ಚಿನ್ನದಾಸೆಗಾಗಿ ಮಹಿಳೆಯ ಹತ್ಯೆ; ದುಬೈನಲ್ಲಿದ್ದಾಕೆ ಊರಿಗೆ ಬಂದು ಹೆಣವಾಗಿದ್ದೇ ದುರಂತ
ಉಡುಪಿ, ಜುಲೈ 13: ಚಿನ್ನದ ಆಸೆಗೆ ಫ್ಲ್ಯಾಟ್ನಲ್ಲಿದ್ದ ಒಂಟಿ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿ ಆರೋಪಿ ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.
ವಿಶಾಲ ಗಾಣಿಗ (35) ಮೃತ ಮಹಿಳೆಯಾಗಿದ್ದು, ಬ್ರಹ್ಮಾವರದ ಕುಂಬ್ರಗೋಡು ಬಳಿ ಘಟನೆ ನಡೆದಿದೆ. ವಯರ್ ಮತ್ತು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆರೋಪಿ ಪತ್ತೆಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ನಾಲ್ಕು ತಂಡಗಳ ರಚನೆ ಮಾಡಲಾಗಿದೆ.
ವಿಶಾಲ ಗಾಣಿಗ ಪತಿ ದುಬೈನಲ್ಲಿ ಕಂಪೆನಿಯೊಂದರ ಮ್ಯಾನೇಜರ್ ಆಗಿ ದುಡಿಯುತ್ತಿದ್ದು, ಗಂಡ ಮತ್ತು ಮಗಳೊಂದಿಗೆ ವಿಶಾಲ ಗಾಣಿಗ ದುಬೈನಲ್ಲೇ ವಾಸಿಸುತ್ತಿದ್ದರು. ಆದರೆ ಮನೆಯ ಆಸ್ತಿ ವ್ಯವಹಾರ ಸಂಬಂಧ ಸಹಿ ಹಾಕುವ ಸಲುವಾಗಿ, ಜೂನ್ 30ರಂದು ಮಗಳು ಆರ್ವಿಯೊಂದಿಗೆ ದುಬೈನಿಂದ ತವರಿಗೆ ಬಂದಿದ್ದರು. ಕುಂದಾಪುರದ ಗುಜ್ಜಾಡಿಯಲ್ಲಿ ಮನೆ ಇದ್ದರೂ ಕೆಲ ದಿನಗಳ ಕಾಲ ಬ್ರಹ್ಮಾವರದ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದರು.

ಜುಲೈ 13ರಂದು ಮಗಳು ಆರ್ವಿ ಹುಟ್ಟು ಹಬ್ಬವನ್ನು ಬ್ರಹ್ಮಾವರದ ಫ್ಲಾಟ್ನಲ್ಲೇ ಆಚರಿಸಲು ತಯಾರಿ ಮಾಡಿದ್ದರು. ಇದಕ್ಕಾಗಿ ವಿಶಾಲ ಕೇಕ್ ಕೂಡಾ ಬುಕ್ ಮಾಡಿದ್ದರು.
ಇದಕ್ಕೂ ಮುನ್ನ ಸೋಮವಾರ ಬೆಳಿಗ್ಗೆ ಜೊತೆಗಿದ್ದ ಮೂವರನ್ನೂ ಕುಂದಾಪುರದ ಗುಜ್ಜಾಡಿಯಲ್ಲಿರುವ ಮನೆಗೆ ಬಿಟ್ಟು, ಬ್ಯಾಂಕ್ ಕೆಲಸ ಇದೆ ಎಂದು ಮತ್ತೆ ಬ್ರಹ್ಮಾವರಕ್ಕೆ ವಾಪಾಸಾಗಿದ್ದರು. ಕುಂದಾಪುರದಿಂದ ಬ್ರಹ್ಮಾವರದ ತನಕ ಒಟ್ಟು 75 ಕಿ.ಮೀ ದೂರ ರಿಕ್ಷಾದಲ್ಲೇ ಪ್ರಯಾಣಿಸಿದ್ದರು. ಬಳಿಕ ಬ್ರಹ್ಮಾವರದ ಬ್ಯಾಂಕ್ಗೂ ಹೋಗಿದ್ದರು. ಇದಾದ ನಂತರ ವಿಶಾಲ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮನೆಯವರು ಕರೆ ಮಾಡಿದರೂ ವಿಶಾಲ ಕರೆ ಸ್ವೀಕರಿಸುತ್ತಿರಲಿಲ್ಲ.

ಗಾಬರಿಗೊಂಡ ವಿಶಾಲ ತಂದೆ ರಾತ್ರಿ ಮನೆಗೆ ಬಂದು ನೋಡಿದಾಗ, ಕೇಬಲ್ನಿಂದ ಕತ್ತು ಹಿಸುಕಿ ಸತ್ತ ಸ್ಥಿತಿಯಲ್ಲಿ ವಿಶಾಲ ಶವ ಪತ್ತೆಯಾಗಿದೆ. ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಾಣೆಯಾಗಿದ್ದು, ಮೇಲ್ನೋಟಕ್ಕೆ ಚಿನ್ನಕ್ಕಾಗಿಯೇ ಕೊಲೆ ನಡೆದಿದೆ ಎಂಬ ಸಂಶಯ ವ್ಯಕ್ತಪಡಿಸಲಾಗಿದೆ.
ಇತ್ತೀಚೆಗಷ್ಟೇ ಆಸ್ತಿ ವ್ಯವಹಾರ ಮುಗಿದಿದ್ದರಿಂದ ವಿಶಾಲ ಬಳಿ ಸಾಕಷ್ಟು ಹಣ, ಆಭರಣ ಇರಬಹುದು ಎಂಬ ಮಾಹಿತಿ ಇರುವ ಆರೋಪಿ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಅಪಾರ್ಟ್ಮೆಂಟ್ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ಓರ್ವ ಆರೋಪಿ ಹಣ, ಚಿನ್ನಾಭರಣದೊಂದಿಗೆ ಹೊರ ಹೋಗಿರುವುದು ಗೊತ್ತಾಗಿದೆ.

ಕುಂದಾಪುರದಿಂದ ಬ್ರಹ್ಮಾವರದ ತನಕ ಒಟ್ಟು 75 ಕಿ.ಮೀ ಅಟೋದಲ್ಲಿ ಪ್ರಯಾಣ ನಡೆಸಿದ್ದರಿಂದ ಈ ವೇಳೆ ವ್ಯವಹಾರದ ಬಗ್ಗೆ ಈಕೆ ಕುಟುಂಬದವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸಾಯುವ ಕೆಲವೇ ಗಂಟೆಗಳ ಮೊದಲು ಗಂಡನಿಗೆ ಮೆಸೇಜ್ ಮಾಡಿ ಮಗಳ ಹೆಸರಲ್ಲಿ ಕೇಕ್ ಬುಕ್ ಮಾಡಿರುವುದಾಗಿಯೂ ವಿಶಾಲ ಹೇಳಿದ್ದಾರೆ. ಆದರೆ ಮಗಳ ಕೇಕ್ ಕಟ್ ಮಾಡುವ ಹೊತ್ತಲ್ಲಿ ತಾಯಿಯ ಪೋಸ್ಟ್ ಮಾರ್ಟಂ ಆಗುತ್ತಿರುವುದು ಮಾತ್ರ ದುರಂತವಾಗಿದೆ.












Click it and Unblock the Notifications