ಇಂದು ಉಡುಪಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಮತ ಬೇಟೆ: ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ವಿವರ
ಉಡುಪಿ, ಏಪ್ರಿಲ್ 29: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು(ಏಪ್ರಿಲ್ 29)ರಂದು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಉಡುಪಿ ಆಗಮಿಸಲಿದ್ದು, ಕಾಪು ವಿಧಾನಸಭಾ ಕ್ಷೇತ್ರದ ಕಟಪಾಡಿಯಲ್ಲಿ ಬಿಜೆಪಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಕಟಪಾಡಿ ಸಮೀಪದ ಗ್ರೀನ್ವ್ಯಾಲಿ ಮೈದಾನದಲ್ಲಿ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಅಮಿತ್ ಶಾ ಉಡುಪಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸುವ ಸಾಧ್ಯತೆ ಇದೆ.

ಕಟಪಾಡಿಯಲ್ಲಿ ಕಾರ್ಯಕ್ರಮ ಮುಗಿಸಿದ ಬಳಿಕ ಅಮಿತ್ ಶಾ ಹೆಲಿಕಾಪ್ಟರ್ನಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರಕ್ಕೆ ಬರಲಿದ್ದು, ಸಂಜೆ 4 ಗಂಟೆಗೆ ರೋಡ್ ಶೋ ನಡೆಸಿ ಸಿದ್ದಾಪುರ ಸರ್ಕಲ್ನಲ್ಲಿ ತೆರೆದ ವಾಹನದಲ್ಲೇ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವೇಳೆ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.
ಉಡುಪಿ ಜಿಲ್ಲೆಯಲ್ಲಿ ಅಮಿತ್ ಶಾ ಕಾರ್ಯಕ್ರಗಳ ವಿವರ
ಅಭ್ಯರ್ಥಿಗಳ ಪಟ್ಟಿ ಅಂತಿಮವಾದ ಬಳಿಕ ಮೊದಲ ಬಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉಡುಪಿಗೆ ನಾಳೆ ಭೇಟಿ ನೀಡಿಲಿದ್ದಾರೆ. ಮಧ್ಯಾಹ್ನ 2:20ರ ಸುಮಾರಿಗೆ ಆದಿ ಉಡುಪಿ ಹೆಲಿಪ್ಯಾಡ್ಗೆ ಆಗಮಿಸಲಿರುವ ಅಮಿತ್ ಶಾ, 2:30 ರಿಂದ 3:15 ರವರೆಗೆ ಕಟಪಾಡಿಯಲ್ಲಿ ಅಮಿತ್ ಶಾ ಸಾರ್ವಜನಿಕ ಸಭೆ ಭಾಗಿಯಾಗಲಿದ್ದಾರೆ.
ಕಾಪು ಕ್ಷೇತ್ರದ ಕಟಪಾಡಿಯ ಗ್ರೀನ್ ವ್ಯಾಲಿ ಮೈದಾನದಲ್ಲಿ ಚುನಾವಣಾ ಪ್ರಚಾರ ಸಮಾವೇಶ ಆಯೋಜಿಸಲಾಗಿದ್ದು, ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಪರ ಅಮಿತ ಶಾ ಪ್ರಚಾರ ಮಾಡಲಿದ್ದಾರೆ. ಸಮಾವೇಶದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರ ಜೊತೆಗೆ ಜಿಲ್ಲಾ ಬಿಜೆಪಿ ಮುಖಂಡರು, ಹಿರಿಯ ನಾಯಕರು ಭಾಗಿಯಾಗಲಿದ್ದಾರೆ.
ಕಟಪಾಡಿ ಸಭೆಯ ಬಳಿಕ ಅಮಿತ್ ಶಾ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 3:30ಕ್ಕೆ ಹೆಲಿಕಾಪ್ಟರ್ ಬೈಂದೂರುಗೆ ಆಗಮಿಸಲಿರುವ ಅಮಿತ್ ಶಾ ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರದಲ್ಲಿ ಬೃಹತ್ ರೋಡ್ ಶೋ ನಲ್ಲಿ ಭಾಗಿಯಾಗಲಿದ್ದಾರೆ. 4 ಗಂಟೆಗೆ ರೋಡ್ ಶೋ ನಿಗದಿಯಾಗಿದ್ದು, ಬಳಿಕ ಸಿದ್ದಾಪುರ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ಧೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ.
ಸಂಜೆ 4:15 ರಿಂದ 4:45 ರವರೆಗೆ ನಡೆಯುವ ಬಹಿರಂಗ ಸಭೆ ಮೂಲಕ ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಅಮಿತ್ ಶಾ ಪ್ರಚಾರ ಮಾಡಲಿದ್ದಾರೆ. ಬಳಿಕ ಸಂಜೆ 4:55 ಕ್ಕೆ ಹೆಲಿಕಾಪ್ಟರ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಲಿದ್ದಾರೆ. ಬಿಜೆಪಿ, ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಸಿದ್ಧಾಪುರದಲ್ಲಿ 10 ಸಾವಿರಕ್ಕೂ ಅಧಿಕ ಜನರನ್ನು ಸೇರುವ ನಿರೀಕ್ಷೆ ಇದೆ.
ಉಡುಪಿ ಕಾರ್ಯಕ್ರಮ ಬಳಿಕ ಮಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಆಗಮಿಸುವ ಅವರು ಮೇರಿಹಿಲ್ ಹೆಲಿಕಾಪ್ಟರ್ ನಿಂದ ರಸ್ತೆ ಮಾರ್ಗವಾಗಿ ಪುರಭವನದ ಕಡೆಗೆ ಆಗಮಿಸಲಿದ್ದಾರೆ. ಸಂಜೆ 5.40 ರಿಂದ 6.40ರವರೆಗೆ ಪುರಭವನದಿಂದ ನವಭಾರತ ಸರ್ಕಲ್ವರೆಗೆ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ 6.50 ಕ್ಕೆ ಓಶಿಯನ್ ಪರ್ಲ್ ಹೋಟೆಲ್ಗೆ ಆಗಮಿಸಲಿದ್ದಾರೆ. ಅಲ್ಲಿ ಸಂಜೆ 7-8 ರವರೆಗೆ ಬಿಜೆಪಿ ಪಕ್ಷದ ಆಂತರಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯೇ ಭೋಜನ ಸವಿದು ಬಳಿಕ 8.45ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.












Click it and Unblock the Notifications