ಕರಾವಳಿಯ ಚೂಡಿಪೂಜೆ ಬಗ್ಗೆ ತಿಳಿಯಿರಿ
ಉಡುಪಿ, ಆಗಸ್ಟ್ 14 : ಪ್ರಕೃತಿ ನಮಗೆ ಸಾಕಷ್ಟನ್ನು ನೀಡುತ್ತದೆ. ಅದಕ್ಕೆ ಪ್ರತಿಯಾಗಿ ನಾವು ಪ್ರಕೃತಿಯನ್ನು ಸ್ಮರಿಸುವ ಕೆಲಸ ಮಾಡುವುದಿಲ್ಲ. ಆದರೆ, ಕರಾವಳಿಯ ಗೌಡ ಸಾರಸ್ವತ ಬ್ರಾಹ್ಮಣರು ಶ್ರಾವಣದಲ್ಲಿ ಚೂಡಿಪೂಜೆ ಮಾಡುವ ಮೂಲಕ ಪ್ರಕೃತಿಯನ್ನು ನೆನೆಯುತ್ತಾರೆ. ಶ್ರಾವಣ ಮಾಸದ ಶುಕ್ರವಾರ ಮತ್ತು ಭಾನುವಾರ ಈ ಪೂಜೆಯನ್ನು ನಡೆಸಲಾಗುತ್ತದೆ.
ಶ್ರಾವಣ ಮಾಸ ಬಂತೆಂದರೆ ಸಾಕು ಕರಾವಳಿಯ ಗೌಡ ಸಾರಸ್ವತ ಕುಟುಂಬಗಳಲ್ಲಿ ಚೂಡಿ ಪೂಜೆ ದೃಶ್ಯ ಸರ್ವೇ ಸಾಮಾನ್ಯ. ಮುತ್ತೈದೆಯರು ತುಳಸಿ ಕಟ್ಟೆ ಬಳಿ ಸಾಮೂಹಿಕವಾಗಿ ಚೂಡಿ ಪೂಜೆ ನಡೆಸುವುದು ಪದ್ಧತಿ.
ಪ್ರಕೃತಿಯಲ್ಲಿ ಹೇರಳವಾಗಿ ಸಿಗುವ ಕರವೀರ, ಅಗತೆ ಹೂವು, ಮಿಠಾಯಿ ಹೂವು, ನೆಲನೆಲ್ಲಿ, ಅನ್ವಾಲಿ, ರಥ ಹೂ, ಗಂಟಿ ಗಿಡ, ಕಾಗೆ ಕಣ್ಣು, ಶಂಕಪುಷ್ಪ, ರತ್ನ ಗಂಧಿ ಮತ್ತು ಗರಿಕೆಗಳನ್ನು ಸುಂದರವಾಗಿ ಜೋಡಿಸಿ 'ಚೂಡಿ"ಮಾಡಿ ಅದನ್ನು ಬಾಳೆಯ ನಾರಲ್ಲಿ ಕಟ್ಟಲಾಗುತ್ತದೆ.
ಬಳಿಕ ತುಳಸಿ ಕಟ್ಟೆ ಮುಂದೆ ಇರಿಸಿ ಪ್ರದಕ್ಷಿಣೆ ಹಾಕಿ ಅಕ್ಷತೆ ಹಾಕಲಾಗುತ್ತದೆ. ಮುತ್ತೈದೆಯರು ತುಳಸಿಗೆ ಈ ಪೂಜೆ ಸಲ್ಲಿಸುವುದರಿಂದ ಗಂಡಂದಿರಿಗೆ ಮತ್ತು ಮಕ್ಕಳಿಗೆ ಒಳ್ಳೆಯದಾಗುತ್ತದೆ ಎಂಬುದು ಹಿಂದಿನಿಂದಲೂ ನಡೆದುಕೊಂಡು ಬಂದ ನಂಬಿಕೆಯಾಗಿದೆ.

ಪತಿಯ ಆರೋಗ್ಯ ಚೆನ್ನಾಗಿರಲಿ. ದಾಂಪತ್ಯ ಚೆನ್ನಾಗಿರಲಿ ಎಂಬ ಉದ್ದೇಶಕ್ಕೆ ಈ ಪೂಜೆ ಮಾಡಲಾಗುತ್ತದೆ. ಇದರ ಹಿಂದೆ ಪ್ರಕೃತಿಯನ್ನು ನೆನೆಯುವ ಕಲ್ಪನೆಯೂ ಅಡಗಿದೆ. ಸರಸ್ವತಿ ನದೀ ತೀರದಲ್ಲಿ ಹಿಂದೆ ಇದ್ದ ವಂಶ ಗೌಡ ಸಾರಸ್ವತ ಎಂದೂ, ಈ ವಂಶ ಕಾಡಿನಲ್ಲಿ ಬದುಕುತ್ತಿತ್ತೆಂದೂ, ಶೃಂಗಾರ ಪ್ರಿಯರಾದ ಇವರು ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ದೊರೆತ ಹೂಗಳನ್ನು ಚೂಡಿ ಕಟ್ಟಿ ಪೂಜಿಸುತ್ತಿದ್ದರು ಎಂಬುದು ಇತಿಹಾಸ.
ಈ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದ್ದು, ಕೆಲವೆಡೆ ದೇವಸ್ಥಾನಗಳಲ್ಲಿ ಪೂಜೆಯ ವ್ಯವಸ್ಥೆ ಮಾಡಿದರೆ, ಕೆಲವು ಮನೆಗಳಲ್ಲಿ ಮುತ್ತೈದೆಯರು ಸಾಮೂಹಿಕವಾಗಿ ಚೂಡಿ ಪೂಜೆ ಮಾಡುತ್ತಾರೆ.
ಗೌಡ ಸಾರಸ್ವತರಲ್ಲದೆ ವಿಶ್ವಕರ್ಮರಲ್ಲಿ ಮತ್ತು ದೈವಜ್ಞರಲ್ಲೂ ಈ ಪದ್ಧತಿ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಪ್ರಕೃತಿಯನ್ನು ಸ್ಮರಿಸುವ ಈ ವಿಶಿಷ್ಟ ಪೂಜೆ ಈಗಲೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ.












Click it and Unblock the Notifications