ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಮತ್ತೆ ಕಂಟಕ?
ಉಡುಪಿ, ನವೆಂಬರ್ 23: ನವೆಂಬರ್ ಮುಗಿಯುತ್ತಾ ಬಂದಂತೆ ಕರಾವಳಿಯ ಕಂಬಳ ಪ್ರಿಯರಿಗೆ ಎಲ್ಲಿಲ್ಲದ ಸಂಭ್ರಮ. ಕಾರಣ, ನವೆಂಬರ್ ಕೊನೆಗೊಳ್ಳುತ್ತಿದ್ದಂತೆ ಕಂಬಳದ ಸೀಸನ್ ಆರಂಭವಾದಂತೆ.
ಕರಾವಳಿಯ ಜನಪದ ಕ್ರೀಡೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ನಂತರ ಕಳೆದ ವರ್ಷ ಕಂಬಳದ ಜಾತ್ರೆ ಸುಸೂತ್ರವಾಗಿ ನಡೆದಿತ್ತು. ಆದರೆ ಈ ಕಂಬಳಗಳಲ್ಲಿ ನಡೆದ ಲೋಪದೋಷಗಳನ್ನೇ ಮುಂದಿಟ್ಟುಕೊಂಡು ಮತ್ತೆ ಪೇಟಾ ಸುಪ್ರೀಂ ಕೋರ್ಟ್ ಮೊರೆ ಹೋಗಿರುವುದು ಕಂಬಳಪ್ರಿಯರನ್ನು ಕಂಗೆಡಿಸಿದೆ.

ಕಂಬಳಕ್ಕೆ ಕರಾಳಛಾಯೆ
ಕರಾವಳಿಯಲ್ಲಿ ಹಲವು ತಲೆಮಾರುಗಳಿಂದ ನಡೆಯುತ್ತಿದ್ದ ಕಂಬಳಕ್ಕೆ ಕಳೆದ ಕೆಲವು ವರ್ಷಗಳಿಂದ ಕರಾಳಛಾಯೆ ವ್ಯಾಪಿಸಿದೆ. ಪ್ರಾಣಿದಯಾ ಸಂಘ 'ಪೇಟಾ, ಕಂಬಳದಲ್ಲಿ ನಡೆಯುವ ಕೋಣಗಳ ಮೇಲಿನ ಹಿಂಸೆಯನ್ನು ಮುಂದಿಟ್ಟುಕೊಂಡು ಕಾನೂನು ಹೋರಾಟ ಆರಂಭಿಸಿದ್ದೇ ಇದಕ್ಕೆ ಕಾರಣ. ನಂತರದ ವರ್ಷಗಳಲ್ಲಿ ಕಂಬಳದ ವೇಗಕ್ಕೆ ಬ್ರೇಕ್ ಬಿದ್ದಿದ್ದು ನಿಜ. ಒಂದು ವರ್ಷ ಕಂಬಳ ನಡೆದರೆ, ಮತ್ತೊಂದು ವರ್ಷ ನಡೆಯುತ್ತಿರಲಿಲ್ಲ.

ಕಳೆದ ವರ್ಷ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಕೋರ್ಟ್
ಕಳೆದ ವರ್ಷ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ನಿಯಮಾವಳಿಗಳ ಅನುಸಾರ ಕಂಬಳ ನಡೆದಿತ್ತು. ಆದರೆ ಕೆಲವೊಂದು ಕಂಬಳಗಳಲ್ಲಿ ನಡೆದ ನಿಯಮಬಾಹಿರ ವರ್ತನೆಯನ್ನೇ ಮುಂದಿಟ್ಟುಕೊಂಡು ಪೇಟಾದವರು ಈ ಬಾರಿ ಮತ್ತೊಮ್ಮೆ ತಡೆಯಾಜ್ಞೆ ತರಲು ಮುಂದಾಗಿದ್ದಾರೆ. ಕಳೆದ ವರ್ಷ ನಡೆದ ಕಂಬಳಗಳ ಪೈಕಿ ಕೆಲವೆಡೆ ನಿಯಮಬಾಹಿರವಾಗಿ ವರ್ತಿಸಲಾಗಿದೆ. ಕೋಣಗಳ ಮೇಲೆ ಹಿಂಸೆ ನಡೆದಿದೆ ಎಂದು ಪೇಟಾದವರು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದು ಕಂಬಳ ಪ್ರೇಮಿಗಳ ಆತಂಕಕ್ಕೆ ಕಾರಣವಾಗಿದೆ.

ಕಂಬಳಕ್ಕೆ ನಿಯಮಾವಳಿಗಳು
ಕಂಬಳ ನಡೆಸಲು ಅನೇಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಕೋಣಗಳಿಗೆ ಹೊಡೆಯುವಂತಿಲ್ಲ, ಕೋಣಗಳ ಓಟಕ್ಕೆ ಬೆತ್ತ ಹಿಡಿಯುವಂತಿಲ್ಲ, ಮೂಗಿಗೆ ಹಗ್ಗ ಹಾಕಬಾರದು, ನೂರು ಮೀಟರ್ ಗಿಂತ ಹೆಚ್ಚು ಕೋಣಗಳನ್ನು ಓಡಿಸುವಂತಿಲ್ಲ ಇತ್ಯಾದಿ ನಿಯಮಗಳಿವೆ. ಕಂಬಳ ನಡೆಸುವವರು ಈ ನಿಯಮಗಳು ಎಲ್ಲಿಯೂ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು.

ಕೋಣಗಳ ಮಾಲೀಕರಿಗೆ ಮಾಹಿತಿ ಕೊರತೆ
ಕೋಣಗಳ ಮಾಲೀಕರಿಗೆ ಈ ಎಲ್ಲಾ ಮಾಹಿತಿಗಳ ಕೊರತೆಯಿಂದ ಕಳೆದ ಬಾರಿ ಕಂಬಳ ನಡೆದಾಗ ಕೆಲವೊಂದು ಸಣ್ಣಪುಟ್ಟ ದೋಷಗಳು ಆಗಿರುವುದು ನಿಜ. ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಪೇಟಾ, ಮತ್ತೊಮ್ಮೆ ತಡೆಯಾಜ್ಞೆ ಕೋರಿ ಸುಪ್ರೀಂ ಮೊರೆ ಹೋಗಿದೆ. ಸದ್ಯ ಈ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಯಾವಾಗ ವಿಚಾರಣೆ ಆರಂಭವಾಗುತ್ತದೋ ಗೊತ್ತಿಲ್ಲ. ಹೀಗಾಗಿ ನವೆಂಬರ್ ಅಂತ್ಯಕ್ಕೆ ಆರಂಭವಾಗಬೇಕಿದ್ದ ಕಂಬಳದ ಮೇಲೆ ಮತ್ತೊಮ್ಮೆ ಕರಿಛಾಯೆ ಆವರಿಸಿದಂತಾಗಿದೆ.












Click it and Unblock the Notifications