ತಮಿಳುನಾಡಿನಲ್ಲಿ sslc ಪರೀಕ್ಷೆ ರದ್ದು; ಸುರೇಶ್ ಕುಮಾರ್ ಹೇಳಿದ್ದೇನು?
ಉಡುಪಿ, ಜೂನ್ 09: ಕೊರೊನಾ ವೈರಸ್ ಭೀತಿ ಹೆಚ್ಚಿರುವ ಕಾರಣ ತಮಿಳುನಾಡಿನಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ, ಪರೀಕ್ಷೆ ಬರೆಯದೇ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡುವಂತೆ ಶಾಲೆಗಳಿಗೆ ತಮಿಳುನಾಡು ರಾಜ್ಯ ಶಿಕ್ಷಣ ಇಲಾಖೆ ಸೂಚಿಸಿದೆ.
Recommended Video
ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, "ತಮಿಳು ನಾಡಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಲಾಗಿದೆ. ನಾವು ಪರೀಕ್ಷೆ ರದ್ದು ಮಾಡುವ ಸ್ಥಿತಿಯಲ್ಲಿಲ್ಲ. ನಾವು ಬಹಳ ಮುಂದೆ ಹೋಗಿದ್ದೇವೆ. ನಾವು ಅವರನ್ನು ಫಾಲೋ ಮಾಡಲ್ಲ" ಎಂದು ತಿಳಿಸಿದ್ದಾರೆ.


"ಮಕ್ಕಳಲ್ಲಿ ಅನಗತ್ಯ ಗೊಂದಲ ಸೃಷ್ಟಿ ಬೇಡ"
ಇಂದು ಉಡುಪಿಯಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹಂಚಿಕೊಂಡರು. "ನಾವು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡುವುದಿಲ್ಲ. ಮಕ್ಕಳ ಆರೋಗ್ಯಕ್ಕೆ ಆದ್ಯತೆ ಕೊಟ್ಟು ಎಚ್ಚರಿಕೆ ಕ್ರಮ ವಹಿಸಿ ಪರೀಕ್ಷೆ ನಡೆಸುತ್ತೇವೆ. ಅವರು ನಮ್ಮನ್ನು ಅನುಸರಿಸಬೇಕು. ಕೇಂದ್ರ ಸಚಿವಾಲಯದ ಜೊತೆ ಈಗಾಗಲೇ ಚರ್ಚೆ ಆಗಿದೆ. ಮಕ್ಕಳ ಮನಸ್ಸಲ್ಲಿ ಅನಗತ್ಯ ಗೊಂದಲ ಸೃಷ್ಟಿ ಬೇಡ" ಎಂದು ತಿಳಿಸಿದ್ದಾರೆ.

ಆನ್ ಲೈನ್ ಶಿಕ್ಷಣದ ಕುರಿತು ನಾಳೆ ವಿಸ್ತೃತ ಸಭೆ
ಇದೇ ಸಂದರ್ಭ ಮಕ್ಕಳಿಗೆ ಆನ್ ಲೈನ್ ಶಿಕ್ಷಣದ ಕುರಿತೂ ಮಾಹಿತಿ ಹಂಚಿಕೊಂಡ ಅವರು "ಎಲ್ ಕೆಜಿ, ಯುಕೆಜಿಗೆ ಆನ್ ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒಳಿತಲ್ಲ. ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ಶಿಕ್ಷಕರ, ಪೋಷಕರ ಮೇಲೆ ಒತ್ತಡ ತರುತ್ತದೆ. ನಾಳೆ ಮತ್ತೆ ಸಭೆ ಮಾಡುತ್ತೇವೆ. ನೆನ್ನೆಯ ಸಭೆ ಅಪೂರ್ಣ ಆಗಿದೆ. ನಿಮಾನ್ಸ್ ಮಕ್ಕಳ ಸೈಕಾಲಜಿಸ್ಟ್ ನಾಳಿನ ಸಭೆಯಲ್ಲಿ ಇರುತ್ತಾರೆ. ನಾಳೆ ವಿಸ್ತ್ರತ ಚರ್ಚೆ ಆಗಿ ತೀರ್ಮಾನ ಮಾಡ್ತೇವೆ" ಎಂದು ತಿಳಿಸಿದರು.

"ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ"
ಕೊರೊನಾ ವೈರಸ್ ದೀರ್ಘ ಕಾಲದ ಪರಿಣಾಮ ಬೀರಿದೆ. ಶಿಕ್ಷಣ ಇಲಾಖೆ ಮೇಲೆ ಅತಿ ದೊಡ್ಡ ಪರಿಣಾಮ ಆಗಿದೆ. ಆನ್ ಲೈನ್ ಶಿಕ್ಷಣಕ್ಕೆ ಹಾಗೂ ಶಾಲಾ ಆರಂಭದ ಕುರಿತಂತೆ ನಾಳೆಯಿಂದ ಪೋಷಕರ ಅಭಿಪ್ರಾಯ ಸಂಗ್ರಹ ನಡೆಯುತ್ತದೆ. ಮೂರು ಪ್ರಶ್ನೆ ಹೊತ್ತು ಅಭಿಪ್ರಾಯ ಸಂಗ್ರಹ ಆಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ನಿರ್ದೇಶನದಂತೆ ಈ ಕೆಲಸಗಳು ನಡೆಯುತ್ತವೆ ಎಂದು ತಿಳಿಸಿದರು.

"ಪೋಷಕರ ಅಭಿಪ್ರಾಯ ಮುಖ್ಯ"
ಯಾವಾಗ ಶಾಲೆ ಪ್ರಾರಂಭ ಆಗಬೇಕು?, ಶಾಲೆಗಳನ್ನು ಹೇಗೆ ನಡೆಸಬೇಕು? ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಕುರಿತು ಪೋಷಕರ ಮನಸ್ಸಿನಲ್ಲಿ ಏನಿದೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತೇವೆ. ನಾಳೆಯಿಂದ ಪ್ರಜಾಸತ್ತಾತ್ಮಕ ರೀತಿಯಲ್ಲಿ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications