ಧರ್ಮರಾಜ್ ಚಡಚಣ ಎನ್ಕೌಂಟರ್ ತನಿಖೆ ಆರಂಭಿಸಿದ ಸಿಐಡಿ
ವಿಜಯಪುರ, ಆಗಸ್ಟ್ 01 : ಸಿಐಡಿ ಶಾರ್ಪ್ ಶೂಟರ್ ಧರ್ಮರಾಜ್ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ ಆರಂಭಿಸಿದೆ. ವಿಜಯಪುರ ಪೊಲೀಸರ ಮನವಿಯಂತೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ.
ಧರ್ಮರಾಜ್ ಚಡಚಣ ಎನ್ಕೌಂಟರ್ ಬಗ್ಗೆ ತನಿಖೆ ಆರಂಭಿಸಿರುವ ಸಿಐಡಿ ಪೊಲೀಸರು ಮಹಾದೇವ ಭೈರಗೊಂಡ, ಪಿಎಸ್ಐ ಗೋಪಾಲ ಹಳ್ಳೂರ ಮತ್ತು ಶಿವಾನಂದ ಬಿರಾದಾರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಮಹಾದೇವ ಭೈರಗೊಂಡ, ಪಿಎಸ್ಐ ಗೋಪಾಲ ಹಳ್ಳೂರ ಮತ್ತು ಶಿವಾನಂದ ಬಿರಾದಾರ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಜೈಲಿನಲ್ಲಿದ್ದರು. ಇಂಡಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಎಲ್ಲರನ್ನು ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
40 ಪ್ರಕರಣದಲ್ಲಿ ಬೇಕಾಗಿದ್ದ : ಕೊಲೆ, ಬೆದರಿಕೆ, ಅಪಹರಣ, ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಸೇರಿದಂತೆ 40 ಪ್ರಕರಣದಲ್ಲಿ ಧರ್ಮರಾಜ್ ಚಡಚಣ ಪೊಲೀಸರಿಗೆ ಬೇಕಾಗಿದ್ದ. 2017ರ ಅಕ್ಟೋಬರ್ 30ರಂದು ವಿಜಯಪುರದ ಕೊಂಕಣಗಾಂವ್ ಬಳಿ ಪೊಲೀಸರು ಮನೆಯೊಂದರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದ ಮೇಲೆ ದಾಳಿ ಮಾಡಿದ್ದರು.
ಆಗ ಮನೆಯಿಂದ ಪೊಲೀಸರ ಮೇಲೆ ಗುಂಡು ಹಾರಿಸಲಾಗಿತ್ತು. ಮನೆಯಲ್ಲಿ ಧರ್ಮರಾಜ್ ಚಡಚಣ ಅಡಗಿ ಕುಳಿತಿರುವುದು ಪೊಲೀಸರಿಗೆ ತಿಳಿಯಿತು. ಶರಣಾಗುವಂತೆ ಪೊಲೀಸರು ಮಾಡಿದ ಮನವಿಯನ್ನು ತಿರಸ್ಕರಿಸಿದ ಆತ ಗುಂಡು ಹಾರಿಸಿದ್ದ.
ಆಗ ಚಡಚಣ ಠಾಣೆಯ ಅಂದಿನ ಪಿಎಸ್ಐ ಗೋಪಾಲ ಹಳ್ಳೂರ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಗಾಯಗೊಂಡ ಧರ್ಮರಾಜ್ ಚಡಚಣನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದ.
ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು, ಧರ್ಮರಾಜ್ ಚಡಚಣ ಎನ್ಕೌಂಟರ್ ತನಿಖೆಯನ್ನು ಸಿಐಡಿಗೆ ವಹಿಸಬೇಕು ಎಂದು ಮನವಿ ಮಾಡಿದ್ದರು. ಈಗ ಸಿಐಡಿ ತನಿಖೆ ಆರಂಭಿಸಿದೆ.












Click it and Unblock the Notifications