ವಿಜಯಪುರ; ಮತ್ತೆ ಕಂಪಿಸಿದ ಭೂಮಿ, 3.2 ತೀವ್ರತೆ ದಾಖಲು
ವಿಜಯಪುರ, ಅಕ್ಟೋಬರ್ 14; ವಿಜಯಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಒಂದು ತಿಂಗಳ ಅವಧಿಯಲ್ಲಿ 7ನೇ ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ.
ಬಸವನಬಾಗೇವಾಡಿಯ ಮಗೂಳಿಯಲ್ಲಿ ಗುರುವಾರ ಸಂಜೆ 6.14ರ ಸುಮಾರಿಗೆ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಕಂಪನ ದಾಖಲಾಗಿದೆ. ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್ಸಿಎಸ್) ಭೂಮಿ ಕಂಪಿಸಿರುವುದನ್ನು ಖಚಿತಪಡಿಸಿದೆ.
ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದ್ದು ಜನರು ಆತಂಕಗೊಂಡಿದ್ದಾರೆ. ಆಕ್ಟೋಬರ್ 16ರಂದು ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಭೂಕಂಪನದ ಬಗ್ಗೆ ಪರೀಕ್ಷೆಗಳನ್ನು ನಡೆಸಲಿದ್ದಾರೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಸೆಪ್ಟೆಂಬರ್ 4ರ ಬಳಿಕ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿದೆ. ಒಟ್ಟು 7 ಬಾರಿ ಭೂಮಿ ಕಂಪಿಸಿದೆ. ಕೆಲವು ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ. ಕೆಲವು ಕಂಪನದ ತೀವ್ರತೆ ದಾಖಲಾಗಿದೆ.
ಭೂಮಿ ಕಂಪಿಸಿದ್ದರಿಂದ ಇದುವರೆಗೂ ಯಾರಿಗೂ ಅಪಾಯವಾಗಿಲ್ಲ. ಮನೆಯ ಕಿಟಕಿ ಗಾಜು ಒಡೆದ, ಪಾತ್ರೆಗಳು ನೆಲಕ್ಕುರುಳಿದ ಅನುಭವವಾಗಿದೆ. ಜಿಲ್ಲೆಯ ತಿಕೋಟ, ಬಸವನಬಾಗೇವಾಡಿ ಮುಂತಾದ ಪ್ರದೇಶದಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದೆ.
ಅಕ್ಟೋಬರ್ 1, 2, 3 ಮತ್ತು 7ರಂದು ಭೂಮಿ ಕಂಪಿಸಿದ ಅನುಭವವಾಗಿದೆ. ಒಮ್ಮೆ ರಿಕ್ಟರ್ ಮಾಪಕದಲ್ಲಿ 2.5ರ ತೀವ್ರತೆ ದಾಖಲಾಗಿತ್ತು. ಪದೇ ಪದೇ ಭೂಮಿ ಕಂಪಿಸುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಜನರು ಊರನ್ನು ಬಿಟ್ಟು ಹೋಗುವ ಚಿಂತನೆಯನ್ನು ನಡೆಸಿದ್ದಾರೆ.
ಕಲಬುರಗಿಯಲ್ಲೂ ಆತಂಕ; ವಿಜಯಪುರ ಹೊರತುಪಡಿಸಿದರೆ ಕಲಬುರಗಿ ಜಿಲ್ಲೆಯಲ್ಲಿಯೂ ಪದೇ-ಪದೇ ಭೂಕಂಪದ ಅನುಭವವಾಗುತ್ತಿದೆ. ಚಿಂಚೋಳಿ ಮತ್ತು ಕಾಳಗಿ ತಾಲೂಕಿನ ಗಡಿಕೇಶ್ವರ, ಹೊಸಳ್ಳಿ ಎಚ್. ತೇಗಲತಿಪ್ಪಿ, ಕೆರೂರು ಸೇರಿದಂತೆ 10 ಹಳ್ಳಿಗಳಲ್ಲಿ ಭೂಮಿ ಕಂಪಿಸಿದೆ.
ಕಲಬುರಗಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿಯ ತುರ್ತು ಸಭೆಯನ್ನು ನಡೆಸಿದ್ದಾರೆ. ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳಲ್ಲಿ ಭೂ ಕಂಪನದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಪತ್ತು ಸಂಭವಿಸಿದಲ್ಲಿ ಎದುರಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
"ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದು, ಅವರಿಗೆ ಅಧಿಕಾರಿಗಳು ಧೈರ್ಯ ತುಂಬುವ ಕೆಲಸ ಮಾಡಬೇಕು. ಅವಶ್ಯಕವಿರುವವರಿಗೆ ಸಾಮೂಹಿಕ ಶೆಡ್ಗಳ ನಿರ್ಮಾಣ ಮಾಡಬೇಕು. ಶೇಡ್ಗಳಲ್ಲಿ ಊಟ, ನೀರು, ಹಾಸಿಗೆ, ಬೆಡ್ಶೀಟ್ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡಬೇಕು" ಎಂದು ಹೇಳಿದ್ದಾರೆ.
ಸಮೀಕ್ಷೆಗೆ ಸೂಚನೆ; ಕಲಬುರಗಿ ಜಿಲ್ಲೆಯಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿರುವ ಗ್ರಾಮಗಳಲ್ಲಿನ ಮನೆಗಳ ಬಾಳಿಕೆ ಸಾಮರ್ಥ್ಯದ ಬಗ್ಗೆ ಸಮೀಕ್ಷೆ ಮಾಡಬೇಕು. ಗಟ್ಟಿಮುಟ್ಟಾಗಿರುವ ಮನೆಗಳಲ್ಲಿನ ಸುರಕ್ಷಿತ ಕೋಣೆಗಳನ್ನು ಗುರುತಿಸಬೇಕು. ಆ ಮನೆಯವರಿಗೆ ಇಂತಹ ಕೋಣೆಗಳಲ್ಲಿರಲು ಸಲಹೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಹಳ್ಳಿಗಳಲ್ಲಿ ಇರುವ ಸುರಕ್ಷಿತ ಸರ್ಕಾರಿ ಕಟ್ಟಡ, ಸಮುದಾಯ ಭವನ, ಶಾಲೆಗಳನ್ನು ಗುರುತಿಸಬೇಕು. ಈ ತಾಣಗಳಲ್ಲಿ ಜನರು ಇರಲು ತಿಳಿಸಬೇಕು. ಅಂಗವಿಕಲರು ಹಾಗೂ ಗರ್ಭಿಣಿ ಮಹಿಳೆಯರ ಪಟ್ಟಿ ಮಾಡಿ ಅವರನ್ನು ಸುರಕ್ಷಿತ ಸ್ಥಳಗಳಿಗೆ ಕಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಸಿದ್ದರಾಮಯ್ಯ ಭೇಟಿ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೂಕಂಪ ಪೀಡಿತ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಗಡಿಕೇಶ್ವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ಸಿದ್ದರಾಮಯ್ಯ ಸಭೆ ನಡೆಸುವಾಗಲೇ ಭೂಮಿ ಕಂಪಿಸಿತ್ತು. ಈ ಕುರಿತು ಅವರು ಟ್ವೀಟ್ ಮಾಡಿದ್ದರು.
'ಕಳೆದ ಒಂದು ವಾರದಿಂದ ಇಲ್ಲಿ ಭೂಕಂಪನವಾಗುತ್ತಿದೆ ಎಂದು ಗ್ರಾಮದ ಜನರು ಅಳಲು ತೋಡಿಕೊಂಡರು. ಈಗಾಗಲೇ ಭೂಕಂಪದಿಂದ ಅನೇಕ ಮನೆಗಳು ಕುಸಿದಿವೆ. ಜೀವಭಯದಿಂದ ಗ್ರಾಮಸ್ಥರು ಊರು ತೊರೆದು ನಿರಾಶ್ರಿತರಾಗಿದ್ದಾರೆ' ಎಂದು ಟ್ವೀಟ್ನಲ್ಲಿ ಹೇಳಿದ್ದರು.












Click it and Unblock the Notifications