ಗಂಗಾಧರ ಚಡಚಣ ಹತ್ಯೆ : ಮಹಾದೇವ ಸಾಹುಕಾರ ಜಾಮೀನು ಅರ್ಜಿ ವಜಾ
ವಿಜಯಪುರ, ಜುಲೈ 02 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಜಾಮೀನು ಅರ್ಜಿ ವಜಾಗೊಂಡಿದೆ. ನಿರೀಕ್ಷಣಾ ಜಾಮೀನು ವಜಾಗೊಂಡ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಆರೋಪಿ ಪೊಲೀಸರಿಗೆ ಶರಣಾಗಬೇಕಿದೆ.
ವಿಜಯಪುರ ಅಪರ ಜಿಲ್ಲಾ ವಿಶೇಷ ನ್ಯಾಯಾಲಯ ಸೋಮವಾರ ಮಹಾದೇವ ಸಾಹುಕಾರ (ಭೈರಗೊಂಡ) ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಜೂನ್ 14ರಂದು ಮಹಾದೇವ ಸಾಹುಕಾರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಗಂಗಾಧರ ಚಡಚಣ ಹತ್ಯೆ : ಮೂವರು ಆರೋಪಿಗಳು ಸಿಐಡಿ ವಶಕ್ಕೆ
ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಮಹಾದೇವ ಸಾಹುಕಾರ ಎ1 ಆರೋಪಿ. ಪ್ರಕರಣ ಬೆಳಕಿಗೆ ಬಂದ ಬಳಿಕ ಆತ ತಲೆಮರೆಸಿಕೊಂಡಿದ್ದಾನೆ. ಮಹಾರಾಷ್ಟ್ರದಲ್ಲಿ ಅಡಗಿದ್ದಾನೆ ಎಂಬ ಶಂಕೆ ಮೇರೆಗೆ ಎಸ್ಐಟಿ ಪೊಲೀಸರು ಅಲ್ಲಿಯೂ ಹುಡುಕಾಟ ನಡೆಸಿದ್ದರು.
9 ಆರೋಪಿಗಳಿಗೆ ನ್ಯಾಯಾಂಗ ಬಂಧನ : ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ 9 ಆರೋಪಿಗಳಿಗೆ ಜುಲೈ 12ರ ತನಕ ನ್ಯಾಯಾಂಗ ಬಂಧನವನ್ನು ವಿಧಿಸಿ ಇಂಡಿ ನ್ಯಾಯಾಲಯ ಆದೇಶ ನೀಡಿದೆ. ಪ್ರತಿ ಆರೋಪಿಯನ್ನು ಅರ್ಧ ಗಂಟೆಗಳ ಕಾಲ ವಿಜಯಪುರ ಜೈಲಿನಲ್ಲಿ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿದೆ.
ಗಂಗಾಧರ ಚಡಚಣ ಹತ್ಯೆಯಲ್ಲಿ ಮತ್ತಷ್ಟು ಪೊಲೀಸರು ಭಾಗಿ?
ಗಂಗಾಧರ ಚಡಚಣ ಹತ್ಯೆ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಲಾಗಿದೆ. ಸಿಐಡಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.
ರೌಡಿ ಶೀಟರ್ ಧರ್ಮರಾಜ್ ಚಡಚಣ 2017ರ ಅ.30ರಂದು ತೋಟದ ಮನೆಯಲ್ಲಿ ನಡೆದ ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ. ಈ ಎನ್ಕೌಂಟರ್ ಬಳಿಕ ಸಹೋದರ ಗಂಗಾಧರ ಚಡಚಣನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ಆತ ನಾಪತ್ತೆಯಾಗಿದ್ದ, ಈಗ ಆತ ಹತ್ಯೆಯಾಗಿದ್ದಾನೆ ಎಂದು ತಿಳಿದುಬಂದಿದೆ.