟಣಶಟ್ಟಿ ಸೇರಿದಂತೆ ವಿಜಯಪುರ ರೈಲು ನಿಲ್ದಾಣದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು, "ವಿಜಯಪುರ ಜಿಲ್ಲೆಯ ಜನತೆಯ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದಂತಾಯಿತು. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿದ್ದು ಅವುಗಳ ಬೆಳವಣಿಗೆ ಹಾಗೂ ಜನರಿಗೆ ಸಹಾಯಕವಾಗಲೆಂದು ರೈಲನ್ನು ಓಡಿಸಲಾಗುತ್ತಿದೆ" ಎಂದರು.
"ಜನರು ಸರಿಯಾದ ಸಮಯಕ್ಕೆ ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಬಾಗಲಕೋಟೆ, ಬಾದಾಮಿ, ಆಲಮಟ್ಟಿ ಹಾಗೂ ಗದಗ ಊರುಗಳಿಗೆ ಹೋಗಲು ಅನುಕೂಲವಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು" ಎಂದು ಕರೆ ನೀಡಿದರು.

ಧನ್ಯವಾದಗಳನ್ನು ಸಲ್ಲಿಸುತ್ತೇನೆ
"ಈ ರೈಲು ಪ್ರಾರಂಭವಾಗಿದ್ದು ನನಗೆ ತುಂಬಾ ಸಂತಸ ತಂದಿದೆ. ಇದಕ್ಕೆ ಸಹಕರಿಸಿದ ಮಾನ್ಯ ಪ್ರಧಾನಮಂತ್ರಿಗಳು ಹಾಗೂ ನೈಋತ್ಯ ರೈಲ್ವೆ ಅಧಿಕಾರಿಗಳು ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರಿಗೆ ಧನ್ಯವಾದ ಸಲ್ಲಿಸುತ್ತೆನೆ" ಎಂದು ರಮೇಶ್ ಜಿಗಜಿಣಗಿ ಹೇಳಿದರು.

ರೈಲಿನ ವಿವರಗಳು
ವಿಜಯಪುರ-ಹುಬ್ಬಳ್ಳಿ ಇಂಟರ್ ಸಿಟಿ ರೈಲಿಗೆ ಸೋಮವಾರ ಚಾಲನೆ ಸಿಕ್ಕಿದೆ. ಪ್ರತಿದಿನ ಈ ರೈಲು ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ. ಹಲವಾರು ವರ್ಷಗಳಿಂದ ಈ ರೈಲು ಸೇವೆ ಆರಂಭಿಸಬೇಕು ಎಂದು ಬೇಡಿಕೆ ಇತ್ತು. ರೈಲು 5 ದ್ವಿತಿಯ ದರ್ಜೆ ಸ್ಲೀಪರ್ ಬೋಗಿಗಳು, 7 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು ಮತ್ತು 2 ಲಗೇಜ್ ಕಮ್ ಬ್ರೇಕ್ವ್ಯಾನ್ಗಳನ್ನು ಹೊಂದಿದೆ.

ನಿಲ್ದಾಣಗಳ ವಿವರಗಳು
ವಿಜಯಪುರ-ಹುಬ್ಬಳ್ಳಿ ರೈಲು ವಿಜಯಪುರದಿಂದ ಹೊರಟು ಬಸವನಬಾಗೇವಾಡಿ ರೋಡ್, ಆಲಮಟ್ಟಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರ, ಮಲ್ಲಾಪುರ, ಗದಗದಲ್ಲಿ ನಿಲುಗಡೆಗೊಳ್ಳಲಿದ್ದು ಬಳಿಕ ಹುಬ್ಬಳ್ಳಿಗೆ ತಲುಪಲಿದೆ.

ವೇಳಾಪಟ್ಟಿ
ವಿಜಯಪುರದಿಂದ ಪ್ರತಿದಿನ ಬೆಳಗ್ಗೆ 5.30ಕ್ಕೆ ಹೊರಡುವ ರೈಲು 11.05ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹುಬ್ಬಳ್ಳಿಯಿಂದ ಸಂಜೆ 4.45ಕ್ಕೆ ಹೊರಡುವ ರೈಲು ರಾತ್ರಿ 11.40ಕ್ಕೆ ವಿಜಯಪುರ ತಲುಪಲಿದೆ.












Click it and Unblock the Notifications